Site icon Vistara News

ತನ್ನ ಅಜ್ಜನಿಗಾದ ಸ್ಥಿತಿ ಯಾರಿಗೂ ಆಗಬಾರದು ಎಂದು ರಸ್ತೆ ಗುಂಡಿಗಳನ್ನೆಲ್ಲ ಏಕಾಂಗಿಯಾಗಿ ಮುಚ್ಚಿದ 13ವರ್ಷದ ಬಾಲಕ

A boy Repairs Pothole After his Grandfather get Accident In Puducherry

ಪುದುಚೇರಿ: ರಸ್ತೆ ಗುಂಡಿ ಎಂಬುದು ಜಾಗತಿಕ ಸಮಸ್ಯೆ. ಭಾರತದಲ್ಲಂತೂ ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿನಗರಗಳಲ್ಲೂ ಒಂದಲ್ಲ ಒಂದು ಕಡೆ ಗುಂಡಿ ಬಿದ್ದ ರಸ್ತೆ (Pothole)ಯನ್ನು ನೋಡಿಯೇ ನೋಡುತ್ತೇವೆ. ಹೀಗೆ ಪುದುಚೇರಿಯಲ್ಲೂ ಕೂಡ ರಸ್ತೆಯಲ್ಲಿ ಗುಂಡಿ ಬಿದ್ದು, ಆ ಗುಂಡಿಯ ಕಾರಣಕ್ಕೆ ಹಿರಿಯ ನಾಗರಿಕರೊಬ್ಬರು ಬೈಕ್​​ನಿಂದ ಬಿದ್ದು ಏಟು ಮಾಡಿಕೊಂಡಿದ್ದಾರೆ. ಇಷ್ಟೇ ಆದರೆ ಅದು ದೊಡ್ಡ ಸುದ್ದಿ ಎಂದು ಹಲವರಿಗೆ ಅನ್ನಿಸಲಿಕ್ಕಿಲ್ಲ, ಆದರೆ ಆ ವಯಸ್ಸಾದ ನಾಗರಿಕ ರಸ್ತೆ ಗುಂಡಿಯಲ್ಲಿ ಬೈಕ್​​ನಿಂದ ಬಿದ್ದ ನಂತರ ಅವರ ಮೊಮ್ಮಗ ಮಾಡಿದ ಕೆಲಸವೀಗ ಸಖತ್​ ಸುದ್ದಿಯಾಗಿದೆ ಮತ್ತು ಆ ಹುಡುಗ ಮಾದರಿ ಎನ್ನಿಸಿದ್ದಾನೆ.

ಬಾಲಕನ ಹೆಸರು ಮಸೀಲ್​ಮಣಿ. ಈತ ಪುದುಚೇರಿಯ ಸೆಂಧಂತ್ ಏರಿಯಾದ ನಿವಾಸಿ. ಆತನ ಅಜ್ಜ ರೈತರು. ಇತ್ತೀಚೆಗೆ ಸ್ಕೂಟರ್​​ನಲ್ಲಿ ಪುದುಚೇರಿ-ಪತುಕನ್ನು ಮಾರ್ಗದಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಯ ಕಾರಣಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದರು. ಅದನ್ನು ನೋಡಿ ಮಸೀಲ್​ಮಣಿ ತುಂಬ ನೊಂದುಕೊಂಡಿದ್ದ. ತನ್ನ ಅಜ್ಜನಿಗಾದ ಸ್ಥಿತಿ ಇನ್ಯಾರಿಗೂ ಬರಬಾರದು. ಯಾರೂ ಅಪಘಾತಕ್ಕೀಡಾಗಬಾರದು ಎಂಬ ಕಾರಣಕ್ಕೆ, ಆತ ಬಿದ್ದ ಗುಂಡಿಗೆ ಸಿಮೆಂಟ್​ ತುಂಬಲು ನಿರ್ಧರಿಸಿ, ಅದನ್ನು ಒಬ್ಬನೇ ಕಾರ್ಯಗತಗೊಳಿಸಿದ. ಅಷ್ಟೇ ಅಲ್ಲ, ಅಲ್ಲೇ ಅಕ್ಕಪಕ್ಕದಲ್ಲಿದ್ದ ಎಲ್ಲ ಗುಂಡಿಗಳನ್ನೂ ಒಬ್ಬನೇ ಮುಚ್ಚಿದ್ದಾನೆ.

ಇದನ್ನೂ ಓದಿ: ಇಂಜಿನಿಯರ್​​ ಪಾಲಿಗೆ ಸಾವಿನ ಕೂಪವಾದ ರಸ್ತೆ ಗುಂಡಿ; ನಿಯಂತ್ರಣ ತಪ್ಪಿ ಬಿದ್ದ ಯುವತಿ ಮೇಲೆ ಟ್ರಕ್​ ಹರಿದು ದುರ್ಮರಣ

ಈ ಹುಡುಗ ಮೊದಲು ತನ್ನ ಹಳ್ಳಿಯಲ್ಲೆಲ್ಲ ಅಡ್ಡಾಡಿದ. ಒಂದೊಂದು ಕಡೆಗೂ ಬಿದ್ದಿದ್ದ ಮರಳು, ಜಲ್ಲಿಕಲ್ಲು ಅವನಿಗೆ ಸಿಕ್ಕವು. ಸಿಮೆಂಟ್​ ಆ ಹುಡುಗನ ಮನೆಯೇ ಇತ್ತು. ಬೇಕಾದ ವಸ್ತುಗಳನ್ನೆಲ್ಲ ಸಂಗ್ರಹಿಸಿ, ಪುದುಚೇರಿ-ಪತುಕನ್ನು ರಸ್ತೆಯಲ್ಲಿ ಬಿದ್ದಿದ್ದ ಎಲ್ಲ ಗುಂಡಿಗಳನ್ನೂ ಮುಚ್ಚಿದ್ದಾನೆ. ಅವನ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ನೆರೆಹೊರೆಯವರೆಲ್ಲ ಸೇರಿ ಬಾಲಕನಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಇನ್ನು ಮಾಜಿ ಶಾಸಕ ವಯ್ಯಾಪುರಿ ಮಣಿಕ್​ನಂದನ್​ ಅವರು ಒಂದು ಪುಸ್ತಕವನ್ನು ಕೊಟ್ಟು ಅಭಿನಂದಿಸಿದ್ದಾರೆ

ದೇಶ ಮಟ್ಟದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Exit mobile version