Site icon Vistara News

Hate Speech | ಕ್ರಮ ತೆಗೆದುಕೊಳ್ಳಿ, ಇಲ್ಲ ನ್ಯಾಯಾಂಗ ನಿಂದನೆ ಎದುರಿಸಿ, ದ್ವೇಷ ಭಾಷಣ ಕುರಿತು ಸುಪ್ರೀಂ ಗರಂ

Supreme Court

ನವದೆಹಲಿ: ದೇಶದಲ್ಲಿ ದಿನೇದಿನೆ ದ್ವೇಷ ಭಾಷಣ (Hate Speech) ಮಾಡುವವರು ಹಾಗೂ ದ್ವೇಷ ಭಾಷಣ ಕುರಿತು ದಾಖಲಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. “ದ್ವೇಷ ಭಾಷಣ ಕುರಿತು ದಾಖಲಾದ ಕೇಸ್‌ಗಳ ಸಮಗ್ರ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ, ನ್ಯಾಯಾಂಗ ನಿಂದನೆ ಎದುರಿಸಿ” ಎಂದು ದೇಶದ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದೆ.

ದೇಶಾದ್ಯಂತ ದ್ವೇಷ ಭಾಷಣ ಮಾಡಿದವರ ವಿರುದ್ಧ ಪಾರದರ್ಶಕವಾಗಿ ತನಿಖೆ ನಡೆದು, ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಶಹೀನ್‌ ಅಬ್ದುಲ್ಲಾ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

“ಭಾರತವು ಜಾತ್ಯತೀತ ರಾಷ್ಟ್ರ ಎಂದು ಸಂವಿಧಾನ ಹೇಳುತ್ತದೆ. ಮತ್ತೊಬ್ಬರ ಘನತೆ ಹಾಗೂ ಸಮಗ್ರತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿಯೇ ಮೂಲಭೂತ ಕರ್ತವ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಹೀಗಿದ್ದರೂ ದ್ವೇಷ ಭಾಷಣ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಹಾಗಾಗಿ, ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದೆ. ಹಾಗೆಯೇ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ದೆಹಲಿಯಲ್ಲಿ ದ್ವೇಷ ಭಾಷಣ ಕುರಿತಂತೆ ದಾಖಲಾದ ಪ್ರಕರಣಗಳಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ | Hate Speech | ಧರ್ಮದ ಹೆಸರಿನಲ್ಲಿ ನಾವು ಎಂತಹ ಸ್ಥಿತಿಗೆ ಬಂದು ತಲುಪಿದ್ದೇವೆ? ಸುಪ್ರೀಂ ಬೇಸರ

Exit mobile version