Site icon Vistara News

MNM DMK Alliance: ಡಿಎಂಕೆ ಜತೆ ಕಮಲ್‌ ಹಾಸನ್‌ ಪಕ್ಷ ಮೈತ್ರಿ; ದೇಶಕ್ಕಾಗಿ ನಿರ್ಧಾರ ಎಂದ ನಟ

MK Stalin And Kamal Haasan

Actor Kamal Haasan's MNM joins DMK-led alliance in Tamil Nadu

ಚೆನ್ನೈ: ನಟ, ಮಕ್ಕಳ್‌ ನೀಧಿ ಮೈಯಮ್‌ (MNM) ಪಕ್ಷದ ಮುಖ್ಯಸ್ಥ ಕಮಲ್‌ ಹಾಸನ್‌ (Kamal Haasan) ಅವರು ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟಕ್ಕೆ (MNM DMK Alliance) ಬೆಂಬಲ ಘೋಷಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಂಡಿಯಾ ಒಕ್ಕೂಟ ಸೇರುವುದಿಲ್ಲ ಎಂದು ಹೇಳಿದ್ದ ಕಮಲ್‌ ಹಾಸನ್‌ ಅವರು ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕಮಲ್‌ ಹಾಸನ್‌ ಅವರ ಪಕ್ಷವು ಸ್ಪರ್ಧಿಸದಿರುವುದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

“ನಾನು ಯಾವುದೇ ಅಧಿಕಾರ, ಸ್ಥಾನಮಾನಕ್ಕಾಗಿ ಡಿಎಂಕೆ ಪಕ್ಷಕ್ಕೆ ಬೆಂಬಲ ಘೋಷಿಸಿದ್ದೇನೆ. ಆದರೆ, ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಡಿಎಂಕೆ ಪಕ್ಷದ ಅಭ್ಯರ್ಥಿಗಳಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ದೇಶದ ಹಿತಕ್ಕಾಗಿ ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ನಾನು ಯಾರ ಜತೆ ಕೈ ಕುಲುಕಬೇಕೋ, ಅವರ ಜತೆ ಕೈ ಕುಲುಕಿದ್ದೇನೆ” ಎಂದು ಕಮಲ್‌ ಹಾಸನ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದರಿಂದಾಗಿಯೇ ಕಮಲ್‌ ಹಾಸನ್‌ ಅವರ ಅಭಿಮಾನಿಗಳಿಗೆ ನಿರಾಸೆ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಂದು ರಾಜ್ಯಸಭೆ ಸ್ಥಾನ ಮೀಸಲು?

2025ರಲ್ಲಿ ತಮಿಳುನಾಡು ವಿಧಾನಸಭೆಯಿಂದ ಡಿಎಂಕೆ ಸದಸ್ಯರೊಬ್ಬರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಈ ರಾಜ್ಯಸಭೆ ಸ್ಥಾನವನ್ನು ಕಮಲ್‌ ಹಾಸನ್‌ ಅವರ ಪಕ್ಷಕ್ಕೆ ನೀಡಲಾಗುವುದು ಎಂಬುದಾಗಿ ಎಂ.ಕೆ.ಸ್ಟಾಲಿನ್‌ ಭರವಸೆ ನೀಡಿದ್ದಾರೆ. ಹಾಗಾಗಿ, ಮೈತ್ರಿಗೆ ಕಮಲ್‌ ಹಾಸನ್‌ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನಲ್ಲಿ 2025ರಲ್ಲಿ ಆರು ರಾಜ್ಯಸಭೆ ಸ್ಥಾನಗಳು ಖಾಲಿಯಾಗಲಿವೆ. ಆರು ಸದಸ್ಯರ ಅವಧಿಯು ಮುಗಿಯಲಿದೆ. ಒಂದು ಸ್ಥಾನವನ್ನು ಡಿಎಂಕೆ ಪಡೆಯಲಿದ್ದು, ಅದನ್ನು ಕಮಲ್‌ ಹಾಸನ್‌ ಪಕ್ಷಕ್ಕೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Lok Sabha Election: ಆಂಧ್ರದಲ್ಲಿ ಬಿಜೆಪಿ, ಟಿಡಿಪಿ, ಜನಸೇನಾ ಮೈತ್ರಿ ಫೈನಲ್;‌ ಸೀಟು ಹಂಚಿಕೆ ಹೇಗೆ?

ಕೆಲ ದಿನಗಳ ಹಿಂದಷ್ಟೇ ಇಂಡಿಯಾ ಒಕ್ಕೂಟಕ್ಕೆ ಸೇರುವುದಿಲ್ಲ ಎಂದು ಕಮಲ್‌ ಹಾಸನ್‌ ಹೇಳಿದ್ದರು. ಎಂಎನ್‌ಎಂ ಪಕ್ಷ ಸ್ಥಾಪನೆಯಾಗಿ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದರು. “ನಾನು ಇಂಡಿಯಾ ಒಕ್ಕೂಟವನ್ನು ಸೇರ್ಪಡೆಯಾಗುತ್ತಿಲ್ಲ. ಯಾರು ರಾಷ್ಟ್ರದ ಹಿತದೃಷ್ಟಿಯಿಂದ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೋ, ಅವರ ಪರವಾಗಿ ನಾವು ನಿಲ್ಲುತ್ತೇವೆ. ಸ್ಥಳೀಯ ರಾಜಕಾರಣ, ಊಳಿಗಮಾನ್ಯ ಪದ್ಧತಿ ಅಸ್ತಿತ್ವದಲ್ಲಿರುವ ಸ್ಥಳೀಯ ಪಕ್ಷಗಳ ಜತೆ ನಾವು ಸೇರುವುದಿಲ್ಲ. ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವವರ ಪರವಾಗಿ ನಾವು ನಿಲ್ಲುತ್ತೇವೆ” ಎಂದು ಹೇಳಿದ್ದರು. ಈಗ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿರುವ ಡಿಎಂಕೆ ಜತೆ ಅವರು ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version