Site icon Vistara News

Actor Surya: ‘ಕಂಗುವ’ ಚಿತ್ರದ ಶೂಟಿಂಗ್ ವೇಳೆ ನಟ ಸೂರ್ಯಗೆ ಗಾಯ!

Actor Surya injured during shooting kanguva film

ಚೆನ್ನೈ: ತಮಿಳು ಚಿತ್ರರಂಗದ (Tamil Cinema) ಖ್ಯಾತ ನಟ ಸೂರ್ಯ (Actor Surya) ಅವರು ಶೂಟಿಂಗ್‌ ವೇಳೆ ಗಾಯಗೊಂಡಿರುವ ಘಟನ ನಡೆದಿದೆ. ಕಂಗುವ (Kanguva Film) ಚಿತ್ರದ ಫೈಟಿಂಗ್ ದೃಶ್ಯದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ(Surya Injured). ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ (Film Shooting) ನಟ ಸೂರ್ಯ ಅವರ ಮೇಲೆ, ನಿಯಂತ್ರಣ ತಪ್ಪಿದ ರೋಪ್ ಕ್ಯಾಮೆರಾ ಬಿದ್ದಿದ್ದರಿಂದ ಅವರು ಗಾಯಗೊಂಡರು. ಸೂರ್ಯ ಅವರಿಗೆ ಲಘು ಗಾಯಗಳಾಗಿದ್ದು, ಸದ್ಯಕ್ಕೆ ಚಿತ್ರದ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ನಟ ಪೂರ್ಣ ಗುಣಮುಖರಾದ ಮೇಲೆ ಶೂಟಿಂಗ್ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.

ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ಮಧ್ಯ ರಾತ್ರಿ ಶೂಟಿಂಗ್ ನಡೆಯುತ್ತಿತ್ತು. ಸುಮಾರು 1.30ರ ಹೊತ್ತಿಗೆ ಸೂರ್ಯ ಅವರು ಗಾಯಗೊಂಡರು ಎಂದು ಮೂಲಗಳು ತಿಳಿಸಿವೆ. ಚಿತ್ರದ ಶೂಟಿಂಗ್ ಅನ್ನು ರದ್ದುಗೊಳಿಸಲಾಗಿದ್ದು, ಇಡೀ ಘಟನೆಯ ಕುರಿತು ನಾಸರ್‌ಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಗುವ ಚಿತ್ರದಲ್ಲಿ ಸೂರ್ಯ ಅವರು ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಸ್ಟುಡಿಯೋ ಗ್ರೀನ್ ನಿರ್ಮಾಣ ಸಂಸ್ಥೆಯು ಸೂರ್ಯ ಮತ್ತು ದಿಶಾ ಪಟಾನಿ ಅಭಿನಯದ ‘ಕಂಗುವ’ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಸಾಹಸಮಯ ಚಿತ್ರವಾಗಿದ್ದು, 2024ರ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ‘ಮಲಂಗ್’ ನಟಿ ದಿಶಾ ಪಟಾನಿ ಕೂಡ ನಟಿಸಿರುವ ಚಿತ್ರಕ್ಕೆ ಕಂಗುವ ಎಂದು ನಾಮಕರಣ ಮಾಡಲಾಗಿದೆ.

38 ಭಾಷೆಗಳಲ್ಲಿ ಕಂಗುವ ಬಿಡುಗಡೆಗೆ ಪ್ಲ್ಯಾನ್

ಖ್ಯಾತ ಕಾಲಿವುಡ್ ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೊಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರೆ.

ಕೆ.ಇ.ಜ್ಞಾನವೇಲ್ ರಾಜಾ ಮಾತನಾಡಿ ʻʻ38 ಭಾಷೆಗಳಲ್ಲಿ ʼಕಂಗುವʼ ಸಿನಿಮಾ ಬಿಡುಗಡೆ ಮಾಡುತ್ತೇವೆ. ಈ ಪ್ರಯತ್ನವು ಯಶಸ್ವಿಯಾದರೆ, ತಮಿಳು ಚಿತ್ರರಂಗದಲ್ಲಿ ಒಂದು ಅದ್ಭುತ ಬೆಳವಣಿಗೆಯಾಗಲಿದೆ. ‘ಕಂಗುವ’ ಸಿನಿಮಾವನ್ನು 3ಡಿ ಹಾಗೂ ಐಮ್ಯಾಕ್ಸ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಾವು ಭಿನ್ನ ಮಾದರಿಯ ಮಾರುಕಟ್ಟೆ ಸ್ಟ್ರಾಟೆಜಿಗಳನ್ನು ಬಳಸಲಿದ್ದೇವೆ’ ಎಂದಿದ್ದಾರೆ.

ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Suriya: ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ ನಟ ಸೂರ್ಯ!

Exit mobile version