Site icon Vistara News

One Nation One Election : ಒಂದು ದೇಶ, ಒಂದು ಚುನಾವಣೆ; ಅಮಿತ್ ಶಾ ಇರುವ ಸಮಿತಿಯಲ್ಲಿ ಇನ್ಯಾರ್ಯಾರು ಇದ್ದಾರೆ?

One Nation One Election

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ (One Nation One Election) ಪ್ರಸ್ತಾಪವನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಕಾನೂನು ಸಚಿವಾಲಯ ಶನಿವಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha), ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, 15 ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಮುಖ್ಯ ವಿಚಕ್ಷಣಾ ಆಯುಕ್ತ ಸಂಜಯ್ ಕೊಠಾರಿ ಸಮಿತಿಯ ಸದಸ್ಯರಾಗಿದ್ದಾರೆ. ರಾಜ್ಯ ಸಚಿವ (ಕಾನೂನು) ಅರ್ಜುನ್ ರಾಮ್ ಮೇಘವಾಲ್ ಅವರು ಉನ್ನತ ಮಟ್ಟದ ಸಮಿತಿಯ ಸಭೆಗಳಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಸಮಿತಿ ಯಾಕೆ?

ಅಧಿಸೂಚನೆಯಲ್ಲಿ ಕಡ್ಡಾಯಗೊಳಿಸಿದಂತೆ, ಸಮಿತಿಯು ಭಾರತದ ಸಂವಿಧಾನ ಮತ್ತು ಇತರ ಶಾಸನಬದ್ಧ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ (ಲೋಕಸಭೆ), ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್​​ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಇರುವ ಅವಕಾಶಗಳನ್ನು ಪರಿಶೀಲಿಸಲಿದೆ. ಅಧ್ಯಯನದ ಬಳಿಕ ಈ ಸಮತಿಯು ಶಿಫಾರಸುಗಳನ್ನು ಮಾಡಲಿದೆ. ಆ ಉದ್ದೇಶಕ್ಕಾಗಿ, ಸಂವಿಧಾನಕ್ಕೆ ನಿರ್ದಿಷ್ಟ ತಿದ್ದುಪಡಿಗಳ ಅಗತ್ಯವೂ ಬರಬಹುದು ಎನ್ನಲಾಗಿದೆ. 1950ರ ಮತ್ತು 1951 ಜನ ಪ್ರಾತಿನಿಧ್ಯ ಕಾಯ್ದೆ ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳು ಮತ್ತು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಉದ್ದೇಶಕ್ಕಾಗಿ ತಿದ್ದುಪಡಿಗಳ ಅಗತ್ಯವಿರುವ ಕಾನೂನುಗಳ ಬಗ್ಗೆ ಈ ಸಮಿತಿಯು ಅಧ್ಯಯನ ನಡೆಸಲಿದೆ.

ಅತಂತ್ರ ಪಾರ್ಲಿಮೆಂಟ್​ , ಅವಿಶ್ವಾಸ ಗೊತ್ತುವಳಿ ಅಂಗೀಕಾರ ಅಥವಾ ಪಕ್ಷಾಂತರದಂತಹ ಸನ್ನಿವೇಶಗಳ ಬಗ್ಗೆಯೂ ಸಮಿತಿಯು ವಿಶ್ಲೇಷಿಸಿ ಪರಿಹಾರಗಳನ್ನು ಶಿಫಾರಸು ಮಾಡಲಿದೆ. ಎಂಟು ಸದಸ್ಯರ ಸಮಿತಿಯು ಚುನಾವಣೆಗಳ ಸಮನ್ವಯಕ್ಕಾಗಿ ಒಂದು ಸೂತ್ರವನ್ನು ಸೂಚಿಸಲಿದೆ. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬಹುದಾದ ಸಮಯದ ಮಿತಿಯನ್ನೂ ನಿಗದಿಪಡಿಸಲಿದೆ. ಏಕಕಾಲಿಕ ಚುನಾವಣೆಗಳನ್ನು ನಡೆಸಲು ಇವಿಎಂಗಳು, ವಿವಿಪ್ಯಾಟ್​​ಗಳು ಸೇರಿದಂತೆ ಅಗತ್ಯವಿರುವ ಸಾಗಾಟ ಮತ್ತು ಮಾನವಶಕ್ತಿ ಲಭ್ಯತೆಯನ್ನೂ ಸಮಿತಿ ಪರಿಶೀಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಏನಿದು ‘ಒಂದು ರಾಷ್ಟ್ರ-ಒಂದು ಚುನಾವಣೆ’?

1967 ರವರೆಗೆ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದಾಗ್ಯೂ, 1968 ಮತ್ತು 1969ರಲ್ಲಿ ಕೆಲವು ವಿಧಾನಸಭೆಗಳನ್ನು ಅಕಾಲಿಕವಾಗಿ ವಿಸರ್ಜಿಸಲಾಯಿತು, ನಂತರ 1970 ರಲ್ಲಿ ಲೋಕಸಭೆ ವಿಸರ್ಜನೆಯಾಯಿತು. ಇದರಿಂದಾಗಿ ರಾಜ್ಯಗಳು ಮತ್ತು ದೇಶದ ಚುನಾವಣಾ ವೇಳಾಪಟ್ಟಿಯಲ್ಲಿ ಬದಲಾವಣೆ ಅನಿವಾರ್ಯವಾಯಿತು. ಕಾನೂನು ಆಯೋಗವು ತನ್ನ 170 ನೇ ವರದಿಯಲ್ಲಿ ಚುನಾವಣಾ ವೆಚ್ಚಗಳ ಕಡಿತಕ್ಕಾಗಿ ಏಕಕಾಲದಲ್ಲಿ ಚುನಾವಣೆಗಳನ್ನು ಶಿಫಾರಸು ಮಾಡಿದೆ. ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳಿಗೆ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯಬೇಕು ಎಂದು ಕಾನೂನು ಆಯೋಗದ ವರದಿ ಹೇಳಿದೆ.

ಇದನ್ನೂ ಓದಿ: Parliament Special Session: ಒಂದು ರಾಷ್ಟ್ರ ಒಂದು ಚುನಾವಣೆಗೆ ಮುಹೂರ್ತ ಫಿಕ್ಸ್? ದಿಢೀರ್ ವಿಶೇಷ ಅಧಿವೇಶನದ ಹಿಂದಿನ ಗುಟ್ಟೇನು?

ಕನಿಷ್ಠ 10 ರಾಜ್ಯ ವಿಧಾನಸಭೆಗಳ ಅವಧಿ 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅಥವಾ ಅದರ ಸಮಯದಲ್ಲಿ ಕೊನೆಗೊಳ್ಳುತ್ತದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸ್ ಗಢದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಜಾರ್ಖಂಡ್ ನಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಯಾವುದೇ ಕಾರಣವನ್ನು ಉಲ್ಲೇಖಿಸದೆ ಸೆಪ್ಟೆಂಬರ್ 18 ರಿಂದ 22ರವರೆಗೆ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದ ನಂತರ ಒಂದು ರಾಷ್ಟ್ರ, ಒಂದು ಚುನಾವಣೆಯ ಚರ್ಚೆ ಹೊಸದಾಗಿ ಪ್ರಾರಂಭವಾಯಿತು.

Exit mobile version