Site icon Vistara News

NIA Raid | ಪಿಎಫ್​ಐ ಮುಖಂಡರ ಮನೆ, ಕಚೇರಿ ಮೇಲೆ ರೇಡ್​ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ

Amit Shah

ನವ ದೆಹಲಿ: ಇಂದು ರಾಷ್ಟ್ರಾದ್ಯಂತ 13ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಿಎಫ್​ಐ ಸಂಘಟನೆ ಮುಖಂಡರ ಕಚೇರಿ, ಮನೆಗಳ ಮೇಲೆ ಎನ್​ಐಎ ದಾಳಿ ನಡೆಸಿದ ಬೆನ್ನಲ್ಲೇ ಗೃಹ ಸಚಿವ ಅಮಿತ್​ ಶಾ ಅವರು ಭದ್ರತಾ ಏಜೆನ್ಸಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್​ ಭಲ್ಲಾ, ರಾಷ್ಟ್ರೀಯ ತನಿಖಾ ದಳ (ಎನ್​ಐಎ)ದ ಪ್ರಧಾನ ನಿರ್ದೇಶಕ ದಿನಕರ್​​ ಗುಪ್ತಾ ಸೇರಿ ಇನ್ನೂ ಹಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಪಿಎಫ್​ಐ ಸಂಘಟನೆ ವಿರುದ್ಧ ನಡೆದ ದಾಳಿ, ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಪಿಎಫ್​​ಐ ಸಂಘಟನೆ ಉಗ್ರ ಕೃತ್ಯಗಳಿಗೆ ನೆರವು ನೀಡುತ್ತಿದೆ, ಭಯೋತ್ಪಾದಕ ತರಬೇತಿಗಳಿಗೆ ಸಹಕಾರ ನೀಡುತ್ತಿದೆ ಎಂಬಿತ್ಯಾದಿ ಆರೋಪದಡಿ ಎಂದು ಎನ್​ಐಎ ಅಧಿಕಾರಿಗಳು ರೇಡ್​ ಮಾಡಿದ್ದಾರೆ. ಪಿಎಫ್​ಐ ಮತ್ತು ಅದರ ರಾಜಕೀಯ ವಿಭಾಗವಾದ ಎಸ್​ಡಿಪಿಯಗಳ ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಗುಪ್ತಚರ ಇಲಾಖೆಗಳು ನೀಡಿದ ಖಚಿತ ಮಾಹಿತಿಯನ್ನಾಧರಿಸಿಯೇ ಇಂದು ಎನ್​ಐಎ ಮತ್ತು ಇ.ಡಿ. ಜಂಟಿಯಾಗಿ ರೇಡ್​ ಮಾಡಿವೆ. 13 ರಾಜ್ಯಗಳಲ್ಲಿ ನಡೆದ ಶೋಧ ಕಾರ್ಯದಲ್ಲಿ ಆಯಾ ರಾಜ್ಯಗಳ ಪೊಲೀಸರೂ ಪಾಲ್ಗೊಂಡಿದ್ದರು.

ಸಾಮಾಜಿಕ ಸಮಾನತೆಗಾಗಿ ಹುಟ್ಟಿಕೊಂಡ ಪಿಎಫ್​ಐ ಸಂಘಟನೆಯ ಹೆಸರು ಬರುಬರುತ್ತ ದೇಶ ವಿರೋಧಿ ಚಟುವಟಿಕೆಗಳಲ್ಲಿ ಕೇಳಿಬರುತ್ತಿದೆ. ಇತ್ತೀಚೆಗಂತೂ ಯಾವುದೇ ಕೋಮು ಗಲಭೆಯಾಗಲಿ, ಹತ್ಯೆ-ಹಿಂಸಾಚಾರಗಳಾಗಲಿ ಆ ಆರೋಪಿಗಳಿಗೆ ಪಿಎಫ್​ಐ ಜತೆ ನಂಟಿದೆ ಎಂಬ ವರದಿಯೇ ತನಿಖೆಗಳಲ್ಲಿ ಹೊರಬೀಳುತ್ತಿದೆ. ಹೀಗಾಗಿ ಗೃಹ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ತೀಕ್ಷ್ಣಗೊಳಿಸಲು ಸೂಚನೆ ನೀಡಿದೆ.

ಜುಲೈನಲ್ಲಿ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆಗೈಯ್ಯುವ ಸಂಚು, ನೂಪುರ್ ಶರ್ಮಾ ಪರ ಪೋಸ್ಟ್​ ಹಾಕಿದ್ದಕ್ಕೆ ಉದಯ್​ಪುರದಲ್ಲಿ ಟೇಲರ್​​ನನ್ನು ಕೊಂದ ಪ್ರಕರಣ ಸೇರಿ ಇನ್ನೂ ಇಂಥ ಹಲವು ಕೇಸ್​​ನಲ್ಲೆಲ್ಲ ಪಿಎಫ್​ಐ ಸಂಘಟನೆ ಹೆಸರು ಮುನ್ನೆಲೆಗೆ ಬಂದಿದೆ. ಒಟ್ಟಾರೆ ಎಲ್ಲ ಕೇಸ್​ಗೆ ಸಂಬಂಧಪಟ್ಟಂತೆ ಇಂದು ಎನ್​ಐಎ ದಾಳಿ ನಡೆಸಿ ಕೇರಳದಲ್ಲಿ 22, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ 20, ಆಂಧ್ರಪ್ರದೇಶದಲ್ಲಿ 5, ಅಸ್ಸಾಂನಲ್ಲಿ 9, ದೆಹಲಿ-3, ಮಧ್ಯಪ್ರದೇಶದಲ್ಲಿ 4, ಪುದುಚೇರಿಯಲ್ಲಿ 3, ತಮಿಳುನಾಡಿನಲ್ಲಿ 10, ಉತ್ತರ ಪ್ರದೇಶದಲ್ಲಿ ಎಂಟು ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಿದೆ.

ಇದನ್ನೂ ಓದಿ: NIA Raid | ಮುಸ್ಲಿಮರನ್ನು ಗುರಿಯಾಗಿಸಿ ದಾಳಿ: ರಾಮನಗರ, ಕೊಪ್ಪಳದಲ್ಲಿ ರಸ್ತೆಗಿಳಿದು ಪ್ರತಿಭಟನೆ

Exit mobile version