Site icon Vistara News

Ram Mandir: ರಾಮಮಂದಿರದ 2ನೇ ಮಹಡಿ ನಿರ್ಮಾಣ‌ ಯಾವಾಗ? ಇಲ್ಲಿದೆ ಡೇಟ್

Ram Mandir

Ayodhya Ram Mandir Construction To Resume From February 15

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾಗಿರುವ ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಈಗಾಗಲೇ ಲಕ್ಷಾಂತರ ಜನ ನಿತ್ಯ ರಾಮಲಲ್ಲಾನ (Ram Lalla Darshan) ದರ್ಶನ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ, ರಾಮಮಂದಿರ ನಿರ್ಮಾಣದ ಎರಡನೇ ಹಂತದ ಕಾಮಗಾರಿಗೆ (Ram Mandir Construction) ಫೆಬ್ರವರಿ 15ರಿಂದ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಕಾಮಗಾರಿ ಆರಂಭಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ.

“ರಾಮಮಂದಿರದ ಮೊದಲನೇ ಮಹಡಿಯ ನಿರ್ಮಾಣ ಭಾಗಶಃ ಮುಕ್ತಾಯಗೊಂಡಿದೆ. ಎರಡನೇ ಮಹಡಿ ಹಾಗೂ ಗೋಪುರ ನಿರ್ಮಾಣದ ಕಾಮಗಾರಿ ಬಾಕಿ ಇದೆ. ಫೆಬ್ರವರಿ 15ರಿಂದ ಕಾಮಗಾರಿ ಆರಂಭವಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ” ಎಂದು ರಾಮಮಂದಿರ ಟ್ರಸ್ಟ್‌ನ ಅನಿಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. ರಾಮಮಂದಿರ ಆವರಣದಲ್ಲಿ ಎರಡನೇ ಹಂತದ ಕಾಮಗಾರಿಗಾಗಿ ಎರಡು ಟವರ್‌ ಕ್ರೇನ್‌ಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಫೆಬ್ರವರಿ 15ರಿಂದ ಸುಮಾರು 3,500 ಕಾರ್ಮಿಕರು, ಸಿಬ್ಬಂದಿಯು ನಿರ್ಮಾಣ ಕಾರ್ಯ ಆರಂಭಿಸಲಿದ್ದಾರೆ.

balak ram Ayodhya Ram Mandir

ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜನವರಿ 15ರಿಂದಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಎಲ್‌ ಆ್ಯಂಡ್‌ ಟಿ ಕಂಪನಿಗೆ ರಾಮಮಂದಿರ ನಿರ್ಮಾಣದ ಹೊಣೆ ನೀಡಲಾಗಿದೆ. ಈಗ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. 2025ರ ಕೊನೆಯಲ್ಲಿ ರಾಮಮಂದಿರದ ಕಾಮಗಾರಿ ಮುಗಿಯಲಿದೆ ಎಂದು ತಿಳಿದುಬಂದಿದೆ.

ಪ್ರಾಣ ಪ್ರತಿಷ್ಠೆ ನಂತರ ಸಾರ್ವಜನಿಕರಿಗೆ ರಾಮಮಂದಿರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸುಮಾರು 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಮೊದಲ ದಿನವೇ ಸುಮಾರು 5 ಲಕ್ಷಕ್ಕೂ ಅಧಿಕ ಜನ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಮೊದಲ ದಿನವೇ ನಗದು ಹಾಗೂ ಆನ್‌ಲೈನ್‌ ಮೂಲಕ ಒಟ್ಟು 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತಿಳಿಸಿದೆ.

ಆವರಣದಲ್ಲಿ 13 ದೇಗುಲ ನಿರ್ಮಾಣ

ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇದರ ಭಾಗವಾಗಿ ಕನಿಷ್ಠ 13 ಹೊಸ ದೇವಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಆರು ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು ಏಳು ಹೊರಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ ಮಾಹಿತಿ ನೀಡಿ, ಮುಖ್ಯ ದೇವಾಲಯವನ್ನು ಪೂರ್ಣಗೊಳಿಸುವ ಕಾಮಗಾರಿ ಸೇರಿದಂತೆ ಎಲ್ಲ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Ballari News: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ; ಬಳ್ಳಾರಿಯಲ್ಲಿ ದೀಪೋತ್ಸವ

ರಾಮ ಮಂದಿರ ಸಂಕೀರ್ಣದ ಹೊರಗೆ ದೊಡ್ಡ ಪ್ರದೇಶದಲ್ಲಿ ಏಳು ದೇವಾಲಯಗಳು ಇರಲಿವೆ. ಭಗವಾನ್ ರಾಮನ ಜೀವನದಲ್ಲಿ ಪ್ರಧಾನ ಪಾತ್ರ ವಹಿಸಿದ ಮುಖ್ಯ ಏಳು ಮಂದಿಯ ದೇವಸ್ಥಾನ ಇದಾಗಿರಲಿದೆ. ಇವು ಋಷಿಗಳಾದ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಶಬರಿ ಮತ್ತು ರಾಮನಿಗಾಗಿ ಪ್ರಾಣವನ್ನೇ ಸಮರ್ಪಿಸಿದ ಜಟಾಯುಗೆ ಸಂಬಂಧಿಸಿದ ದೇಗುಲಗಳು ಎನ್ನುವುದು ವಿಶೇಷ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version