Site icon Vistara News

Azam Khan | ದ್ವೇಷ ಭಾಷಣ ಕೇಸ್‌ನಲ್ಲಿ ಜೈಲು ಶಿಕ್ಷೆ ಬೆನ್ನಲ್ಲೇ ಶಾಸಕ ಸ್ಥಾನ ಕಳೆದುಕೊಂಡ ಅಜಂ ಖಾನ್‌

Azam Khan

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ 2019ರಲ್ಲಿ ಮಾಡಿದ ದ್ವೇಷ ಭಾಷಣ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ (Azam Khan) ಅವರು ಉತ್ತರ ಪ್ರದೇಶ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.

ದ್ವೇಷ ಭಾಷಣದ ಕುರಿತು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಂಪಿ-ಎಂಎಲ್‌ಎ ನ್ಯಾಯಾಲಯವು ಅಜಂ ಖಾನ್‌ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸುಪ್ರೀಂ ಕೋರ್ಟ್‌ ಆದೇಶ ಪ್ರಕಾರ ಯಾವುದೇ ಎಂಪಿ, ಎಂಎಲ್‌ಎ ಅಥವಾ ಎಂಎಲ್‌ಸಿಯು ಎಂಪಿ-ಎಂಎಲ್‌ಎ ಕೋರ್ಟ್‌ನಿಂದ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅವರ ಸದಸ್ಯತ್ವ ರದ್ದಾಗುತ್ತದೆ. ಅದರಂತೆ ಈಗ ಅಜಂ ಖಾನ್‌ ಅವರು ವಿಧಾನಸಭೆಯಿಂದ ಅನರ್ಹರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿಯೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜಂ ಖಾನ್‌, ಸೀತಾಪುರ ಜೈಲಿನಲ್ಲಿದ್ದುಕೊಂಡೇ ಹಾರಿಸಿ ಬಂದಿದ್ದರು.

ಅಜಂ ಖಾನ್‌ ಅವರು 2019ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಆಗಿನ ಜಿಲ್ಲಾ ದಂಡಾಧಿಕಾರಿ (District Magistrate) ಔಂಜನೇಯ ಕುಮಾರ್‌ ಸಿಂಗ್‌ ಅವರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣ ಇದಾಗಿದೆ. ಸದ್ಯ ವಂಚನೆ ಪ್ರಕರಣದಲ್ಲಿ ಅಜಂ ಖಾನ್‌ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣವು ಅವರಿಗೆ ಉರುಳಾಗಿದೆ. ವಂಚನೆ ಪ್ರಕರಣದಲ್ಲಿ ಈಗಾಗಲೇ ಅವರು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ, ವಂಚನೆ ಸೇರಿ ಸುಮಾರು 90 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ | Azam Khan | ದ್ವೇಷ ಭಾಷಣ: ಎಸ್‌ಪಿ ನಾಯಕ ಅಜಂ ಖಾನ್‌ಗೆ 3 ವರ್ಷ ಜೈಲು! ಎಂಪಿ ಸ್ಥಾನಕ್ಕೂ ಕುತ್ತು

Exit mobile version