Site icon Vistara News

Bharat Jodo Yatra | ಕಾಂಗ್ರೆಸ್​ ಪುನರುಜ್ಜೀವನಕ್ಕೆ ಭಾರತ್​ ಜೋಡೋ ಯಾತ್ರೆ ಅತ್ಯವಶ್ಯ: ಸೋನಿಯಾ ಗಾಂಧಿ

Sonia Gandhi

ನವ ದೆಹಲಿ: ಭಾರತ್​ ಜೋಡೋ ಯಾತ್ರೆ (Bharat Jodo Yatra) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮುಂಜಾನೆ ಕಾಂಗ್ರೆಸ್ ನಾಯಕರು ಕನ್ಯಾಕುಮಾರಿಯ ಅಗಸ್ತೀಶ್ವರಮ್​​ನಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿದ್ದು, ‘ಶತಮಾನಗಳ ಇತಿಹಾಸ ಇರುವ ಬಹುದೊಡ್ಡ ಪಕ್ಷ ಕಾಂಗ್ರೆಸ್​ನ ಪುನರುಜ್ಜೀವನದಲ್ಲಿ ಈ ಸಾಮೂಹಿಕ ಸಂಪರ್ಕ ಕಾರ್ಯಕ್ರಮ ಭಾರತ್ ಜೋಡೋ ಯಾತ್ರೆ ಬಹುಮುಖ್ಯ ಪಾತ್ರ ವಹಿಸಲಿದೆ’ ಎಂದು ಹೇಳಿದ್ದಾರೆ.

ಭಾರತ್​ ಜೋಡೋ ಯಾತ್ರೆ ಎಂಬುದು ಕಾಂಗ್ರೆಸ್ ಪಾಲಿಗೆ ಐತಿಹಾಸಿಕ ಸಮಾವೇಶ. ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಪರಿವರ್ತನಾ ಕ್ಷಣವಾಗಲಿದೆ. ಈ ಯಾತ್ರೆಯಲ್ಲಿ ಯಾರಿಗೆಲ್ಲ ಭೌತಿಕವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವೋ ಅವರು ಮಾನಸಿಕವಾಗಿ ಭಾಗವಹಿಸಲಿದ್ದಾರೆ’ ಎಂದು ಸೋನಿಯಾ ಗಾಂಧಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸೋನಿಯಾ ಗಾಂಧಿ ಸದ್ಯ ಭಾರತದಲ್ಲಿ ಇಲ್ಲ. ಚಿಕಿತ್ಸೆಗಾಗಿ ಆಗಸ್ಟ್​ 24ರಂದು ವಿದೇಶಕ್ಕೆ ತೆರಳಿದ್ದಾರೆ. ಈ ಮಧ್ಯೆ ಇಟಲಿಯಲ್ಲಿದ್ದ ಅವರ ತಾಯಿ ಆಗಸ್ಟ್​ 27ರಂದು ಮೃತಪಟ್ಟಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಭಾರತದಲ್ಲಿ ಇಲ್ಲ. ತಾಯಿ ಹಾಗೂ ಸಹೋದರಿಯೊಂದಿಗೆ ರಾಹುಲ್ ಗಾಂಧಿಯವರೂ ತೆರಳಿದ್ದರು, ಆದರೆ ಅವರು ಈಗ ವಾಪಸ್​ ಬಂದು, ಭಾರತ್​ ಜೋಡೋ ಯಾತ್ರೆಯಲ್ಲಿ ಸಕ್ರಿಯರಾಗಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಜಿಎಸ್​ಟಿ ಹೆಚ್ಚಳ, ಕೋಮು ಗಲಭೆ ಮತ್ತಿತರ ವಿಷಯಗಳನ್ನು ವಿರೋಧಿಸಿ, ಜನರನ್ನು ನೇರವಾಗಿ ಸಂಪರ್ಕಿಸಿ ಅವರಿಂದ ಕುಂದು-ಕೊರತೆ ಆಲಿಸುವ ಸಲುವಾಗಿ ಕಾಂಗ್ರೆಸ್ ಭಾರತ್​ ಜೋಡೋ ಯಾತ್ರೆ ಹಮ್ಮಿಕೊಂಡಿದೆ. ಇದು 3700 ಕಿಮೀ ದೂರದ ಪಾದಯಾತ್ರೆಯಾಗಿದ್ದು, ಐದು ತಿಂಗಳು (150 ದಿನ) ನಡೆಯಲಿದೆ. 12 ರಾಜ್ಯಗಳಲ್ಲಿ ಯಾತ್ರೆ ಸುತ್ತಲಿದೆ. ಸೆಪ್ಟೆಂಬರ್ ಕೊನೇ ವಾರದಲ್ಲಿ ಕರ್ನಾಟಕಕ್ಕೆ ಪ್ರವೇಶ ಮಾಡಲಿದ್ದು, ಇಲ್ಲಿ 21 ದಿನಗಳ ಕಾಲ ಇರಲಿದೆ.

ಇದನ್ನೂ ಓದಿ: Bharat Jodo Yatra | ಪಾದಯಾತ್ರೆ ಶುರು ಮಾಡಿದ ಕಾಂಗ್ರೆಸ್​ ನಾಯಕರು; ಬಿಜೆಪಿ ವಿರುದ್ಧ ವಾಗ್ದಾಳಿ

Exit mobile version