Site icon Vistara News

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಸ್ವಾತಿ ಮಾಲಿವಾಲ್‌ ಕೇಸ್‌ನಲ್ಲೂ ಸಿಎಂ ವಿರುದ್ಧ ಚಾರ್ಜ್‌ಶೀಟ್!

Arvind Kejriwal

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ (Delhi Excise Policy Case) ತಿಹಾರ ಜೈಲುಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯಸಭೆಯ ಆಪ್‌ ಸದಸ್ಯೆ ಸ್ವಾತಿ ಮಾಲಿವಾಲ್‌ (Swati Maliwal) ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಭವ್‌ ಕುಮಾರ್‌ ವಿರುದ್ಧ ದೆಹಲಿ ಪೊಲೀಸರು (Delhi Police) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರ ಹೆಸರನ್ನೂ ಪ್ರಸ್ತಾಪಿಸಲಾಗಿದೆ. ಇದು ಈಗ ಸಿಎಂಗೆ ಮತ್ತೊಂದು ಕಂಟಕವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಕಳೆದ ಮೇ 13ರಂದು ಸ್ವಾತಿ ಮಾಲಿವಾಲ್‌ ಅವರು ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸಕ್ಕೆ ತೆರಳಿದ್ದಾಗ ಸಿಎಂ ಆಪ್ತ ವಿಭವ್‌ ಕುಮಾರ್‌ ಅವರು ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣದಲ್ಲಿ ಈಗಾಗಲೇ ವಿಭವ್‌ ಕುಮಾರ್‌ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ, ವಿಭವ್‌ ಕುಮಾರ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿರುದ್ಧ ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, “ಕೃತ್ಯ ನಡೆದ ಸ್ಥಳದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಕೂಡ ಇದ್ದರು” ಎಂಬುದಾಗಿ ಉಲ್ಲೇಖಿಸಿದ್ದಾರೆ.

swati Maliwal assault case:

ಸ್ವಾಮಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆದಿರುವುದರಿಂದ ಹಿಂದೆ ದೊಡ್ಡ ಪಿತೂರಿಯನ್ನೇ ರೂಪಿಸಿರುವ ಸಾಧ್ಯತೆ ಇದೆ. ಆಪ್‌ ನಾಯಕರಾದ ಸಂಜಯ್‌ ಸಿಂಗ್‌ ಹಾಗೂ ಆತಿಶಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ಪಿತೂರಿಯ ಸಾಧ್ಯತೆಯನ್ನು ಹೆಚ್ಚಿಸಿವೆ. ಮೇ 14ರಂದು ಘಟನೆಯ ಕುರಿತು ಸಂಜಯ್‌ ಸಿಂಗ್‌ ಮಾತನಾಡಿ, ವಿಭವ್‌ ಕುಮಾರ್‌ ಕೃತ್ಯವನ್ನು ಖಂಡಿಸಿದ್ದರು. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಆದರೆ, ಇದಾದ ಮೂರೇ ದಿನಕ್ಕೆ ಆತಿಶಿ ಸುದ್ದಿಗೋಷ್ಠಿ ನಡೆಸಿ, ಸ್ವಾತಿ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೆ, ಕೃತ್ಯ ನಡೆದ ಜಾಗದಲ್ಲಿ ಅರವಿಂದ್ ಕೇಜ್ರಿವಾಲ್‌ ಅವರು ಕೂಡ ಇದ್ದರು ಎಂಬುದಾಗಿ ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಲ್ಲೆ ನಡೆದ ಬಳಿಕ ಸ್ವಾತಿ ಮಾಲಿವಾಲ್‌ ಅವರು ಪೊಲೀಸರಿಗೆ ದೂರು ನೀಡಿದ್ದರು. ಸ್ವಾತಿ ತಮ್ಮ ದೂರಿನಲ್ಲಿ ತಾವು ಆ ದಿನ ಅನುಭವಿಸಿದ ನೋವಿನ ಬಗ್ಗೆ ದಾಖಲಿಸಿದ್ದರು. ವಿಭವ್‌ ಕುಮಾರ್‌ 7-8ರಿಂದ ಎಂಟು ಬಾರಿ ಕಪಾಳಕ್ಕೆ ಬಾರಿಸಿದ್ದಾನೆ. ನಾನು ನೆಲಕ್ಕೆ ಬಿದ್ದಾಗ ನಿರಂತರವಾಗಿ ನನ್ನ ಹೊಟ್ಟೆ, ಎದೆ, ಬೆನ್ನಿಗೆ ಒದ್ದಿದ್ದಾನೆ. ಅಲ್ಲದೇ ನನ್ನನ್ನು ಕಾಲುಗಳನ್ನು ಹಿಡಿದು ನೆಲದಲ್ಲಿ ಎಳೆದಾಡಿದ್ದು, ಬಟ್ಟೆಯನ್ನ ಎಳೆದಾಡಿದ್ದಾನೆ. ನಾನು ಅವತ್ತು ಋತುಮತಿಯಾಗಿದ್ದೆ. ಹೊಟ್ಟೆ ಬಹಳ ನೋಯುತ್ತಿದೆ ದಯವಟ್ಟಿ ಬಿಟ್ಟು ಬಿಡು ಎಂದರೂ ಕೇಳದೇ ನನ್ನ ಹೊಟ್ಟೆ ಕಾಲುಗಳಿಂದ ಒದ್ದಿದ್ದಾನೆ ಎಂದು ಸ್ವಾತಿ ಆರೋಪಿಸಿದ್ದರು.

ಇದನ್ನೂ ಓದಿ: Arvind Kejriwal: ದಿನೇ ದಿನೆ ಕೇಜ್ರಿವಾಲ್‌ ಆರೋಗ್ಯ ಕ್ಷೀಣ; ಪ್ರತಿಪಕ್ಷಗಳಿಂದ ಪ್ರತಿಭಟನಾ ರ್‍ಯಾಲಿ

Exit mobile version