Site icon Vistara News

Bilkis Bano: ಶರಣಾಗತಿಗೆ ಕಾಲಾವಕಾಶ ಕೋರಿದ ಬಿಲ್ಕಿಸ್‌ ಬಾನೊ ಕೇಸ್‌ನ ಅಪರಾಧಿಗಳು

Bilkis Bano

Bilkis Bano

ನವದೆಹಲಿ: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಸಾಮೂಹಿಕವಾಗಿ ಅತ್ಯಾಚಾರಕ್ಕೀಡಾಗಿದ್ದ, ತಮ್ಮ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದ ಬಿಲ್ಕಿಸ್‌ ಬಾನೊ (Bilkis Bano) ಅವರಿಗೆ ಕೊನೆಗೂ ನ್ಯಾಯ ದೊರೆತಿದೆ. ಅತ್ಯಾಚಾರ ಎಸಗಿದ 11 ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರದ (Gujarat Government) ಆದೇಶವನ್ನು ಸುಪ್ರೀಂ ಕೋರ್ಟ್‌ (Supreme Court) ಇತ್ತೀಚೆಗೆ ರದ್ದುಗೊಳಿಸಿದೆ. ಈ ಮಧ್ಯೆ ಮೂವರು ಅಪರಾಧಿಗಳು ಶರಣಾಗಲು ಹೆಚ್ಚಿನ ಸಮಯ ಕೋರಿ ಗುರುವಾರ (ಜನವರಿ 18) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಆರೋಪಿಗಳು ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ನಾಳೆ (ಶುಕ್ರವಾರ) ಈ ಅರ್ಜಿಯ ವಿಚಾರಣೆ ನಡೆಯಲಿದೆ. ಶರಣಾಗತಿ ಸಮಯ ಭಾನುವಾರ ಕೊನೆಗೊಳ್ಳುತ್ತಿರುವುದರಿಂದ ಪ್ರಕರಣವನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಅಪರಾಧಿಗಳ ಪರ ಪಕೀಲರು ಮನವಿ ಮಾಡಿದ್ದಾರೆ.

ಯಾರು ಈ ಮೂವರು?

ಮೂವರು ಅಪರಾಧಿಗಳಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನಾ ಮತ್ತು ಮಿತೇಶ್ ಚಿಮನ್ ಲಾಲ್ ಭಟ್ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿದ್ದಾರೆ. ಈ ಪೈಕಿ ಗೋವಿಂದಭಾಯಿ ನಾಯ್ ಶರಣಾಗಲು 4 ವಾರಗಳ ಸಮಯಾವಕಾಶ ಕೇಳಿದರೆ, ಮಿತೇಶ್‌ ಮತ್ತು ರಮೇಶ್‌ ರೂಪಭಾಯಿ 6 ವಾರಗಳ ಹೆಚ್ಚುವರಿ ಸಮಯ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಕಾರಣ ಏನು?

ಈ ಪೈಕಿ ಗೋವಿಂದಭಾಯಿ ನಾಯ್ ತನ್ನ ಮನವಿಯಲ್ಲಿ, 88 ವರ್ಷದ ತಂದೆ ಮತ್ತು 75 ವರ್ಷದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ಆಪರೇಷನ್‌ ನಡೆಸಬೇಕಿರುವುದರಿಂದ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಹೇಳಿದ್ದಾನೆ. ಇನ್ನೋರ್ವ ಅಪರಾಧಿ ರಮೇಶ್‌ ರೂಪಭಾಯ್‌, ತನ್ನ ಮಗನ ಮದುವೆ ದಿನ ನಿಗದಿಯಾಗಿದೆ. ಮದುವೆ ಮುಗಿದ ತಕ್ಷಣ ಶರಣಾಗುವುದಾಗಿ ತಿಳಿಸಿದ್ದಾನೆ. ಇನ್ನು ಮಿತೇಶ್‌ ಮನವಿ ಮಾಡಿ, ತಾನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಬೆಳೆ ಕೊಯ್ಲಿಗೆ ಬರಲಿದೆ. ಇದು ಮುಗಿದ ತಕ್ಷಣ ಹಾಜರಾಗುವುದಾಗಿ ಹೇಳಿದ್ದಾನೆ.

ಏನಿದು ಪ್ರಕರಣ?

2002ರ ಫೆಬ್ರವರಿ 27ರಂದು ಗುಜರಾತ್​​ನಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋದ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭಿಸಿದರು. ಅಂತೆಯೇ 20 ವರ್ಷದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ. ಆಗಲೇ ದಾಳಿ ನಡೆಸಿದ 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದರು.  2004ರಲ್ಲಿ ಸುಪ್ರೀಂಕೋರ್ಟ್​ ಈ ಕೇಸ್​​ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾದರು.

ಇದನ್ನೂ ಓದಿ: Bilkis Bano: ಕಾನೂನು ಹೋರಾಟದಲ್ಲಿ ಗೆದ್ದ ಬಿಲ್ಕಿಸ್‌ ಬಾನೊ; ಇವರಿಗಾದ ಅನ್ಯಾಯ ಎಂಥಾದ್ದು?

ಗುಜರಾತ್​ ಸರ್ಕಾರ ಆರೋಪಿಗಳನ್ನು 1992ರ ಕ್ಷಮಾದಾನ ನೀತಿಯ ಅನ್ವಯ ಬಿಡುಗಡೆಗೊಳಿಸಿತ್ತು. ಆದರೆ, ಗುಜರಾತ್‌ ಸರ್ಕಾರದ ತೀರ್ಪು ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ನ್ಯಾಯಾಂಗ ಹೋರಾಟ ಮುಂದುವರಿಸಿದ್ದರು. ಬಿಲ್ಕಿಸ್‌ ಬಾನೊ ಸೇರಿ ಹಲವು ಸಾಮಾಜಿಕ ಹೋರಾಟಗಾರರು ಕೂಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version