Site icon Vistara News

ಲಕ್ಷ್ಮಿ ದೇವಿಯನ್ನು ಪೂಜಿಸದ ಮುಸ್ಲಿಮರಲ್ಲೂ ಶ್ರೀಮಂತರಿದ್ದಾರೆ; ಹಿಂದುಗಳ ನಂಬಿಕೆಗೆ ಬಿಜೆಪಿ ಶಾಸಕನಿಂದ ಅಪಮಾನ

Lalan Paswan 1

ಪಾಟ್ನಾ: ಹಿಂದು ದೇವತೆಗಳನ್ನು ಅವಮಾನಿಸುವುದು ಹೊಸದಲ್ಲ. ಈಗಾಗಲೇ ಅನ್ಯಧರ್ಮೀಯರು, ನಮ್ಮದೇ ಧರ್ಮದ ಹಲವರು ಈ ಕೆಲಸ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾದವರು ಬಿಜೆಪಿ ಶಾಸಕ ಲಲನ್​ ಪಾಸ್ವಾನ್​. ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರಪೈಂಟಿ ವಿಧಾನಸಭಾ ಕ್ಷೇತ್ರದ ಎಂಎಲ್​​ಎ ಆಗಿರುವ ಲಲನ್​ ಪಾಸ್ವಾನ್​​ ಲಕ್ಷ್ಮೀ ದೇವಿಯನ್ನು ಅಪಮಾನಿಸುವ ಮಾತುಗಳನ್ನಾಡಿದ್ದು, ಅವರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಭಾಗಲ್ಪುರದ ಶೆರ್ಮಾರಿ ಬಜಾರ್​​ನಲ್ಲಿ ಲಲನ್​ ಪಾಸ್ವಾನ್​ ಪ್ರತಿಕೃತಿಯನ್ನು ದಹಿಸಲಾಗಿದೆ.

ಲಲನ್​ ಪಾಸ್ವಾನ್​ ಅವರು ಲಕ್ಷ್ಮೀ ದೇವಿ ವಿಚಾರದಲ್ಲಿ ಹಿಂದುಗಳಿಗೆ ಇರುವ ನಂಬಿಕೆಯನ್ನೇ ಪ್ರಶ್ನಿಸುವ ಮಾತುಗಳನ್ನಾಡಿದ್ದಾರೆ. ಲಕ್ಷ್ಮೀ ಹಣದ ದೇವತೆ. ಸಿರಿಸಂಪತ್ತಿಗಾಗಿ ಲಕ್ಷ್ಮೀ ಆರಾಧನೆ ಮಾಡಬೇಕು ಎಂಬುದು ಹಿಂದುಗಳ ಧಾರ್ಮಿಕ ನಂಬಿಕೆ. ಆದರೆ ಇದು ತಪ್ಪು ಎಂದಿರುವ ಲಲನ್ ಪಾಸ್ವಾನ್​ ‘ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಮಾತ್ರ ಧನಿಕರಾಗುತ್ತಾರೆ ಎಂದಾದರೆ ಮುಸ್ಲಿಮರಲ್ಲಿ ಯಾರೂ ಶ್ರೀಮಂತರು ಇರುತ್ತಲೇ ಇರಲಿಲ್ಲ. ಮುಸ್ಲಿಮರೇನು ಲಕ್ಷ್ಮಿಪೂಜೆ ಮಾಡುತ್ತಾರಾ? ಹಾಗಂತ ಅವರಲ್ಲಿ ಸಿರಿವಂತರೇ ಇಲ್ಲವೇ? ಮುಸ್ಲಿಮರು ಸರಸ್ವತಿ ಪೂಜೆ ಮಾಡುವುದಿಲ್ಲ..ಹಾಗಿದ್ದಾಗ್ಯೂ ಅವರಲ್ಲಿ ವಿದ್ವಾಂಸರು, ಪಂಡಿತರು ಇದ್ದಾರೆ. ಐಎಎಸ್​, ಐಪಿಎಸ್​ ಓದಿದವರೂ ಇದ್ದಾರೆ. ಭಜರಂಗಬಲಿಯನ್ನು ಶಕ್ತಿ ಮತ್ತು ಬಲದ ದೇವರೆಂದು ಪೂಜಿಸುತ್ತೇವೆ. ಆದರೆ ಕ್ರಿಶ್ಚಿಯನ್​-ಮುಸ್ಲಿಮರು ಅವನನ್ನು ಪೂಜಿಸುವುದಿಲ್ಲ. ಆದರೂ ಅವರಲ್ಲಿ ಶಕ್ತವಂತರು, ಸಬಲರು ಇದ್ದಾರೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ‘ಆತ್ಮ-ಪರಮಾತ್ಮ’ ಎಂಬುದೆಲ್ಲ ಕೇವಲ ಜನರ ನಂಬಿಕೆಗಳಷ್ಟೇ ಎಂದೂ ವಿಶ್ಲೇಷಿಸಿದ್ದಾರೆ.

ಒಂದು ಕಲ್ಲಿನ ವಿಗ್ರಹವನ್ನು ನೀವು ದೇವರೆಂದು ನಂಬಿದರೆ ಅದು ದೇವರು. ಇಲ್ಲದೆ ಇದ್ದರೆ ಅದೊಂದು ಕಲ್ಲು. ವೈಜ್ಞಾನಿಕತೆಯ ಆಧಾರದ ಮೇಲೆ ನಮ್ಮ ಆಲೋಚನೆ ಇರಬೇಕು. ಆ ಮೂಲಕವೇ ತಾರ್ಕಿಕ ತೀರ್ಮಾನಕ್ಕೆ ಬರಬೇಕು. ಯಾವಾಗ ನೀವು ಇಂಥದ್ದನ್ನೆಲ್ಲ ನಂಬುವುದನ್ನು ಬಿಡುತ್ತೀರೋ, ಆಗಲೇ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದೂ ಲಲನ್​ ಪಾಸ್ವಾನ್​ ತಿಳಿಸಿದ್ದಾರೆ. ಲಲನ್​ ಅವರ ಈ ಮಾತುಗಳು ಹಿಂದು ಧರ್ಮೀಯರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿದೆ.

ಇದನ್ನೂ ಓದಿ: Viral Video | ಪರೀಕ್ಷಾ ಕೇಂದ್ರದಲ್ಲಿ ಹಿಂದು ಯುವತಿಯರ ತಾಳಿ ಬಿಚ್ಚಿಸಿದರು, ಮುಸ್ಲಿಂ ಯುವತಿಯರನ್ನು ಬುರ್ಕಾ ಸಹಿತ ಒಳಗೆ ಬಿಟ್ಟರು!

Exit mobile version