Site icon Vistara News

Pro Tem Speaker: ಲೋಕಸಭೆ ಹಂಗಾಮಿ ಸ್ಪೀಕರ್‌ ಆಗಿ ಬಿಜೆಪಿಯ ಭಾರ್ತೃಹರಿ ಮಹತಾಬ್ ನೇಮಕ

Pro Tem Speaker

BJP MP Bhartruhari Mahtab Appointed Pro Tem Speaker

ನವದೆಹಲಿ: ಜನವರಿ 24ರಿಂದ ಸಂಸತ್‌ ವಿಶೇಷ ಅವಧಿವೇಶನ (Parliament Session) ಆರಂಭವಾಗಲಿದ್ದು, ಎಲ್ಲರ ಗಮನವೀಗ ಲೋಕಸಭೆ ಸ್ಪೀಕರ್‌ ಆಯ್ಕೆ ಮೇಲಿದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷಗಳು ಸ್ಪೀಕರ್‌ ಹುದ್ದೆ ಮೇಲೆ ಕಣ್ಣಿಟ್ಟಿವೆ. ಟಿಡಿಪಿ ಅಥವಾ ಜೆಡಿಯು ಅಭ್ಯರ್ಥಿಯು ಸ್ಪೀಕರ್‌ ಆಗಬಹುದು ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ, ಬಿಜೆಪಿ ಹಿರಿಯ ಸಂಸದ ಭಾರ್ತೃಹರಿ ಮಹತಾಬ್‌ (Bhartruhari Mahtab) ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್‌ (Pro Tem Speaker) ಆಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.

ಜನವರಿ 24ರಂದು ಸಂಸತ್‌ ಅಧಿವೇಶನ ಆರಂಭವಾಗಲಿದ್ದು, ಜನವರಿ 24 ಹಾಗೂ 25ರಂದು ನೂತನ ಸಂಸದರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಜನವರಿ 26ರಂದು ನೂತನ ಸ್ಪೀಕರ್‌ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಸಂಸದ ಪದಗ್ರಹಣ ಸೇರಿ ಹಲವು ಪ್ರಕ್ರಿಯೆಗಳನ್ನು ಅನುಸರಿಸಬೇಕಾದ ಕಾರಣ ಸಂಸತ್ತಿನ ಸದಸ್ಯರಲ್ಲೇ ಹಿರಿಯರಾದ ಸಂಸದರನ್ನು ಹಂಗಾಮಿ ಸ್ಪೀಕರ್‌ಅನ್ನಾಗಿ ನೇಮಕ ಮಾಡಲಾಗುತ್ತದೆ. ಅದರಂತೆ, ಒಡಿಶಾ ಬಿಜೆಪಿಯ ಹಿರಿಯ ನಾಯಕ, ಸಂಸದ ಭಾರ್ತೃಹರಿ ಮಹತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಎಂಬುದಾಗಿ ನೇಮಿಸಲಾಗಿದೆ.

ಲೋಕಸಭೆ ಸ್ಪೀಕರ್‌ ಹುದ್ದೆಗೆ ಈಗಾಗಲೇ ಭಾರ್ತೃಹರಿ ಮಹತಾಬ್‌ ಹಾಗೂ ಆಂಧ್ರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷೆ ಡಿ.ಪುರಂದೇಶ್ವರಿ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಜೆಡಿಯು ಹಾಗೂ ಟಿಡಿಪಿ ಕೂಡ ಹುದ್ದೆಯ ಮೇಲೆ ಕಣ್ಣಿಟ್ಟಿವೆ. ಮತ್ತೊಂದೆಡೆ, “ಟಿಡಿಪಿಯ ಅಭ್ಯರ್ಥಿಯನ್ನೇ ಲೋಕಸಭೆ ಸ್ಪೀಕರ್‌ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂಬ ಮಾತುಗಳನ್ನು ನಾನು ಕೇಳಿದೆ. ಹಾಗೊಂದು ವೇಳೆ, ಟಿಡಿಪಿಯ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್‌ ಆಗುವುದಾದರೆ, ಇಂಡಿಯಾ ಒಕ್ಕೂಟದ ಪಕ್ಷಗಳು ಚರ್ಚಿಸುತ್ತವೆ. ಆ ಮೂಲಕ ಟಿಡಿಪಿ ಅಭ್ಯರ್ಥಿಗೇ ಬೆಂಬಲ ಸೂಚಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂಬುದಾಗಿ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವತ್‌ ತಿಳಿಸಿದ್ದಾರೆ.

ಜೆಡಿಯು ಪಕ್ಷವು 12 ಸಂಸದರನ್ನು ಹೊಂದಿದ್ದರೆ, ಟಿಡಿಪಿ 16 ಸಂಸದರನ್ನು ಹೊಂದಿದೆ. ಎರಡೂ ಪಕ್ಷಗಳ ನಾಯಕರಾದ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರು ನಾವು ಎನ್‌ಡಿಎ ಜತೆ ನಿಲ್ಲುತ್ತೇವೆ ಎಂದಿದ್ದಾರೆ. ನರೇಂದ್ರ ಮೋದಿ ಅವರು ಸಂಪುಟ ರಚನೆಯ ವೇಳೆಯೂ ಪ್ರಾಬಲ್ಯ ಸಾಧಿಸಿದ್ದರು. ಕೇಂದ್ರ ಗೃಹ, ರಕ್ಷಣೆ, ಹಣಕಾಸು ಹಾಗೂ ವಿದೇಶಾಂಗ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಂಡಿದೆ. ಹಾಗಾಗಿ, ಟಿಡಿಪಿ ಅಭ್ಯರ್ಥಿಯೇ ಸ್ಪೀಕರ್‌ ಆಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Narendra Modi : ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ; ಶ್ರೀನಗರದಲ್ಲಿ ನಿಂತು ಉಗ್ರರ ದಮನಕ್ಕೆ ಶಪಥ ತೊಟ್ಟ ಮೋದಿ

Exit mobile version