Site icon Vistara News

1963ರ ಚೀನಾ-ಕಾಂಗ್ರೆಸ್​ ಒಪ್ಪಂದ ಏನು ಎಂದು ಪ್ರಶ್ನಿಸಿದ ಬಿಜೆಪಿ ನಾಯಕ; ರಾಹುಲ್ ಗಾಂಧಿ ಉಚ್ಚಾಟನೆ ಮಾಡಲು ಖರ್ಗೆಗೆ ಆಗ್ರಹ

permission Denied to land Rahul's plane at Varanasi, Congress criticizes

ನವ ದೆಹಲಿ: ‘ಗಡಿಯಲ್ಲಿ ಚೀನಾ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ. ನಮ್ಮ ದೇಶದ ಯೋಧರು ಆ ದೇಶದ ಸೈನಿಕರಿಂದ ಪೆಟ್ಟು ತಿನ್ನುತ್ತಿದ್ದಾರೆ. ಇಷ್ಟೆಲ್ಲ ಆದರೂ ಕೇಂದ್ರ ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿಯೇ ಇದೆ’ ಎಂದು ಹೇಳಿಕೆ ನೀಡುವ ಮೂಲಕ ಭಾರತೀಯ ಸೇನೆಗೆ ಅವಮಾನ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಗೌರವ್​ ಭಾಟಿಯಾ ‘ಸೇನೆಗೇ ಅವಮಾನ ಮಾಡಿದ ರಾಹುಲ್​ ಗಾಂಧಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದಿಂದ ಕೂಡಲೇ ಉಚ್ಚಾಟಿಸಿಬೇಕು. ಇಲ್ಲದೆ ಇದ್ದರೆ, ಖರ್ಗೆ ಒಬ್ಬ ರಿಮೋಟ್​ ಕಂಟ್ರೋಲ್ ನಾಯಕ ಎಂದೇ ನಾವು ಪರಿಗಣಿಸುತ್ತೇವೆ’ ಎಂದು ಹೇಳಿದ್ದಾರೆ.
‘ರಾಹುಲ್​ ಗಾಂಧಿಯವರು ಭಾರತೀಯ ಸೇನೆಯನ್ನು ಅವಮಾನಿಸುವ ಹೇಳಿಕೆಯನ್ನು ನಿರಂತರವಾಗಿ ಕೊಡುತ್ತಲೇ ಬಂದಿದ್ದಾರೆ. ನಾನು 1963ರ ಸಂದರ್ಭದ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಅದೇ ವರ್ಷದಲ್ಲಿ ಗಡಿಭಾಗದಲ್ಲಿರುವ ಭಾರತದ 3,80,000 ಚದರ್​ ಅಡಿ ಕಿಲೋಮೀಟರ್​​ಗಳಷ್ಟು ಉದ್ದದ ಭೂಮಿಯನ್ನು ಚೀನಾ ಅತಿಕ್ರಮಿಸಿಕೊಂಡಿದ್ದಾಗಿ ಆ ಸಮಯದ ಸಂಸತ್ತಿನ ನಡಾವಳಿಗಳು ಸೂಚಿಸುತ್ತವೆ. ಆಗ ಕಾಂಗ್ರೆಸ್​ ಆಡಳಿತವೇ ಇತ್ತು. ಚೀನಾ ನಮ್ಮ ಭೂಭಾಗ ಅತಿಕ್ರಮಿಸಿಕೊಂಡಿದ್ದರೂ ಕಾಂಗ್ರೆಸ್​ ಮೌನವಹಿಸಿತ್ತು. ಕಾಂಗ್ರೆಸ್​ ಪಕ್ಷ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇ ಈ ಮೌನಕ್ಕೆ ಕಾರಣ ಎಂದು ಗೌರವ್​ ಭಾಟಿಯಾ ಆರೋಪಿಸಿದ್ದಾರೆ.

‘ಆಗ ಭಾರತದ ಭೂಭಾಗವನ್ನು ಚೀನಾ ಆಕ್ರಮಣ ಮಾಡಿಕೊಂಡಿದ್ದನ್ನು ಕಾಂಗ್ರೆಸ್​ ಎಂದಿಗೂ ಖಂಡಿಸಲಿಲ್ಲ. ತಾನು ಅದನ್ನು ವಿರೋಧಿಸಲಿಲ್ಲ ಎಂಬ ಸಣ್ಣ ಪಶ್ಚಾತ್ತಾಪವೂ ಆ ಪಕ್ಷಕ್ಕೆ ಇಲ್ಲ. ಯಾರು ದೇಶದ್ರೋಹಿಗಳು ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಚೀನಾ ನಮ್ಮ ಭೂಭಾಗ ಅತಿಕ್ರಮಣ ಮಾಡಿಕೊಂಡರೂ ಕಾಂಗ್ರೆಸ್​ ಯಾಕೆ ಸುಮ್ಮನಿತ್ತು? ಚೀನಾದೊಂದಿಗೆ ಕಾಂಗ್ರೆಸ್​ ಮಾಡಿಕೊಂಡಿದ್ದ ವಾಸ್ತವ ಒಪ್ಪಂದ ಏನು? ಎಂಬಿತ್ಯಾದಿ ಬಗ್ಗೆ ಕಾಂಗ್ರೆಸ್ ಯಾವತ್ತೂ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಎಲ್ಲವನ್ನೂ ಕದ್ದುಮುಚ್ಚಿಯೇ ಮಾಡಿತು’ ಎಂದು ಹರಿಹಾಯ್ದಿದ್ದಾರೆ.

ಗಡಿ ಭಾಗದಲ್ಲಿ ಯಾವುದೇ ದೇಶ ನಮ್ಮೊಂದಿಗೆ ಸಂಘರ್ಷಕ್ಕೆ ನಿಂತಾಗಲೂ, ನಮ್ಮ ಸೈನಿಕರ ಮೇಲೆ ದಾಳಿ ಮಾಡಿದಾಗಲೂ ಇಲ್ಲಿ ದೇಶದೊಳಗೆ ಕಾಂಗ್ರೆಸ್​ ಪಕ್ಷ ಮತ್ತು ರಾಹುಲ್​ ಗಾಂಧಿ ನಮ್ಮ ದೇಶದ ವಿರುದ್ಧವೇ ಮಾತನಾಡುತ್ತಾರೆ. ಇದು ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದು ಹೇಳಿದ ಭಾಟಿಯಾ ‘ರಾಹುಲ್​ ಗಾಂಧಿ ಏನು ಗೊತ್ತಿದೆ ಎಂದು ಮಾತನಾಡುತ್ತಾರೆ? ಅವರನ್ನು ಈ ದೇಶ ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ರಾಹುಲ್ ಗಾಂಧಿ ಎಸಿ ರೂಮಿನಲ್ಲಿ ತಣ್ಣಗೆ ಮಲಗಿದ್ದಾಗ, ಇತ್ತ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರು ಸೈನಿಕರಿದ್ದಲ್ಲಿಗೇ ಹೋಗಿ, ಅವರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ: Rahul Gandhi On Army | ನಮ್ಮ ಸೈನಿಕರಿಗೆ ಪೆಟ್ಟು ಬೀಳುತ್ತಿವೆ, ದೇಶದ ಯೋಧರಿಗೆ ರಾಹುಲ್‌ ಗಾಂಧಿ ಅವಮಾನ

Exit mobile version