Site icon Vistara News

ಉಪರಾಷ್ಟ್ರಪತಿ ಚುನಾವಣೆ: ಮತ್ತೆ ಎನ್‌​ಡಿಎ ಒಕ್ಕೂಟದ ಅಭ್ಯರ್ಥಿಗೇ ಮಣೆ ಹಾಕಿದ ಮಾಯಾವತಿ!

BSP chief Mayawati declares support for NDA Candidate In Vice President Election

ನವ ದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮುರನ್ನು ಬೆಂಬಲಿಸಿ, ಮತ ಹಾಕಿದ್ದ ಉತ್ತರ ಪ್ರದೇಶ ಬಹುಜನ ಸಮಾಜ ಪಾರ್ಟಿ (ಮಾಯಾವತಿ ಪಕ್ಷ) ಇದೀಗ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್​ಡಿಎ ಒಕ್ಕೂಟದ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ಘೋಷಿಸಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಜಗದೀಪ್​ ಧನಕರ್​ ಅವರನ್ನು ಬೆಂಬಲಿಸುತ್ತೇವೆ ಎಂದು ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಹಿಂದಿಯಲ್ಲಿ ಟ್ವೀಟ್​ ಮಾಡಿದ ಅವರು, ‘ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಸಾಮರಸ್ಯ ಇಲ್ಲದ ಕಾರಣ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಗೆ ಅವಿರೋಧ ಆಯ್ಕೆ ಆಗಲೇ ಇಲ್ಲ. ಚುನಾವಣೆ ನಡೆಯಿತು. ಉಪರಾಷ್ಟ್ರಪತಿ ಆಯ್ಕೆಯಲ್ಲೂ ಹೀಗೇ ಆಗುತ್ತಿದೆ. ಒಮ್ಮತ ಇಲ್ಲದ ಕಾರಣ ಎನ್​ಡಿಎ ಒಕ್ಕೂಟದ ಅಭ್ಯರ್ಥಿ ವಿರುದ್ಧ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ಈ ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಎನ್​​ಡಿಎಯ ಜಗದೀಪ್ ಧನಕರ್​ಗೆ ಮತದಾನ ಮಾಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.

ಇದೀಗ ಎನ್​ಡಿಎ ಒಕ್ಕೂಟದ ಅಭ್ಯರ್ಥಿ ವಿರುದ್ಧ ಒಂದಾಗಿರುವ ಪ್ರತಿಪಕ್ಷಗಳ ವಿರುದ್ಧವೇ ಮಾಯಾವತಿಗೆ ಅಸಮಾಧಾನ ಇದೆ. ಎಲ್ಲ ಪ್ರತಿಪಕ್ಷಗಳೂ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮುರನ್ನು ಆಯ್ಕೆ ಮಾಡುವಾಗ ಮಾಯಾವತಿ, ‘ನಾವು ಎನ್​ಡಿಎ ಒಕ್ಕೂಟಕ್ಕಾಗಲೀ, ಬಿಜೆಪಿಗಾಗಲೀ ಬೆಂಬಲ ಸೂಚಿಸುತ್ತಿಲ್ಲ. ಆದರೆ ಅವರ ಅಭ್ಯರ್ಥಿಗಷ್ಟೇ ಮತ ಹಾಕುತ್ತೇವೆ’ ಎಂದು ಹೇಳಿದ್ದರು.

ಇದನ್ನೂ ಓದಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮಾಯಾವತಿ ಬೆಂಬಲ ಘೋಷಣೆ

Exit mobile version