Site icon Vistara News

Viksit Bharat: 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣ; ಮೋದಿ ಮಾಸ್ಟರ್‌ ಪ್ಲ್ಯಾನ್‌ ಹೀಗಿದೆ

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚುನಾವಣೆ ರ‍್ಯಾಲಿಯೇ ಇರಲಿ, ಸಾರ್ವಜನಿಕ ಸಮಾರಂಭವೇ ಇರಲಿ, ಜಾಗತಿಕ ವೇದಿಕೆಯೇ ಸಿಗಲಿ, ‘2047ರ ವೇಳೆಗೆ ವಿಕಸಿತ ಭಾರತ (Viksit Bharat) ನಿರ್ಮಾಣವೇ ನಮ್ಮ ಗುರಿ’ ಎಂದು ಹೇಳುತ್ತಾರೆ. ಹಾಗಾದರೆ, 2047ರ ವೇಳೆಗೆ ವಿಕಸಿತ ಭಾರತ (Developed India) ನಿರ್ಮಾಣಕ್ಕೆ ಏನು ಮಾಡಬೇಕು? ಇದನ್ನು ಚರ್ಚಿಸಲೆಂದೇ ನರೇಂದ್ರ ಮೋದಿ ಅವರು ಭಾನುವಾರ (ಮಾರ್ಚ್‌ 3) ಸಚಿವರೊಂದಿಗೆ ಸಭೆ ನಡೆಸಿದ್ದು, ವಿಕಸಿತ ಭಾರತದ ಕಲ್ಪನೆ ಸಾಕಾರಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ರೂಪಿಸಬೇಕಾದ ಯೋಜನೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಕಸಿತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ಸಭೆಯಲ್ಲಿ ವಿಷನ್‌ ಇಂಡಿಯಾ ಡಾಕ್ಯುಮೆಂಟ್‌ ಕೂಡ ರಿಲೀಸ್‌ ಮಾಡಿದ್ದಾರೆ. 25 ವರ್ಷಗಳ ದೂರದೃಷ್ಟಿಯ ಕನಸು ನನಸಾಗಿಸುವ ದಿಸೆಯಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳು, ದೇಶದ ಜನರ ಏಳಿಗೆ, ಸುಸ್ಥಿರ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ, ನಾವೀನ್ಯತೆ, ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಅವರು ಮಾತನಾಡಿದ್ದು, ಸಚಿವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಕಸಿತ ಭಾರತ ನಿರ್ಮಾಣದ ದೂರದೃಷ್ಟಿಯ ಸಾಕಾರಕ್ಕಾಗಿ 2021ರ ಡಿಸೆಂಬರ್‌ನಿಂದ 2024ರ ಜನವರಿ ಅವಧಿಯಲ್ಲಿ ದೇಶಾದ್ಯಂತ ಸುಮಾರು 2,700 ಸಭೆ ನಡೆಸಲಾಗಿದೆ. ಅಷ್ಟೇ ಅಲ್ಲ, ತಜ್ಞರು, ಪರಿಣತರು ಮಾಡಿದ 450 ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ ವಿಷನ್‌ ಇಂಡಿಯಾ ಡಾಕ್ಯುಮೆಂಟ್‌ ತಯಾರಿಸಲಾಗಿದೆ. ಇದರಲ್ಲಿ ಭಾರತದ ಅಭಿವೃದ್ಧಿಯ ಸ್ಪಷ್ಟ ಚಿತ್ರಣ ಇದೆ ಎನ್ನಲಾಗಿದೆ. ಸಭೆಯಲ್ಲಿ ಸಚಿವರು, ಆಯಾ ಇಲಾಖೆಗಳ ಕಾರ್ಯದರ್ಶಿಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ವಿಕಸಿತ ಭಾರತಕ್ಕೆ ಏನೆಲ್ಲ ಯೋಜನೆ?

ದೇಶದ ಏಳಿಗೆ ದೃಷ್ಟಿಯಿಂದ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದ್ದು, ಇದಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡುವುದು. ಸರ್ಕಾರದ ಹಣ ವ್ಯಯವಾಗದಂತೆ ತಡೆಯುವುದು. ಯುವಕರ ಕೌಶಲ ಅಭಿವೃದ್ಧಿ, ಪ್ರತಿಯೊಂದು ಕ್ಷೇತ್ರದಲ್ಲೂ ನಾವೀನ್ಯತೆಯ ಅಳವಡಿಕೆ. ಯುವಕರ ಸಂಖ್ಯೆ ಹೆಚ್ಚಳ, ವಯಸ್ಸಾದವರ ಸಹಭಾಗಿತ್ವ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ, ಆರ್ಥಿಕತೆಯ ಸ್ಥಿರತೆ ಕಾಪಾಡುವುದು, ರೈತರು, ಬಡವರ ಏಳಿಗೆಯ ದಿಸೆಯಲ್ಲಿ ಯೋಜನೆಗಳನ್ನು ರೂಪಿಸುವುದು ಸೇರಿ ಹಲವು ಕ್ರಿಯಾಯೋಜನೆಗಳನ್ನು ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿಂತೆ ಬೇಡ, ಗೆಲುವು ನಮ್ಮದೇ ಎಂದ ಪ್ರಧಾನಿ

ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ, ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಇದರ ಬಗ್ಗೆ ಯಾವುದೇ ಚಿಂತೆ ಬೇಡ. ಚುನಾವಣೆ ಬಳಿಕ ನಾವು ಮತ್ತೆ ಸಿಗೋಣ. ಆದರೆ, ಚುನಾವಣೆ ಸಂದರ್ಭದಲ್ಲಿ ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮುಂದಿನ 100 ದಿನಗಳು ಪ್ರಮುಖವಾಗಿವೆ” ಎಂಬುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version