Site icon Vistara News

Jharkhand Floor Test: ವಿಶ್ವಾಸಮತ ಗೆದ್ದ ಸಿಎಂ ಚಂಪಯಿ ಸೊರೆನ್;‌ ಜೆಎಂಎಂ ಸರ್ಕಾರ ಸೇಫ್!

Champai Soren

Jharkhand Floor Test: CM Champai Soren Wins Floor Test; JMM Government Safe

ರಾಂಚಿ: ಜಾರ್ಖಂಡ್‌ನಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ (Jharkhand Politics_ ಒಂದು ಅಧ್ಯಾಯ ಸುಖಾಂತ್ಯ ಕಂಡಿದೆ. ಹೇಮಂತ್‌ ಸೊರೆನ್‌ (Hemant Soren) ರಾಜೀನಾಮೆ ಬಳಿಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಚಂಪಯಿ ಸೊರೆನ್‌ (Champai Soren) ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಜಾರ್ಖಂಡ್‌ ಮುಕ್ತಿ ಮೋರ್ಚಾ ನೇತೃತ್ವದ ಸರ್ಕಾರವು ಸೇಫ್‌ ಆಗಿದೆ.

ಸದನದಲ್ಲಿ ಶಾಸಕರು ತಾವು ಕುಳಿತಲ್ಲಿಯೇ ಎದ್ದು ನಿಲ್ಲುವ ಮೂಲಕ ಸರ್ಕಾರದ ಪರ ಹಾಗೂ ವಿರುದ್ಧವಾಗಿ ಮತ ಚಲಾಯಿಸಲು ಅವಕಾಶ ನೀಡಲಾಯಿತು. ರಾಜ್ಯ ಸರ್ಕಾರದ ಪರ 47 ಮತಗಳು ಲಭಿಸಿದರೆ, ವಿರುದ್ಧವಾಗಿ 29 ಮತಗಳು ಚಲಾವಣೆಯಾದವು. ಬಂಧನಕ್ಕೀಡಾಗಿ, ಇ.ಡಿ ವಶದಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ಕೂಡ ವಿಶ್ವಾಸಮತಯಾಚನೆಯ ಮತದಾನದಲ್ಲಿ ಪಾಲ್ಗೊಂಡರು.

ಯಾರ ಬಲ ಎಷ್ಟಿದೆ?

ಜಾರ್ಖಂಡ್‌ ವಿಧಾನಸಭೆಯು 81 ಶಾಸಕರ ಬಲವನ್ನು ಹೊಂದಿದ್ದು, ಒಂದು ಕ್ಷೇತ್ರದಲ್ಲಿ ಶಾಸಕನ ಆಯ್ಕೆ ಬಾಕಿ ಇರುವ ಕಾರಣ ಬಹುಮತ ಸಾಬೀತಿಗೆ 41 ಶಾಸಕರ ಬೆಂಬಲ ಬೇಕಿತ್ತು. ಜೆಎಂಎಂ ಮೈತ್ರಿಕೂಟವು 48 ಶಾಸಕರ ಬಲವನ್ನು ಹೊಂದಿದೆ. ಜೆಎಂಎಂ 29, ಕಾಂಗ್ರೆಸ್‌ 17, ಆರ್‌ಜೆಡಿ 1 ಹಾಗೂ ಸಿಪಿಐ (ಎಂಎಲ್‌) ಒಬ್ಬ ಶಾಸಕನನ್ನು ಹೊಂದಿದೆ. ಇನ್ನು ಬಿಜೆಪಿ ಮೈತ್ರಿಕೂಟವು ಒಟ್ಟು 29 ಶಾಸಕರನ್ನು ಹೊಂದಿದೆ.

ಇ.ಡಿಗೆ ಹೈಕೋರ್ಟ್‌ ನೋಟಿಸ್‌

ಇ.ಡಿ ಅಧಿಕಾರಿಗಳ ಬಂಧನ ಪ್ರಶ್ನಿಸಿ ಹೇಮಂತ್‌ ಸೊರೆನ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ರಾಂಚಿ ಹೈಕೋರ್ಟ್‌, ಇ.ಡಿ ಅಧಿಕಾರಿಗಳಿಗೆ ನೋಟಿಸ್‌ ನೀಡಿದೆ. ಹೇಮಂತ್‌ ಸೊರೆನ್‌ ಅರ್ಜಿಗೆ ಸಂಬಂಧಿಸಿದಂತೆ ಫೆಬ್ರವರಿ 9ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೋರ್ಟ್‌ ಸೂಚಿಸಿದೆ. ಹಾಗೆಯೇ, ಫೆಬ್ರವರಿ 12ಕ್ಕೆ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: Hemant Soren: ಹೇಮಂತ್‌ ಸೊರೆನ್‌ ಬಂಧನಕ್ಕಿಲ್ಲ ತಡೆ, 5 ದಿನ ಕಸ್ಟಡಿಗೆ; ಚಂಪಯಿ ಪದಗ್ರಹಣ

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ, ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ, ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ, ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು. ಜನವರಿ 2ರಂದು ಚಂಪಯಿ ಸೊರೆನ್‌ ಅವರು ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version