Site icon Vistara News

Coimbatore Blast | ಕೊಯಮತ್ತೂರು ಸ್ಫೋಟ ಆಕಸ್ಮಿಕವಲ್ಲ, ಭಯೋತ್ಪಾದನಾ ಕೃತ್ಯ?

Coimbatore Blast

ನವ ದೆಹಲಿ: ಭಾನುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ (Coimbatore Blast) ಪ್ರಕರಣವು ಆಕಸ್ಮಿಕ ಸ್ಫೋಟವಲ್ಲ, ಅದು ಭಯೋತ್ಪಾದನೆ ಕೃತ್ಯವಾಗಿತ್ತು ಎಂಬ ಸಂಗತಿಯು ಇದೀಗ ಬೆಳಕಿಗೆ ಬಂದಿದೆ. ಗುಪ್ತಚರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಈ ಮಾಧ್ಯಮಗಳು ಕುರಿತು ವರದಿ ಮಾಡುತ್ತಿವೆ. ಈ ಸ್ಫೋಟದಲ್ಲಿ ಜಮೇಶಾ ಮುಬಿನ್ ಎಂಬಾತ ಮೃತಪಟ್ಟಿದ್ದ. ಅಸಲಿಗೆ ಆತನೇ ಈ ಸ್ಫೋಟದ ರೂವಾರಿ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಈ ಪ್ರಕರಣವನ್ನು ಎನ್ಐಎ ತನಿಖೆ ನಡೆಸುವ ಸಾಧ್ಯತೆ ಇದೆ.

ಈ ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ಮನೆಯಿಂದ, ನಾಡ ಬಾಂಬ್ ತಯಾರಿಸಲು ಬೇಕಾದ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪುಡಿ, ಇದ್ದಿಲು ಮತ್ತು ಸಲ್ಫರ್ ಸೇರಿದ ಇನ್ನಿತರ ಕಚ್ಚಾವಸ್ತುಗಳನ್ನು ಪೊಲೀಸರು ಜಫ್ತಿ ಮಾಡಿದ್ದಾರೆ. ಸ್ಫೋಟದ ಸ್ಥಳದಿಂದಲೂ ಪೊಟ್ಯಾಷಿಯಂ ನೈಟ್ರೆಟ್, ಸಲ್ಫರ್ ಸಂಗ್ರಹಿಸಲಾಗಿದೆ.

ಸ್ಫೋಟ ಸಂಭವಿಸುವ ಕೆಲವು ಗಂಟೆಗಳಿಗೆ ಮೊದಲು ಮುಬಿನ್ ಹಾಗೂ ಮತ್ತಿತರು ಅನುಮಾನಕ್ಕೆ ಎಡೆ ಮಾಡಿಕೊಡುವ ವಸ್ತುವನ್ನು ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯ ದೃಶ್ಯಗಳು ಈಗ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಬಿನ್ ಸಹವರ್ತಿಗಳನ್ನು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಗ್ಯಾಸ್ ಸಿಲಿಂಡರ್ ಸ್ಫೋಟವನ್ನು ತಮಿಳುನಾಡು ಬಿಜೆಪಿಯು ಭಯೋತ್ಪಾದನಾ ಕೃತ್ಯವಾಗಿದೆ ಎಂದು ಆರೋಪಿಸಿದ್ದು,ಐಸೀಸ್ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ. ಕೊಯಮತ್ತೂರು ಸಿಲಿಂಡಸ್ ಸ್ಫೋಟ ಕೇವಲ ಸಿಲಿಂಡರ್ ಸ್ಫೋಟವಲ್ಲ, ಅದು ಭಯೋತ್ಪಾದನಾ ಕೃತ್ಯವಾಗಿದೆ. ತಮಿಳುನಾಡು ಮುಖ್ಯಮಂತ್ರಿಗಳು ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆಯೇ? ಸರ್ಕಾರವು ಈ ಮಾಹಿತಿಯನ್ನು 12 ಗಂಟೆಗಳಿಂದ ಮುಚ್ಚಿಟ್ಟಿದೆ. ಇದು ತಮಿಳುನಾಡು ಡಿಎಂಕೆ ಸರ್ಕಾರ ಮತ್ತು ಗುಪ್ತಚರ ದಳದ ಸಂಪೂರ್ಣ ವೈಫಲ್ಯ ಅಲ್ಲವೇ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Coimbatore Blast | ಮೃತ ವ್ಯಕ್ತಿಯ ಮನೆಯಲ್ಲಿ ಭಾರೀ ಸ್ಫೋಟಕ! ಐಸಿಸ್ ಟೆರರ್ ಲಿಂಕ್ ತನಿಖೆ

Exit mobile version