Site icon Vistara News

Compensation | ಸರ್ಕಾರದಿಂದ 10,000 ಕೋಟಿ ರೂ. ಪರಿಹಾರ ಕೇಳಿದ ವ್ಯಕ್ತಿ! ಕಾರಣವೇನು ಗೊತ್ತಾ?

ಭೋಪಾಲ್: ಅಪರಾಧಿಗೆ ಶಿಕ್ಷೆ ತಪ್ಪಿದರೂ ತೊಂದರೆಯಿಲ್ಲ. ಆದರೆ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ಮಾತಿದೆ. ಅದೇ ರೀತಿ ತಾನು ಮಾಡದ ತಪ್ಪಿಗೆ ಎರಡು ವರ್ಷಗಳ ಕಾಲ ಅಪರಾಧಿ ಸ್ಥಾನದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಇದೀಗ ಮಧ್ಯ ಪ್ರದೇಶ ಸರ್ಕಾರದಿಂದ ಪರಿಹಾರ (Compensation) ಕೇಳುತ್ತಿದ್ದಾನೆ. ಅಂದ ಹಾಗೆ ಆತ ಕೇಳುತ್ತಿರುವುದು ಸಾವಿರ, ಲಕ್ಷಗಳ ಲೆಕ್ಕಾಚಾರವಲ್ಲ, ಬದಲಾಗಿ 10,000 ಕೋಟಿ ರೂಪಾಯಿ!(Viral News)

ಇದನ್ನೂ ಓದಿ: Viral Video | ʻಆಪ್ ಕಾ ಆನಾ ದಿಲ್ ಧಡ್ಕಾನಾʼ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಪುಟ್ಟ ಹುಡುಗಿ! ವಿಡಿಯೊ ಇಲ್ಲಿದೆ

ಮಧ್ಯಪ್ರದೇಶದ ರತ್ಲಂ ನಿವಾಸಿ ಕಾಂತಿಲಾಲ್ ಭೀಲ್(35) ಈ ರೀತಿ ಪರಿಹಾರ ಕೇಳಿರುವ ವ್ಯಕ್ತಿ. 2018ರ ಜುಲೈ ತಿಂಗಳಲ್ಲಿ ಮಹಿಳೆಯೊಬ್ಬರು ಕಾಂತಿಲಾಲ್ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡಿದ್ದರು. ಸಹೋದರನ ಮನೆಗೆ ಬಿಡುವುದಾಗಿ ಹೇಳಿ ಕಾಂತಿಲಾಲ್ ಬೇರೆಡೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಬೇರೊಬ್ಬ ವ್ಯಕ್ತಿಗೆ ನನ್ನನ್ನು ಹಸ್ತಾಂತರಿಸಿದ್ದು, ಆತ ಸತತ ಆರು ತಿಂಗಳ ಕಾಲ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ಹೇಳಿದ್ದಳು. ಆ ಹಿನ್ನೆಲೆ ಪೊಲೀಸರು 2020ರ ಡಿ.23ರಂದು ಕಾಂತಿಲಾಲ್ ಅನ್ನು ಬಂಧಿಸಿದ್ದರು.

ಎರಡು ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದಿದ್ದು, ಇತ್ತೀಚೆಗೆ ಸ್ಥಳೀಯ ನ್ಯಾಯಾಲಯವು ಕಾಂತಿಲಾಲ್ ಅನ್ನು ನಿರಪರಾಧಿ ಎಂದು ಘೋಷಿಸಿದೆ. ನ್ಯಾಯಾಲಯದಿಂದ ತೀರ್ಪು ಹೊರಬೀಳುತ್ತಿದ್ದಂತೆಯೇ ಕಾಂತಿಲಾಲ್ ರಾಜ್ಯ ಸರ್ಕಾರದಿಂದ ಪರಿಹಾರ ಕೋರಿ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಮೆಟ್ಟಿಲೇರಿದ್ದಾನೆ.

ಇದನ್ನೂ ಓದಿ: Viral Video | ಮನದೊಡತಿ ಮಡದಿಗೆ ಅದ್ಭುತ ಉಡುಗೊರೆ ಕೊಟ್ಟ ಪತಿ; ರಿಸೆಪ್ಷನ್​​ನಲ್ಲಿ ವಿಶೇಷ ಕ್ಷಣ

ಸರ್ಕಾರ ತನಗೆ 10,006.02 ಕೋಟಿ ರೂ. ಅನ್ನು ಪರಿಹಾರವಾಗಿ ಕೊಡಬೇಕು ಎಂದು ಕಾಂತಿಲಾಲ್ ಕೇಳಿದ್ದಾನೆ. ಮನುಷ್ಯ ಜೀವನ ಅತಿ ಮುಖ್ಯ. ಆದರೆ ಅದರಲ್ಲಿನ ಎರಡು ವರ್ಷಗಳನ್ನು ಹಾಳು ಮಾಡಿದ್ದಕ್ಕಾಗಿ 10,000 ಕೋಟಿ ರೂ. ಕೊಡಬೇಕು ಎಂದಿದ್ದಾನೆ. ಹಾಗೆಯೇ ಎರಡು ವರ್ಷಗಳ ಕಾಲ ತನ್ನ ಹಾಗೂ ಕುಟುಂಬದವರ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡಿದ್ದಕ್ಕಾಗಿ, ಈ ಸಮಯದಲ್ಲಿ ವಕೀಲರಿಗೆ ತಾವು ಭರಿಸಿದ ವೆಚ್ಚಕ್ಕಾಗಿ 6.02 ಕೋಟಿ ರೂ. ಕೊಡಬೇಕು ಎಂದು ಅರ್ಜಿಯಲ್ಲಿ ಕೇಳಿದ್ದಾನೆ. ಕುಟುಂಬಕ್ಕೆ ತಾನೇ ಆಧಾರ ಸ್ತಂಭವಾಗಿದ್ದು, ತಾನು ಜೈಲು ಸೇರಿದ ಸಮಯದಲ್ಲಿ ಕುಟುಂಬ ಹೊತ್ತಿನ ಊಟಕ್ಕೂ ಪರದಾಡಿದೆ ಎಂದು ಕಾಂತಿಲಾಲ್ ತಿಳಿಸಿದ್ದಾನೆ. ಈ ಅರ್ಜಿಯ ವಿಚಾರಣೆ ಜ.10ರಂದು ನಡೆಯಲಿದೆ.

Exit mobile version