Site icon Vistara News

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಸಿಗಲಿದೆ ಮತದಾರರ ಪಟ್ಟಿ; 5 ಎಂಪಿಗಳ ಪತ್ರದ ಬೆನ್ನಲ್ಲೇ ಬದಲಾವಣೆ​

Congress Internal Poll Rules Changed After Five MPs Letter

ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆಯಲಿರುವ ಚುನಾವಣೆ (Congress President Election) ಪಾರದರ್ಶಕವಾಗಿ, ನ್ಯಾಯಯುತವಾಗಿ ನಡೆಯಬೇಕು ಎಂಬ ಸಲಹಾ ಪತ್ರವನ್ನು ಕಾಂಗ್ರೆಸ್​ನ ಶಶಿ ತರೂರ್​, ಕಾರ್ತಿ ಚಿದಂಬರಂ, ಪ್ರದ್ಯುತ್ ಬೊರ್ಡೊಲೊಯ್, ಅಬ್ದುಲ್ ಖಲೀಕ್ ಸೇರಿ ಕಾಂಗ್ರೆಸ್​​ನ ಆಂತರಿಕ ಚುನಾವಣಾ ಸಮಿತಿ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಬರೆದಿದ್ದರು. ಮತದಾರರ ಪಟ್ಟಿ, ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್​ ಎಲ್ಲ ಪ್ರಮುಖರಿಗೆ ಸಿಗುವಂತಾಗಲಿ ಎಂದೂ ಕೋರಿದ್ದರು. ಐವರು ಸಂಸದರು ಈ ಪತ್ರವನ್ನು ಗುಟ್ಟಾಗಿ ಬರೆದಿದ್ದರೂ ಅದು ಹೇಗೋ ಸೋರಿಕೆಯಾಗಿ ವಿವಾದ ಸೃಷ್ಟಿಸಿತ್ತು.

ಅದೇನೇ ಇದ್ದರೂ ಈ ಸಂಸದರ ಪತ್ರವನ್ನು ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದ್ದಾರೆ. ‘ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಎಲ್ಲರಿಗೂ ಎಲೆಕ್ಟೋರಲ್​ ಕಾಲೇಜ್​​ನ 9000 ಸದಸ್ಯರ ಪಟ್ಟಿ ಕಾಣುವಂತೆ ಮಾಡಲಾಗುವುದು, ಅಂದರೆ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮತ ಹಾಕಲು ಯಾರೆಲ್ಲ ಅರ್ಹತೆ ಪಡೆದಿದ್ದಾರೋ (ಇವರನ್ನೆಲ್ಲ ಒಟ್ಟಾಗಿ ಎಲೆಕ್ಟೊರಲ್​ ಕಾಲೇಜ್​ ಎಂದು ಕರೆಯಲಾಗುತ್ತದೆ) ಅವರ ಹೆಸರು ಕಾಣಸಿಗುವಂತೆ ಮಾಡಲಾಗುವುದು. ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಕಚೇರಿಯಲ್ಲಿ ಸೆಪ್ಟೆಂಬರ್​ 20ರಿಂದ ಈ ಪಟ್ಟಿ ವೀಕ್ಷಣೆಗೆ ಲಭ್ಯ ಇರಲಿದೆ’ ಎಂದು ಮಧುಸೂಧನ ಮಿಸ್ತ್ರಿ ಮಾಹಿತಿ ನೀಡಿದ್ದಾರೆ.

ಬೇರೆ ರಾಜ್ಯಗಳ ಕಾಂಗ್ರೆಸ್​ ನಾಯಕರು ಯಾರಾದರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನೂ ಮಿಸ್ತ್ರಿ ವಿವರಿಸಿದ್ದಾರೆ. ಯಾವುದೇ ರಾಜ್ಯದಿಂದ ಯಾವುದೇ ಕಾಂಗ್ರೆಸ್ ನಾಯಕರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ, ಅವರು ಎಲೆಕ್ಟೋರಲ್​ ಕಾಲೇಜ್​​ನಲ್ಲಿ ಇರುವ ತಮ್ಮ ರಾಜ್ಯದ 10 ಮತದಾರರ ಹೆಸರನ್ನು ಅದೇ ರಾಜ್ಯದ ಕಾಂಗ್ರೆಸ್​ ಕಚೇರಿಯಲ್ಲಿ ನೋಡಿಕೊಳ್ಳಬಹುದು. ನಂತರ ಅವರು ನಾಮಪತ್ರ ಸಲ್ಲಿಸಿದ ಬಳಿಕವಷ್ಟೇ ಎಲ್ಲ 9000 ಮತದಾರರ ಪಟ್ಟಿ ಕಾಣಸಿಗುತ್ತದೆ. ಅದು ಎಐಸಿಸಿ ಕಚೇರಿಯಲ್ಲಿರುವ ಕೇಂದ್ರ ಚುನಾವಣಾ ಪ್ರಾಧಿಕಾರದ ಕಚೇರಿಯಲ್ಲಿ ಮಾತ್ರ ಇರಲಿದೆ. ಸೆಪ್ಟೆಂಬರ್​ 20ರಿಂದ 24ರವರೆಗೆ ಬೆಳಗ್ಗೆ 11ಗಂಟೆಯಿಂದ, ಸಂಜೆ 6ರವರೆಗೂ ಈ ಲಿಸ್ಟ್​ ವೀಕ್ಷಣೆಗೆ ಅವಕಾಶವಿದೆ’ ಎಂದು ಮಿಸ್ತ್ರಿ ಮಾಹಿತಿ ನೀಡಿದ್ದಾರೆ.

‘ಯಾವುದೇ ಕಾಂಗ್ರೆಸ್​ ನಾಯಕರು ತಮ್ಮ ಬೆಂಬಲಿಗರು ಯಾರಿದ್ದಾರೆ ಎಂಬುದನ್ನು ಅರಿಯದೆ ನಾಮಪತ್ರ ಸಲ್ಲಿಸಿ, ನಂತರ ಗೊಂದಲಕ್ಕೀಡಾಗುವ ಸ್ಥಿತಿಯನ್ನು ಇದು ತಪ್ಪಿಸುತ್ತದೆ. ನಾವು ಮಾಡಿರುವ ಈ ಬದಲಾವಣೆ ಶಶಿ ತರೂರ್​ ಮತ್ತು ಪತ್ರಕ್ಕೆ ಸಹಿ ಹಾಕಿದ ಎಲ್ಲ ಸಂಸದರ ಆಶಯವನ್ನು ಈಡೇರಿಸಿದೆ ಎಂದು ನಾನು ಭಾವಿಸುತ್ತೇನೆ’ ಎಂದೂ ಮಧುಸೂಧನ್​ ಮಿಸ್ತ್ರಿ ಹೇಳಿದ್ದಾರೆ.

ಇನ್ನೊಂದು ಮಹತ್ವದ ವಿಷಯವೆಂದರೆ, ಈ ಹಿಂದೆ ಇಂಥ ಹಲವು ಪತ್ರಗಳನ್ನು ಕಾಂಗ್ರೆಸ್ ನಾಯಕತ್ವ ಸಾರಾಸಗಟಾಗಿ ತಿರಸ್ಕರಿಸಿತ್ತು, ಮುಖಂಡರ ಬೇಡಿಕೆಗಳ ಬಗ್ಗೆ ಉದಾಸೀನ ಮಾಡುತ್ತಿತ್ತು. ಆದರೆ ಈ ಸಲ ಐವರು ಸಂಸದರ ಪತ್ರ ಬರುತ್ತಿದ್ದಂತೆ ಅಲರ್ಟ್ ಆಗಿ, ಕೆಲವು ಬದಲಾವಣೆಗಳನ್ನು ಮಾಡಿದೆ. ಪ್ರಮುಖ ನಾಯಕರು ಪಕ್ಷ ಬಿಟ್ಟ ಬೆನ್ನಲ್ಲೇ ಈ ಸುಧಾರಣೆಯೂ ಕಾಣುತ್ತಿದೆ..! ಅಂದಹಾಗೇ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್​ 24ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಚುನಾವಣೆ; ನೆಪಕ್ಕೆ ನಡೆಸುತ್ತಾರೋ ನೋಡುತ್ತೇವೆ ಎಂದ ಜಿ 23 ನಾಯಕರು

Exit mobile version