Site icon Vistara News

Video | ಹನುಮ ಮಂದಿರ ಆಕಾರದ ಕೇಕ್​ ಕತ್ತರಿಸಿದ ಕಾಂಗ್ರೆಸ್ ನಾಯಕ ಕಮಲನಾಥ್​; ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

Congress Leader Kamal Nath cuts temple shaped cake In Chhindwara

ಭೋಪಾಲ್​: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ ನಾಯಕ ಕಮಲನಾಥ್​ ಅವರು ತಮ್ಮ ಹುಟ್ಟೂರಾದ ಚಿಂದ್ವಾರಾಕ್ಕೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದರು. ಈ ವೇಳೆ ಅವರು ತಮ್ಮ ಹುಟ್ಟುಹಬ್ಬವನ್ನು ಮುಂಚಿತವಾಗಿ, ತನ್ನ ಊರಿನ ಜನರು, ಬೆಂಬಲಿಗರೊಂದಿಗೆ ಆಚರಿಸಿಕೊಂಡರು. ಕಮಲನಾಥ್​ ಬರ್ತ್​ ಡೇ ನವೆಂಬರ್ 18ರಂದು ಇದ್ದರೂ ಚಿಂದ್ವಾರಾಕ್ಕೆ ಆಗಮಿಸಿದ ನಾಯಕನನ್ನು ಕಂಡು ಖುಷಿಯಾದ ಅಲ್ಲಿನ ಜನ ಅದ್ದೂರಿಯಾಗಿ ಅವರ ಬರ್ತ್​ ಡೇ ಆಚರಣೆ ಮಾಡಿದ್ದಾರೆ. ದೊಡ್ಡದೊಂದು ಕೇಕ್​ ಕೂಡ ತಯಾರಿಸಲಾಗಿತ್ತು, ಅದನ್ನು ಕಮಲನಾಥ್​ ಕಟ್​ ಮಾಡಿದ್ದಾರೆ. ಆದರೆ ಆ ಕೇಕ್​ ದೇವಸ್ಥಾನದ ಆಕಾರದಲ್ಲಿ ಇದ್ದಿದ್ದು ಮತ್ತು ಅದನ್ನು ಕಮಲನಾಥ್​ ಚಾಕುವಿನಿಂದ ಕತ್ತರಿಸಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ.

ಚಿಂದ್ವಾರಾದಲ್ಲಿರುವ ಕಮಲನಾಥ್​ ಮನೆಯ ಸಮೀಪವೇ ಈ ಬರ್ತ್​ ಡೇ ಸೆಲೆಬ್ರೇಶನ್​ ನಡೆದಿದೆ. ಈ ಆಚರಣೆ ಸಿಕ್ಕಾಪಟೆ ಅದ್ದೂರಿಯಾಗಿತ್ತು. ಅಲ್ಲಿ ನೆರೆದಿದ್ದವರೆಲ್ಲ ಕಮಲನಾಥ್​ ಅವರನ್ನು ಭಾರತೀಯ ರಾಜಕೀಯದ ಕೊಹಿನೂರು ಎಂದು ಕರೆದು, ಹೊಗಳಿದರು. ಅಲ್ಲಿ ಸಂಗೀತ, ಪಟಾಕಿ ಇತ್ತು. ವಿವಿಧ ಉಡುಗೊರೆಗಳನ್ನು ಕೂಡ ಕಮಲನಾಥ್ ಅವರಿಗೆ ನೀಡಿದರು. ಆದರೆ ಕೇಕ್​ ವಿವಾದ ಸೃಷ್ಟಿಸಿತು. ಅದೊಂದು ದೇವಸ್ಥಾನದ ಆಕೃತಿಯಲ್ಲೇ ಇದೆ. ಅಷ್ಟೇ ಅಲ್ಲ, ಆಂಜನೇಯನ ಸ್ಟಿಕರ್, ಭಗವಾ ಧ್ವಜ​ ಕೂಡ ಅದರ ಮೇಲೆ ಇತ್ತು ಎಂದು ಮಧ್ಯಪ್ರದೇಶ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕಮಲನಾಥ್​ ಅವರು ತಾವು ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ತಮ್ಮ ಹುಟ್ಟೂರಾದ ಚಿಂದ್ವಾರಾದಲ್ಲಿ 121 ಅಡಿ ಎತ್ತರದ ಹನುಮ ಮಂದಿರವನ್ನು ಕಟ್ಟಿಸಿದ್ದಾರೆ. ಹಾಗಾಗಿ ಅದೇ ಮಾದರಿಯ ಕೇಕ್​​ ಕತ್ತರಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ ಬಿಜೆಪಿ ಇದನ್ನು ಒಪ್ಪುತ್ತಿಲ್ಲ. ದೇವಸ್ಥಾನದ ಆಕಾರದ ಕೇಕ್​ ಕತ್ತರಿಸುವ ಅಗತ್ಯವೇನಾದರೂ ಏನಿತ್ತು ಎಂದು ಪ್ರಶ್ನಿಸಿದೆ. ಅದೂ ಆ ದೇವಸ್ಥಾನ ಕೇಸರಿ-ಬಿಳಿ-ಹಸಿರಾಗಿ ಇದೆ ಎಂಬ ಆರೋಪವನ್ನೂ ಮಾಡಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಕೇಕ್​​ನ್ನು ದೇವಸ್ಥಾನದ ಆಕಾರದಲ್ಲಿ ಮಾಡಿಸಿದ್ದಲ್ಲದೆ, ಅದರ ಮೇಲೆ ಭಗವಾನ್ ಹನುಮಾನ್​ ಚಿತ್ರವನ್ನೂ ಇಟ್ಟು ನಂತರ ಅದನ್ನು ಕತ್ತರಿಸಲಾಗಿದೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ, ಸನಾತನ ಧರ್ಮಕ್ಕೆ ಮಾಡಿದ ಅವಮಾನ. ಹಿಂದು ಸಮಾಜ ಇದನ್ನೆಂದೂ ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ.

ಚಿಂದ್ವಾರಾದ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿವೇಕ್​ ಬಂಟಿ ಸಹು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಮಾಜಿ ಸಿಎಂ ಕಮಲನಾಥ್​ ಅವರು ಚಿಂದ್ವಾರಾದಲ್ಲಿ ಹನುಮಾನ್​ ಮಂದಿರವನ್ನೇನೋ ಕಟ್ಟಿಸಿದ್ದಾರೆ. ಆದರೆ ಅವರಿಗೆ ದೇವರಲ್ಲಿ ನಂಬಿಕೆ ಇದ್ದಂತೆ ಇಲ್ಲ. ಹಿಂದುಗಳ ಧಾರ್ಮಿಕ ಭಾವನೆಯನ್ನು ಕಮಲನಾಥ್​ ಮತ್ತು ಅವರ ಕುಟುಂಬ ಸದಾ ಅವಮಾನಿಸುತ್ತಿರುತ್ತದೆ’ ಎಂದು ಹೇಳಿದ್ದಾರೆ.

ಇತ್ತೀಚೆಗೆ (ನವೆಂಬರ್​ 8) ಇಂದೋರ್​​ನಲ್ಲಿ ನಡೆದ ಗುರು ನಾನಕ್​ ಜಯಂತಿ ಕಾರ್ಯಕ್ರಮದಲ್ಲಿ ಕಮಲನಾಥ್​ ಅವರನ್ನು ಸನ್ಮಾನಿಸಲಾಗಿತ್ತು. ಆಗಲೂ ಕೂಡ ವಿವಾದ ಸೃಷ್ಟಿಯಾಗಿತ್ತು. 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ಧಂಗೆಯಲ್ಲಿ ಕಮಲನಾಥ್ ಹೆಸರೂ ಕೇಳಿಬಂದಿತ್ತು. ಅಂಥವರನ್ನು ಗುರುನಾನಕ್​ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಅಗತ್ಯವೇನಿತ್ತು ಎಂದು ಸಿಖ್​ ಮುಖ್ಯ ಸ್ತೋತ್ರಕಾರ ಮನ್​ಪ್ರೀತ್​ ಸಿಂಗ್​ ಕಾನ್ಪುರಿ ಪ್ರಶ್ನಿಸಿದ್ದರು. ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಗುರುನಾನಕ್​ ಜಯಂತಿ ಆಚರಣೆಯಲ್ಲಿ ಕಾಂಗ್ರೆಸ್​ ನಾಯಕ ಕಮಲನಾಥ್​​ಗೆ ಸನ್ಮಾನ; ಸಿಡಿದೆದ್ದ ಸಿಖ್​ ಸ್ತೋತ್ರ ಗಾಯಕ!

Exit mobile version