Site icon Vistara News

Video: ದೆಹಲಿ ಏರ್​ಪೋರ್ಟ್​​ನಲ್ಲಿ ಇಂಡಿಗೋ ವಿಮಾನದ ಎದುರು ಕಾಂಗ್ರೆಸ್ ಪ್ರತಿಭಟನೆ; ಪವನ್​ ಖೇರಾರನ್ನು ಕೆಳಗೆ ಇಳಿಸಿದ್ದೇ ಕಾರಣ

Congress Protest in Delhi Airport After Pawan Khera deboarded from Indigo plane

#image_title

ನವ ದೆಹಲಿ: ರಾಯ್ಪುರಕ್ಕೆ ಹೊರಟಿದ್ದ ಕಾಂಗ್ರೆಸ್​ ಮುಖಂಡರ ನಿಯೋಗ, ದೆಹಲಿ ಏರ್​ಪೋರ್ಟ್​​ನಲ್ಲಿ ಇಂಡಿಗೊ ವಿಮಾನದ ಎದುರಲ್ಲಿ ಕುಳಿತು ಪ್ರತಿಭಟನೆ (Congress Protest) ನಡೆಸಿದೆ. ಕಾಂಗ್ರೆಸ್​ ನಾಯಕರಾದ ಪವನ್​ ಖೇರಾ, ಕೆ.ಸಿ.ವೇಣುಗೋಪಾಲ್​, ರಣದೀಪ್​ ಸಿಂಗ್ ಸುರ್ಜೇವಾಲಾ, ಸುಪ್ರಿಯಾ ಶ್ರೀನೇತ್​ ಮತ್ತು ಇತರರು ಇಂದು ರಾಯ್ಪುರಕ್ಕೆ ಹೊರಟಿದ್ದರು. ಇಂಡಿಗೊ ವಿಮಾನವನ್ನೂ ಹತ್ತಿದ್ದರು. ಆದರೆ ದೆಹಲಿ ಪೊಲೀಸರ ಸೂಚನೆ ಇದೆ ಎಂಬ ಕಾರಣ ನೀಡಿ, ಕಾಂಗ್ರೆಸ್ ಮುಖಂಡ ಪವನ್​ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಪವನ್​ ಖೇರಾರನ್ನು ವಿಮಾನದಿಂದ ಕೆಳಗೆ ಇಳಿಸುತ್ತಿದ್ದಂತೆ ಕಾಂಗ್ರೆಸ್​ನ ಉಳಿದ ಮುಖಂಡರೂ ಕೆಳಗೆ ಇಳಿದು, ಅಲ್ಲೇ ಕುಳಿತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಶುರು ಮಾಡಿದರು.

ಗೌತಮ್ ಅದಾನಿ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪವನ್​ ಖೇರಾ, ಗೌತಮ್ ಅದಾನಿಯವರನ್ನು ನರೇಂದ್ರ ಮೋದಿಯವರೇ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ನರೇಂದ್ರ ದಾಮೋದರ್​ದಾಸ್​ ಮೋದಿ ಅಲ್ಲ, ನರೇಂದ್ರ ಗೌತಮ್​ದಾಸ್​ ಮೋದಿ ಎಂದು ವ್ಯಂಗ್ಯ ಮಾಡಿದ್ದರು. ಅದೇ ಕಾರಣಕ್ಕೆ ಬಿಜೆಪಿ ಈಗ ಪವನ್​ ಖೇರಾ ಅವರು ವಿಮಾನ ಹತ್ತಲು ಬಿಡುತ್ತಿಲ್ಲ. ಬಿಜೆಪಿಯದ್ದು ಸರ್ವಾಧಿಕಾರಿ ಧೋರಣೆ ಎಂಬುದು ಕಾಂಗ್ರೆಸ್​ ಆರೋಪ.

ಕಲ್ಲಿದ್ದಲು ತೆರಿಗೆ ಹಗರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಇ.ಡಿ ಅಧಿಕಾರಿಗಳು ಛತ್ತೀಸ್​ಗಢ್​​ನ ಹಲವು ಕಾಂಗ್ರೆಸ್​ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಮನೆ-ಕಚೇರಿಗಳ ಮೇಲಿನ ಇ.ಡಿ.ರೇಡ್ ವಿರೋಧಿಸಿ ಅಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು, ಪ್ರಮುಖರು ಎಲ್ಲ ಒಗ್ಗೂಡಿ ಇ.ಡಿ.ಕಚೇರಿ ಎದುರು ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಪವನ್​ ಖೇರಾ ಮತ್ತು ಇತರ ನಾಯಕರೂ ಕೂಡ ಅಲ್ಲಿಗೇ ತೆರಳುತ್ತಿದ್ದರು. ಆದರೆ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗೆ ಇಳಿಸಿದ ಕಾರಣ, ಉಳಿದವರೂ ಇಳಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: J.P. Nadda: ಮೋದಿ ಸರ್ಕಾರ ಉಚಿತ ಘೋಷಣೆ ಮಾಡಲಿಲ್ಲ; ಅದಕ್ಕೇ ದೇಶ ಉತ್ತಮ ಸ್ಥಿತಿಯಲ್ಲಿದೆ: ಕಾಂಗ್ರೆಸ್‌ ಕುರಿತು ಜೆ.ಪಿ. ನಡ್ಡಾ ಟೀಕೆ

ಕಾಂಗ್ರೆಸ್​​ನಿಂದ ಪ್ರತಿಭಟನೆ

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೇತ್​, ‘ನಾವೆಲ್ಲರೂ ರಾಯ್ಪುರಕ್ಕೆ ಹೋಗಲು ಇಂಡಿಗೋ 6ಇ 204 ವಿಮಾನ ಹತ್ತಿ ಕುಳಿತಿದ್ದೆವು. ಆದರೆ ಏಕಾಏಕಿ ನಮ್ಮ ಪವನ್ ಖೇರಾ ಬಳಿ ಬಂದು ವಿಮಾನದಿಂದ ಕೆಳಗೆ ಇಳಿಯುವಂತೆ ಹೇಳಲಾಯಿತು. ಕೇಳಿದ್ದಕ್ಕೆ, ಅವರ ಲಗೇಜ್​ಗೆ ಸಂಬಂಧಪಟ್ಟಂತೆ ಏನೋ ಗೊಂದಲವಾಗಿದೆ ಎಂದು ಹೇಳಿದರು. ಆದರೆ ವಾಸ್ತವದಲ್ಲಿ ಪವನ್​ ಖೇರಾ ಅವರು ಯಾವುದೇ ಲಗೇಜ್​ ಹೊಂದಿರಲೇ ಇಲ್ಲ. ಇನ್ನು ಅವರು ವಿಮಾನದಿಂದ ಇಳಿಯುತ್ತಿದ್ದಂತೆ ಸಿಐಎಸ್​ಎಫ್ (CISF)​​ನಿಂದ ನೋಟಿಸ್ ಕೂಡ ನೀಡಲಾಗಿದೆ. ಯಾರ ಆದೇಶದ ಕಾರಣಕ್ಕೆ? ಯಾವ ನಿಯಮದ ಅಡಿಯಲ್ಲಿ ಹೀಗೆ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದರು. ಇನ್ನೊಂದೆಡೆ ಈ ಬಗ್ಗೆ ಸ್ಪಷ್ಟನೆ ಕೊಟ್ಟ ದೆಹಲಿ ಪೊಲೀಸರು ‘ಪವನ್​ ಖೇರಾ ಅವರಿಗೆ ರಾಯ್ಪುರಕ್ಕೆ ಪ್ರಯಾಣಿಸಲು ಅವಕಾಶ ಕೊಡದಂತೆ, ಅಸ್ಸಾಂ ಪೊಲೀಸರು ನಮಗೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ.

Exit mobile version