Site icon Vistara News

INDIA Bloc: ಸಭೆಯಲ್ಲಿ ಕೇವಲ ಚಹ, ಬಿಸ್ಕತ್ತು ಕೊಟ್ಟರು, ಸಮೋಸಾ ಇರಲಿಲ್ಲ! ‘ಕೈ’ ವಿರುದ್ಧ ಜೆಡಿಯು ವ್ಯಂಗ್ಯ

Congress Served only chai, biscuit no Samosa in India Bloc Says JDU

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಇಂಡಿಯಾ ಕೂಟದ (India Bloc) ಪ್ರಧಾನಿ ಅಭ್ಯರ್ಥಿಯನ್ನಾಗಿ (Prime Minister Candidate) ಮಾಡಬೇಕು ಎಂಬ ಪ್ರಸ್ತಾಪದಿಂದ ತುಸು ಮುನಿಸಿಕೊಂಡಿರುವ ಸಂಯುಕ್ತ ಜನತಾ ದಳವು (JDU) ಈಗ ಕಾಂಗ್ರೆಸ್ (Congress Party) ವಿರುದ್ಧವೇ ತಿರುಗಿ ಬಿದ್ದಿದೆ. ನಿನ್ನೆ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಕೇವಲ ಚಹ ಮತ್ತು ಬಿಸ್ಕತ್ತುಗಳನ್ನು (chai-biscuit) ಸರ್ವ್ ಮಾಡಲಾಯಿತೇ ಹೊರತು ಸಮೋಸ್ (no samosa) ಕೊಡಲಿಲ್ಲ. ಸಮೋಸಾ ಕೊಡಲು ಪಕ್ಷದ ಬಳಿ ಹಣ ಇಲ್ಲ ಎಂದು ಜೆಡಿಯು ಸಂಸದ ಸುನೀಲ್ ಕುಮಾರ್ ಪಿಂಟು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ. ಈ ಮೊದಲು ನಡೆದ ಸಭೆಯಲ್ಲಿ ಸಮೋಸಾ ಕೂಡ ಇರ್ತಿತ್ತು. ಆದರೆ, ದಿಲ್ಲಿಯಲ್ಲಿ ನಡೆದ ಸಮೋಸಾ ಕಾಣೆಯಾಗಿತ್ತು ಎಂದು ಹೇಳಿದ್ದಾರೆ.

ದಿಲ್ಲಿಯಲ್ಲಿ ನಿನ್ನ ನಡೆದ ಕೂಟದ ಸಭೆಯಲ್ಲಿ ದೊಡ್ಡ ದೊಡ್ಡ ನಾಯಕರು ಆಗಮಿಸಿದ್ದರು. ಆದರೆ ಅದರ ಮುಖ್ಯ ವಿಷಯ ಕುರಿತು ಯಾವುದೇ ಚರ್ಚೆ ನಡೆಸಲಾಗಲಿಲ್ಲ. ನಿನ್ನೆಯ ಸಭೆಯು ಟೀ ಬಿಸ್ಕೆಟ್‌ಗೆ ಸೀಮಿತವಾಗಿತ್ತು… ಏಕೆಂದರೆ ಕಾಂಗ್ರೆಸ್ ಇತ್ತೀಚೆಗೆ ಹಣದ ಕೊರತೆಯಿದೆ ಎಂದು ಹೇಳಿತ್ತು. 138, 1380 ಅಥವಾ 13,800 ರೂ. ದೇಣಿಗೆ ಕೂಡ ಇನ್ನೂ ಬಂದಿಲ್ಲ. ಹಾಗಾಗಿ, ನಿನ್ನೆಯ ಸಭೆಯು ಸಮೋಸಾ ಇಲ್ಲದೆ ಮತ್ತು ಯಾವುದೇ ಗಂಭೀರ ವಿಷಯದ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಕೇವಲ ಚಹಾ ಮತ್ತು ಬಿಸ್ಕತ್‌ನಲ್ಲಿ ಮುಗಿದಿದೆ ಎಂದು ಸುನೀಲ್ ಕುಮಾರ್ ಪಿಂಟು ಹೇಳಿದ್ದಾರೆ.

ಜೆಡಿಯು ಸಂಸದರ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವಿಯಾ, ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಸಮೋಸಾ ಇಲ್ಲದ್ದರಿಂದ ನಿತೀಶ್ ಕುಮಾರ್ ಅವರ ಸಂಸದರು ನಿರಾಶೆಗೊಂಡಿದ್ದಾರೆ. ಯಾವುದೇ ಗಂಭೀರ ವಿಚಾರ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವವರೆಗೂ ಇದೇ ರೀತಿಯ ದೂರುಗಳು ನಡೆಯುತ್ತಲೇ ಇರುತ್ತವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇಂಡಿಯಾ ಕೂಟದ ನಾಯಕತ್ವ ಹೊಣೆಗಾರಿಕೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ!?

ಕನ್ನಡಿಗ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು ಪ್ರತಿಪಕ್ಷಗಳ ಸಂಗಮವಾಗಿರುವ ಇಂಡಿಯಾ ಮೈತ್ರಿಕೂಟದ (INDIA Bloc) ನಾಯಕರಾಗಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(cm mamata banerjee), ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರು, ಇಂಡಿಯಾ ಕೂಟದ ಪ್ರಧಾನ ಮಂತ್ರಿಯ ಅಭ್ಯರ್ಥಿ (PM Candidate of India bloc) ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೂಚಿಸಿದ್ದಾರೆ. ಆದರೆ, ಖರ್ಗೆ ಅವರು ಸದ್ಯಕ್ಕೆ ಚುನಾವಣೆ ಗೆಲ್ಲುವುದಷ್ಟೇ ನಮ್ಮ ಮುಂದಿರುವ ಟಾಸ್ಕ್. ಬಳಿಕ ಪಿಎಂ ಅಭ್ಯರ್ಥಿಯ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದ್ದಾರೆ.

ಮಂಗಳವಾರ 28 ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ದೇಶದ ಮೊದಲ ದಲಿತ ಪ್ರಧಾನಿಯಾಗಲು ತಮ್ಮ ಹೆಸರನ್ನು ಪ್ರಸ್ತಾಪಿಸಿದ ನಂತರ ಖರ್ಗೆ ಅವರು, ‘ನಾನು ದೀನದಲಿತರಿಗಾಗಿ ಕೆಲಸ ಮಾಡುತ್ತೇನೆ. ಮೊದಲು ಗೆಲ್ಲೋಣ, ಆಮೇಲೆ ನೋಡೋಣ. ನಾನು ಏನನ್ನೂ ಬೇಡುವುದಿಲ್ಲ” ಎಂದು ಹೇಳಿದರು. ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಪ್ರಸ್ತಾಪಿಸಿದ್ದಾರೆ ಎಂದು ಸಭೆಯ ನಂತರ ಎಂಡಿಎಂಕೆ ನಾಯಕ ವೈಕೊ ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಪ್ರಕಾರ, ವಿಪಕ್ಷ ಮೈತ್ರಿಕೂಟದ ಘಟಕಗಳು ಸಭೆಯಲ್ಲಿ “ಮೇನ್ ನಹಿನ್, ಹಮ್ (ನಾವು, ನಾನಲ್ಲ)” ಎಂಬ ವಿಷಯದೊಂದಿಗೆ ಮುಂದುವರಿಯಲು ಉದ್ದೇಶಿಸಿದೆ. ಇಲ್ಲಿನ ಅಶೋಕ ಹೊಟೇಲ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೇರಿದಂತೆ ಪ್ರತಿಪಕ್ಷಗಳ ನಾಯಕು ಪಾಲ್ಗೊಂಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರತಿಪಕ್ಷಗಳ ನಾಯಕ ಸಭೆ ಚೆನ್ನಾಗಿತ್ತು. ಚುನಾವಣಾ ಪ್ರಚಾರ, ಸೀಟು ಹಂಚಿಕೆ ಪ್ರಕ್ರಿಯೆಗಳು ಎಲ್ಲವೂ ಶೀಘ್ರವೇ ಆರಂಭವಾಗಲಿವೆ. ಕೂಟ ಸಮನ್ವಯಕರರನ್ನಾಗಿ ಯಾರನ್ನೂ ಇನ್ನೂ ಆಯ್ಕೆ ಮಾಡಿಲ್ಲ ಎಂದು ತಿಳಿಸಿದರು.

ಈ ಸಭೆಯಲ್ಲಿ ಮುಖ್ಯ ವಿಷಯವೇ ಸೀಟು ಹಂಚಿಕೆಯಾಗಿತ್ತು. ಕೆಲವು ನಾಯಕರು ಜನವರಿ 1ಕ್ಕಿಂತ ಮುಂಚೆಯೇ ಸೀಟು ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ. ಕೂಟದ ಪ್ರಧಾನಿ ಮಂತ್ರಿ ಅಭ್ಯರ್ಥಿ ಕುರಿತೂ ಸಭೆಯಲ್ಲಿ ಚರ್ಚೆಯಾಯಿತು. ಆದರೆ, ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿಲ್ಲ. ಪ್ರತಿಯೊಬ್ಬರು ಚುನಾವಣೆ ಗೆದ್ದ ಬಳಿಕ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಹೇಳಿದರು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸದ ಮಹುವಾ ಮಾಜಿ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಕಾಂಗ್ರೆಸ್‌ಗೆ ಸೋಲು; ಇಂಡಿಯಾ ಕೂಟದಲ್ಲಿ ತಳಮಳ! ನಾಯಕತ್ವಕ್ಕೆ ಹಲವರ ಗಾಳ!

Exit mobile version