Site icon Vistara News

ಆಟೋ ಚಾಲಕನ ದೇಹದಲ್ಲಿ ಉರಿ ಹೆಚ್ಚಿಸಿದ ‘ಸೌತೆಕಾಯಿ’; ಬಲಕಿವಿಯನ್ನು ಕಚ್ಚಿ ಗಾಯಗೊಳಿಸಿದ ವ್ಯಾಪಾರಿ!

Cucumber seller bites customer

#image_title

ಪಿಲಿಭಿತ್​: ಈಗಂತೂ ಬಿರುಬೇಸಿಗೆ ಕಾಲ. ಎಳೆನೀರು, ಕಲ್ಲಂಗಡಿ, ಸೌತೆಕಾಯಿಗಳಿಗೆಲ್ಲ ಭರ್ಜರಿ ಬೇಡಿಕೆ. ಉಷ್ಣದಿಂದ ಕಾದು ಕೆಂಡವಾಗುವ ದೇಹವನ್ನು ತಂಪಾಗಿಸಲು ಜನರು ಸಹಜವಾಗಿಯೇ ಇಂಥ ಹಣ್ಣು-ತರಕಾರಿಗಳ ಮೊರೆ ಹೋಗುತ್ತಾರೆ ಆದರೆ ಉತ್ತರ ಪ್ರದೇಶದ ಪಿಲಿಭಿತ್​​​ನಲ್ಲಿ ಗ್ರಾಹಕನೊಬ್ಬನಿಗೆ ‘ಸೌತೆಕಾಯಿ’ಯೂ ಮೈಯಲ್ಲಿನ ಉರಿ ಹೆಚ್ಚಿಸಿದೆ.

ಉಮಾಕಾಂತ್​ ಎಂಬ ಹೆಸರಿನ ಆಟೋ ಚಾಲಕ ಮಹೇಶ್​ ಎಂಬ ಸೌತೇಕಾಯಿ ವ್ಯಾಪಾರಿಯಿಂದ ಕಿವಿ ಕಚ್ಚಿಸಿಕೊಂಡಿದ್ದಾರೆ. ಉಮಾಕಾಂತ್​ ಸೌತೆಕಾಯಿ ಖರೀದಿಸಲೆಂದು ಮಹೇಶ್ ಬಳಿ ಹೋಗಿದ್ದರು. ನನಗೆ ಸ್ವಲ್ಪ ಸೌತೆ ಕಾಯಿ ಕೊಡಿ, ನಾನು ನಂತರ ಹಣ ಕೊಡುತ್ತೇನೆ ಎಂದು ಉಮಾಕಾಂತ್ ಹೇಳುತ್ತಿದ್ದಂತೆ, ಮಹೇಶ್​ ಕ್ರೋಧದಿಂದ ಜಗಳಕ್ಕೆ ನಿಂತಿದ್ದಾರೆ. ಇವರಿಬ್ಬರೂ ಕೆಲಕಾಲ ಮಾತಿನ ಚಕಮಕಿ ನಡೆಸಿಕೊಂಡಿದ್ದಾರೆ. ಬಳಿಕ ಮಹೇಶ್​ ಉಮಾಕಾಂತ್​​ನ ಬಲಭಾಗದ ಕಿವಿ ಕಚ್ಚಿದ್ದಾನೆ. ಸದ್ಯ ಉಮಾಕಾಂತ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಉಮಾಕಾಂತ್​​ನ ಪತ್ನಿ ಸೋನಿ ದೇವಿ ವಿವರಣೆ ನೀಡಿದ್ದಾರೆ. ‘ನನ್ನ ಪತಿ ಉಮಕಾಂತ್​ ಆಟೋ ಓಡಿಸಿ, ಡ್ಯೂಟಿ ಮುಗಿಸಿದ ಬಳಿಕ ಮನೆಗೆ ವಾಪಸ್ ಆಗುತ್ತಿದ್ದರು. ಆಗ ಮಹೇಶ್ ಬಳಿ ಹೋಗಿ, ಈಗ ಸೌತೆಕಾಯಿ ಕೊಟ್ಟಿರು, ನಾನು ನಾಳೆ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೇ ಮಹೇಶ್​ ದೊಡ್ಡ ಧ್ವನಿಯಲ್ಲಿ ಗಲಾಟೆ ಎತ್ತಿದ್ದಾನೆ. ಕೆಳಮಟ್ಟದ ಶಬ್ದಪ್ರಯೋಗ ಮಾಡಿ ಬೈದಿದ್ದಾನೆ. ಆಗ ನನ್ನ ಪತಿ ಅಲ್ಲಿಂದ ಸುಮ್ಮನೆ ಹೊರಟಿದ್ದರು. ಆದರೆ ಬಿಡದ ಮಹೇಶ್ ಹಿಂಬಾಲಿಸಿಕೊಂಡು ಬಂದು, ಉಮಾಕಾಂತ್​​​ನ ಕಿವಿ ಕಚ್ಚಿದ್ದಾನೆ. ಕಿವಿಯೆಲ್ಲ ರಕ್ತಸಿಕ್ತವಾಗಿತ್ತು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ತನ್ನ ಮರಿಯನ್ನು ಹಿಡಿದ ಹಾವಿನೊಂದಿಗೆ ಸೆಣೆಸಾಟಕ್ಕೆ ನಿಂತ ಹಲ್ಲಿ; ಕಚ್ಚಿದರೂ, ಕುಕ್ಕಿದರೂ ಫಲಿಸಲಿಲ್ಲ ಯತ್ನ

ಸದ್ಯ ಪೊಲೀಸರು ಸೌತೆಕಾಯಿ ವ್ಯಾಪಾರಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರೂ ಹಣ ಉದ್ರಿ ವಿಚಾರಕ್ಕೆ ಜಗಳವಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಮೊದಲೇ ಏನಾದರೂ ಜಗಳ ಇತ್ತಾ ಎಂಬ ಬಗ್ಗೆಯೂ ನಾವು ವಿಚಾರಣೆ ನಡೆಸುತ್ತಿದ್ದೇವೆ. ಇಬ್ಬರೂ ಈ ವೇಳೆ ಮದ್ಯಪಾನ ಮಾಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ಅಚಲ್ ಕುಮಾರ್ ತಿಳಿಸಿದ್ದಾರೆ.

Exit mobile version