Site icon Vistara News

ಬಹುಮತ ಸಾಬೀತು ಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್​; 62 ಶಾಸಕರಲ್ಲಿ ಮತ ಹಾಕಿದ್ದು 58 ಮಂದಿ

Delhi Mayor Polls

ನವ ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಇಂದು ಸದನದಲ್ಲಿ ವಿಶ್ವಾಸ ಮತ ಯಾಚಿಸಿ, ಬಹುಮತ ಸಾಬೀತುಪಡಿಸಿದ್ದಾರೆ. ಒಟ್ಟೂ 70 ಶಾಸಕರ ಬಲದ ದೆಹಲಿ ವಿಧಾನಸಭೆಯಲ್ಲಿ ಆಮ್​ ಆದ್ಮಿ ಪಕ್ಷದ 62 ಶಾಸಕರು ಇದ್ದರು. ಅವರಲ್ಲಿ ಇಂದು 58 ಜನರು ಅರವಿಂದ್ ಕೇಜ್ರಿವಾಲ್​ಗೆ ಮತ ಹಾಕಿದ್ದಾರೆ. ‘ನಮ್ಮ ಪಕ್ಷದ 62 ಶಾಸಕರಲ್ಲಿ ಇಬ್ಬರು ವಿದೇಶಕ್ಕೆ ತೆರಳಿದ್ದಾರೆ. ಒಬ್ಬರು ಜೈಲಿನಲ್ಲಿದ್ದಾರೆ ಮತ್ತು ನಾಲ್ಕನೇ ಶಾಸಕ ಸದನದಲ್ಲಿ ಸ್ಪೀಕರ್​ ಆಗಿದ್ದಾರೆ. ಹೀಗಾಗಿ ಆ ನಾಲ್ವರು ಮತ ಹಾಕಲು ಸಾಧ್ಯವಾಗಿಲ್ಲ’ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ.

ದೆಹಲಿಯಲ್ಲಿ ಕಳೆದ ವರ್ಷ ಅನುಷ್ಠಾನಕ್ಕೆ ಬಂದಿದ್ದ ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದಡಿ, ಅಬಕಾರಿ ಇಲಾಖೆ ಸಚಿವ, ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಪ್ರಾರಂಭವಾಗಿದೆ. ಮನೀಷ್​ಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ರೇಡ್ ಮಾಡಿರುವ ಜತೆ, ಅವರ ವಿರುದ್ಧ ಎಫ್​ಐಆರ್​ ಕೂಡ ದಾಖಲಿಸಿದೆ.

ಮನೀಷ್​ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿಯಾದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್​ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಬಿಜೆಪಿ ದೆಹಲಿಯ ಆಪ್​ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದೆ. ಮನೀಷ್​ ಸಿಸೋಡಿಯಾಗೆ ಪಕ್ಷ ಬಿಟ್ಟು ಬಂದರೆ, ಮುಖ್ಯಮಂತ್ರಿ ಹುದ್ದೆ ಕೊಡುವುದಾಗಿ ಹೇಳಿತ್ತು. ಅಷ್ಟೇ ಅಲ್ಲ, ಆಪ್​​ನ 40 ಶಾಸಕರಿಗೆ ಬಿಜೆಪಿಗೆ ಬಂದರೆ, ತಲಾ 20 ಕೋಟಿ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿತ್ತು. ಆದರೆ ಅವರ ಆಪರೇಶನ್​ ಕಮಲ ಕೆಲಸ ಮಾಡಲಿಲ್ಲ. ನಮ್ಮವರು ಯಾರೂ ಬಿಜೆಪಿಗೆ ಹೋಗಲಿಲ್ಲ ಎಂದು ಹೇಳಿದ್ದರು. ಹಾಗೇ, ಆಮ್​ ಆದ್ಮಿ ಪಕ್ಷದ ಶಾಸಕರೆಲ್ಲ ಒಗ್ಗಟ್ಟಾಗಿದ್ದೇವೆ, ಯಾರೂ ಬಿಜೆಪಿಯ ಆಮಿಷಕ್ಕೆ ಒಳಗಾಗಿಲ್ಲ ಎಂಬುದನ್ನು ಸಾಬೀತು ಪಡಿಸಲು, ಶೀಘ್ರದಲ್ಲಿಯೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದೂ ತಿಳಿಸಿದ್ದರು. ಅದರಂತೆ ಇಂದು ವಿಶ್ವಾಸ ಮತ ಯಾಚಿಸಿ, ಗೆದ್ದಿದ್ದಾರೆ.

ಇದನ್ನೂ ಓದಿ: ಹಲವು ಸರ್ಕಾರಗಳನ್ನು ಕೊಂದ ಸರಣಿ ಹಂತಕ ಬಿಜೆಪಿ ಎಂದ ಕೇಜ್ರಿವಾಲ್​; ವಿಶ್ವಾಸ ಮತ ಯಾಚನೆಗೆ ನಿರ್ಧಾರ !

Exit mobile version