Site icon Vistara News

Manish Sisodia Arrested: ಅಬಕಾರಿ ನೀತಿ ಹಗರಣ, ದೆಹಲಿ ಡಿಸಿಎಂ ಮನೀಷ್‌ ಸಿಸೋಡಿಯಾ ಬಂಧನ

Delhi DCM Manish Sisodia Arrested In Liquor Policy Scam

ಮನೀಷ್‌ ಸಿಸೋಡಿಯಾ

ನವದೆಹಲಿ: ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂದಿಸಿದಂತೆ ಕೇಂದ್ರ ತನಿಖಾ ದಳ(CBI)ದ ಅಧಿಕಾರಿಗಳು ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ (Manish Sisodia Arrested) ಅವರನ್ನು ಭಾನುವಾರ ಬಂಧಿಸಿದ್ದಾರೆ. ಇನ್ನು ಬಂಧನ ಖಂಡಿಸಿ ಆಪ್‌ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಪ್‌ ಬೆಂಬಲಿಗರ ಭಾರಿ ಬೆಂಬಲದೊಂದಿಗೆ ಸಿಸೋಡಿಯಾ (Manish Sisodia) ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ ತೆರಳಿದರು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಈ ಹಿಂದೆ ಸಿಬಿಐ ನೋಟಿಸ್ ನೀಡಿತ್ತು. ಇದೇ ವೇಳೆ, ಮುಂದಿನ ಏಳೆಂಟು ತಿಂಗಳು ದೂರ ಹೋಗುವೆ ಎಂದು ಸಿಸೋಡಿಯಾ ಬಂಧನದ ಸುಳಿವು ನೀಡಿದ್ದರು. ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ದೆಹಲಿ ಸರ್ಕಾರವು ೨೦೨೧ರಲ್ಲಿ ಜಾರಿಗೆ ತಂದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇ.ಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಬೆಳಗಿನ ಜಾವ ಮೂರು ಗಂಟೆವರೆಗೆ ಬಾರ್‌ಗಳು ಓಪನ್‌ ಇರುವುದು, ಸುಲಭವಾಗಿ ಲೈಸೆನ್ಸ್‌ ನೀಡುವುದು ಸೇರಿ ಹಲವು ಕ್ರಮಗಳುಳ್ಳ ನೀತಿಯ ಜಾರಿ ವೇಳೆ ತಮಗೆ ಬೇಕಾದವರಿಗೆ ಲೈಸೆನ್ಸ್‌ ನೀಡಲು ಆಪ್‌ ೧೦೦ ಕೋಟಿ ರೂ. ಲಂಚ ಪಡೆದಿದೆ ಎಂಬುದು ಆರೋಪವಾಗಿದೆ. ಮನೀಷ್‌ ಸಿಸೋಡಿಯಾ ಅವರು ಅಬಕಾರಿ ಸಚಿವರಾದ ಕಾರಣ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸುವ ಜತೆಗೆ ಇದುವರೆಗೆ ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ಈಗ ಕೊನೆಗೆ ಸಿಬಿಐ ಅಧಿಕಾರಿಗಳು ಮನೀಷ್‌ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಿಬಿಐ ವಿಚಾರಣೆ ಆರಂಭಿಸುವಾಗಲೇ ನನ್ನನ್ನು ಬಂಧಿಸಲಾಗುತ್ತದೆ ಎಂದು ಸಿಸೋಡಿಯಾ ಹೇಳಿದ್ದರು. ಆದರೆ, ಎರಡು ತಿಂಗಳು ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆಗೂ ಕರೆದಿರಲಿಲ್ಲ. ಈಗ ವಿಚಾರಣೆಗೆ ಕರೆದು ಬಂಧಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಆಪ್ ಸಚಿವ ಸತ್ಯೇಂದ್ರ ಸಿಂಗ್‌ ಜೈನ್‌ ಅವರನ್ನು ಬಂಧಿಸಲಾಗಿದೆ. ಈಗ ಮತ್ತೊಬ್ಬ ಸಚಿವ ಲಂಚ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ.

ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಅಕ್ರಮ; ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾಗೆ ಮತ್ತೆ ಸಿಬಿಐ ಸಮನ್ಸ್​

Exit mobile version