Site icon Vistara News

Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Shraddha Walkar

ನವ ದೆಹಲಿ: ಇಡೀ ದೇಶವನ್ನು ನಡುಗಿಸಿದ ದೆಹಲಿ ಶ್ರದ್ಧಾ ವಾಳ್ಕರ್​ ಹತ್ಯೆ (Shraddha Murder Case) ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ದೆಹಲಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಶ್ರದ್ಧಾ ವಾಳ್ಕರ್​ ಮತ್ತು ಅಫ್ತಾಬ್​ ಪೂನಾವಾಲಾ ಲಿವ್​ ಇನ್​ ರಿಲೇಶನ್​ಶಿಪ್​​ನಲ್ಲಿ ಇದ್ದರು. ಆದರೆ ಅದೇ ಅಫ್ತಾಬ್​ ಕೈಯಲ್ಲೇ ಶ್ರದ್ಧಾ ವಾಳ್ಕರ್​ ಭಯಾನಕವಾಗಿ ಕೊಲೆಯಾಗಿದ್ದಾಳೆ. ಅಫ್ತಾಬ್​ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ತನ್ನ ಅಪಾರ್ಟ್​ಮೆಂಟ್​​ ಸಮೀಪವೇ ಇದ್ದ ಮೆಹ್ರೌಲಿ ಅರಣ್ಯದ ವಿವಿಧೆಡೆ ಎಸೆದಿದ್ದ. ಈಗ ಪೊಲೀಸರು ಒಂದು ಕಡೆಯಿಂದ ತನಿಖೆ, ಪರಿಶೀಲನೆ ಪ್ರಾರಂಭ ಮಾಡಿ ಶ್ರದ್ಧಾ ದೇಹದ ಪೀಸ್​ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನಿನ್ನೆಯಷ್ಟೇ ಆಕೆಯ ತಲೆ ಬುರುಡೆ ಭಾಗ ಪತ್ತೆಯಾಗಿತ್ತು.

ತನಿಖೆಗೆ ಅತಿಮುಖ್ಯವಾಗಿ ಅಗತ್ಯವಿರುವ ತಲೆಯ ಭಾಗ ಸಿಗುತ್ತಿದ್ದಂತೆ ಈ ಕೇಸ್​​ನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿ, ವಕೀಲರೊಬ್ಬರು ದೆಹಲಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿಚಾರಣೆ ನಡೆಸಲು ಹೈಕೋರ್ಟ್​ ಒಪ್ಪಲಿಲ್ಲ. ‘ಈಗಾಗಲೇ ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಂಥ ಅರ್ಜಿ ಯಾಕೆ’ ಎಂದು ಪ್ರಶ್ನಿಸಿರುವ ಹೈಕೋರ್ಟ್​ ‘ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಪ್ರಚಾರದ ಉದ್ದೇಶದಿಂದ ಸಲ್ಲಿಕೆಯಾದ ಪ್ರಚಾರ ಹಿತಾಸಕ್ತಿ ಅರ್ಜಿ’ ಎಂದು ಹೇಳಿದೆ. ಅರ್ಜಿ ಸಲ್ಲಿಕೆ ಮಾಡಿದವರಿಗೆ ದಂಡ ವಿಧಿಸಿ, ವಜಾಗೊಳಿಸಿದೆ.

ಹಾಗೇ ಇನ್ನೊಂದೆಡೆ ಆರೋಪಿ ಅಫ್ತಾಬ್​​ಗೆ ಆತನ ಕುಟುಂಬಸ್ಥರನ್ನು ಭೇಟಿ ಮಾಡಲು ದೆಹಲಿ ಹೈಕೋರ್ಟ್ ಅವಕಾಶ ನೀಡಿದೆ. ಜೈಲು ಪಾಲಾಗಿರುವ ಅಫ್ತಾಬ್​, ತನ್ನ ಮನೆಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡುವಂತೆ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದ. ಅದಕ್ಕೆ ಹೈಕೋರ್ಟ್​ ಅಸ್ತು ಎಂದಿದೆ.

ಇದನ್ನೂ ಓದಿ: Shraddha Murder Case | ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ತಲೆ ಬುರುಡೆಯ ಭಾಗಗಳು ಪತ್ತೆ!, ಸಿಬಿಐ ತನಿಖೆಗೆ ಮನವಿ

Exit mobile version