Site icon Vistara News

Nithyananda Swamy: ನಿತ್ಯಾನಂದನ ಆಶ್ರಮದಲ್ಲಿ ಭಕ್ತ ಒತ್ತೆಯಾಳು! ಕರ್ನಾಟಕ ಹೈಕೋರ್ಟ್‌ ನೋಟಿಸ್

Devotee hostage in Nithyananda Swamy Ashram, Karnataka High Court issued notice

ಬೆಂಗಳೂರು: ಸ್ವಘೋಷಿತ ದೇವ ಮಾನವ (Selfstyled Godman) ಹಾಗೂ ಅತ್ಯಾಚಾರ ಸೇರಿದಂತೆ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿಗೆ (Nithyananda Swamy) ಕರ್ನಾಟಕ ಹೈಕೋರ್ಟ್ (Karnataka High Court) ನೋಟಿಸ್ ಕಳುಹಿಸಿದೆ. ಜಾರ್ಖಂಡ್‌ನ ಇನ್ಫೋಸಿಸ್‌ನ ಮಾಜಿ ಸಾಫ್ಟ್‌ವೇರ್ ಎಂಜಿನಿಯರ್ ಕೃಷ್ಣಕುಮಾರ್ ಪಾಲ್ ಅವರು ಸುಮಾರು ಎರಡು ವರ್ಷಗಳಿಂದ ತಮ್ಮ ಪೋಷಕರ ಜತೆ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ಆತನನ್ನು ನಿತ್ಯಾನಂದ ಆಶ್ರಮದಲ್ಲಿ ಬಂಧಿಸಿಡಲಾಗಿದೆ(devotee hostage). ಆತನನ್ನು ಭೇಟಿಯಾಗಿಲು ಮಾಡಿರುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಈ ಕುರಿತು ಆಶ್ರಮದ ಅಧಿಕಾರಿಗಳಿಗೆ ಬರೆದ ಪತ್ರಗಳಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ದೂರಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಸಲ್ಲಿಸಲಾಗಿದೆ(habeas corpus).

ನಿತ್ಯಾನಂದ ಸ್ವಾಮಿ ವಿರುದ್ಧ ಮೊದಲಿಗೆ ಜಾರ್ಖಂಡ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಆ ದೂರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೃಷ್ಣಕುಮಾರ್ ಪಾಲ್‌ನನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ಅಂಥ ಯಶಸ್ಸು ಸಿಗಲಿಲ್ಲ. ಇದರಿಂದ ರೋಸಿ ಹೋದ ಕೃಷ್ಣಕುಮಾರ್ ಪೋಷಕರು ಹೈಕೋರ್ಟ್ ಮಧ್ಯ ಪ್ರವೇಶಕ್ಕೆ ಮುಂದಾದರು. ಪರಿಣಾಮ, ರಾಮನಗರ ಎಸ್‌ಪಿ ಮೂಲಕ ನಿತ್ಯಾನಂದವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನಿತ್ಯಾನಂದ ವಿರುದ್ಧದ ಆರೋಪಗಳ ಪ್ರಕರಣಗಳ ಪ್ರಗತಿಯ ಕುರಿತಾದ ವರದಿ ನೀಡುವಂತೆಯೂ ಹೈಕೋರ್ಟ್ ಸರ್ಕಾರಿ ವಕೀಲರಿಗೆ ಸೂಚಿಸಿದೆ. ತಮ್ಮ ಮಗನನ್ನು ಮತ್ತೆ ಸೇರಲು ಹತಾಶರಾಗಿರುವ ಕೃಷ್ಣಕುಮಾರ್ ಅವರ ಹೆತ್ತವರ ವೇದನೆಯನ್ನು ಅರ್ಜಿಯು ಒತ್ತಿಹೇಳುತ್ತದೆ ಮತ್ತು ಆತನ ಪಾಸ್‌ಪೋರ್ಟ್ ಇಲ್ಲಿಯೇ ಇರುವುದರಿಂದ, ಆತ ಇನ್ನೂ ರಾಜ್ಯದೊಳಗೇ ಇದ್ದಾನೆ ಎಂಬ ನಂಬಿಕೆಯನ್ನು ಆತನ ಪೋಷಕರು ಹೊಂದಿದ್ದಾರೆ.

ತುಮಕೂರು ಸಿದ್ಧಗಂಗಾ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ಕೃಷ್ಣಕುಮಾರ್ ಪಾಲ್ ಅವರು ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಪೋಷಕರು ಮತ್ತು ಆತನ ಸ್ನೇಹಿತರ ಆತಂಕಕ್ಕೆ ಕಾರಣವಾಯಿತು.

ಹಲವಾರು ಪ್ರಕರಣಗಳನ್ನು ಎದುರಿಸತ್ತಿರುವ ನಿತ್ಯಾನಂದ ಸ್ವಾಮಿ 2019ರಲ್ಲೇ ದೇಶದಿಂದ ಓಡಿ ಹೋಗಿದ್ದಾನೆ. ಈಕ್ವೇಡಾರ್ ಎಂಬಲ್ಲಿ ಸಣ್ಣ ದ್ವೀಪವನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ. ಅಲ್ಲದೇ, ತನ್ನದು ಸ್ವಂತ ದೇಶ ಹೇಳಿಕೊಂಡಿದ್ದಾನೆ. ಈ ಕೈಲಾಸ ಕುರಿತು ಆಗಾಗ ಅನೇಕ ಸುದ್ದಿಗಳು ಹೊರ ಬೀಳುತ್ತಲೇ ಇರುತ್ತವೆ. ರಾಮನಗರದ ಬಿಡದಿ ಬಳಿ ಆಶ್ರಮ ಹೊಂದಿರುವ ನಿತ್ಯಾನಂದ, ಅನೇಕ ತನ್ನ ಫಾಲೋವರ್ಸ್‌ಗಳನ್ನು ಬಂಧಿಯಾಗಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆತನ ವಿರುದ್ದ ಅತ್ಯಾಚಾರ ಸೇರಿ ಅನೇಕ ಪ್ರಕರಣಗಳು ದಾಖಲಾಗಿದ್ದು, ಕೆಲವು ಪ್ರಕರಣಗಳು ಕೋರ್ಟ್‌ನಲ್ಲೂ ಇವೆ.

ಈ ಸುದ್ದಿಯನ್ನೂ ಓದಿ: ನಿತ್ಯಾನಂದನಿಂದ ಪುತ್ರಿಯರನ್ನು ಬಿಡಿಸಿ ಎಂದು ಕೋರ್ಟ್‌ ಮೊರೆ ಹೋದ ತಂದೆ; ಮುಂದೇನಾಯ್ತು?

Exit mobile version