ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ಕಲಹ ಜೋರಾಗಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ (Delhi University) ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟುಡೆಂಟ್ಸ್ ಯುನಿಯನ್ ಆಫ್ ಇಂಡಿಯಾ (NSUI) ಹಾಗೂ ಆರ್ಎಸ್ ವಿದ್ಯಾರ್ಥಿ ಘಟಕವಾದ ಎಬಿವಿಪಿ ಮಧ್ಯೆ ಗಲಾಟೆ ನಡೆದಿದೆ. ಅದರಲ್ಲೂ, ದೆಹಲಿ ವಿವಿಯಲ್ಲಿರುವ ದೆಹಲಿ ವಿವಿ ವಿದ್ಯಾರ್ಥಿಗಳ ಒಕ್ಕೂಟದ (DUSU) ಕಚೇರಿಗೆ ಎನ್ಎಸ್ಯುಐ ಘಟಕದ ಮುಖಂಡರು ದಾಳಿ ನಡೆಸಿದ್ದು, ಅಲ್ಲಿದ್ದ ರಾಮನ ಮೂರ್ತಿಯನ್ನು ಒಡೆದು ಹಾಕಿ, ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ. ಇದು ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.
ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅಭಿ ದಹಿಯಾ ಅವರು ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. “ಡಿಯುಎಸ್ಯು ಅಧ್ಯಕ್ಷ ತುಷಾರ್ ದೇಢಾ, ಕಾರ್ಯದರ್ಶಿ ಅಪರಾಜಿತಾ, ಜಂಟಿ ಕಾರ್ಯದರ್ಶಿ ಸಚಿನ್ ಬೈಸ್ಲಾ ಸೇರಿ ಹಲವರ ಕಚೇರಿಗೆ ಭಾನುವಾರ ಬೆಳಗ್ಗೆ ಎನ್ಎಸ್ಯುಐ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ದಾಳಿಕೋರರು ಮೊದಲು ಮದ್ಯಪಾನ ಮಾಡಿದ್ದಾರೆ. ಇದಾದ ಬಳಿಕ ಡಿಯುಎಸ್ಯು ಪದಾಧಿಕಾರಿಗಳ ಕಚೇರಿಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ” ಎಂದಿದ್ದಾರೆ.
The True Face of #NSUIGoons .
— Amisha Kachhawa (@kachhawa_amisha) July 14, 2024
Congress's student wing NSUI's goons vandalised Swami Vivekananda's statue in the DUSU office.. pic.twitter.com/3ycBsruqla
ಅಭಿ ದಹಿಯಾ ಕಚೇರಿಯಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವ, ವಿವೇಕಾನಂದರ ಫೋಟೊವನ್ನು ವಿರೂಪಗೊಳಿಸಿರುವ, ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಕಚೇರಿಯಲ್ಲಿದ್ದ ಶ್ರೀರಾಮನ ಮೂರ್ತಿಯನ್ನು ಕೂಡ ಒಡೆದು ಹಾಕಲಾಗಿದೆ ಎಂಬುದಾಗಿ ಒಕ್ಕೂಟವು ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೂಡ ಆರೋಪ-ಪ್ರತ್ಯಾರೋಪಕ್ಕಿಳಿದಿದ್ದಾರೆ.
ಎಬಿವಿಪಿ ಆರೋಪವನ್ನು ಎನ್ಎಸ್ಯುಐ ಅಲ್ಲಗಳೆದಿದೆ. “ಎಬಿವಿಪಿ ಉಪಾಧ್ಯಕ್ಷ ಅಭಿ ದಹಿಯಾ ಹಾಗೂ ಅಧ್ಯಕ್ಷ ತುಷಾರ್ ದೇಢಾ ಅವರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂಬ ಸಂಗತಿಯನ್ನು ಎನ್ಎಸ್ಯುಐ ಬಯಲು ಮಾಡಿದೆ. ಇದರ ಸೇಡಿನ ಭಾಗವಾಗಿಯೇ ಎಬಿವಿಪಿ ಕಾರ್ಯಕರ್ತರು ವಿವಿಯಲ್ಲಿರುವ ಎನ್ಎಸ್ಯುಐ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ” ಎಂದು ಎನ್ಎಸ್ಯುಐ ತಿಳಿಸಿದೆ. ಅಭಿ ದಹಿಯಾ ಅವರನ್ನು ಡಿಯುಎಸ್ಯು ಉಪಾಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಎನ್ಎಸ್ಯುಐ ಆಗ್ರಹಿಸಿದೆ. ಇದರ ಭಾಗವಾಗಿಯೇ, ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: JNU Election: ದಿಲ್ಲಿಯ ಜೆಎನ್ಯು ವಿದ್ಯಾರ್ಥಿ ಚುನಾವಣೆಯಲ್ಲಿ ಎಡಪಕ್ಷಗಳ ಕ್ಲೀನ್ ಸ್ವೀಪ್