Site icon Vistara News

ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆ ನಿರ್ಮಾಣದಲ್ಲಿ ಗೋಲ್ಮಾಲ್​; ಇಡಿ ಅಧಿಕಾರಿಗಳಿಂದ ದಾಳಿ, ತೀವ್ರ ಶೋಧ

ED raids multiple locations in Maharashtra In PMAY Case

#image_title

ಔರಂಗಾಬಾದ್​​: ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಪ್ರಧಾನ್​ ಮಂತ್ರಿ ಆವಾಸ್ ಯೋಜನೆ ( Pradhan Mantri Awas Yojana- ಬಡಜನರಿಗಾಗಿ ಮನೆ ನಿರ್ಮಾಣ ಮಾಡಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಹೊರತಂದಿರುವ ಯೋಜನೆ) ಅನುಷ್ಠಾನದ ವೇಳೆ ಹಗರಣ ನಡೆದಿದೆ ಎಂಬ ಆರೋಪದಡಿ ಇಡಿ ಇಂದು ಅಲ್ಲಿನ ಹಲವು ಭಾಗಗಳಲ್ಲಿ ದಾಳಿ ಮಾಡಿದೆ. ಔರಂಗಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​​, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟುವ ಟೆಂಡರ್​ ಕರೆಯುವಾಗ ​ದೊಡ್ಡ ಮಟ್ಟದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಕಾರಣಕ್ಕೆ ಈ ಶೋಧ ಕಾರ್ಯ ನಡೆದಿದೆ.

ಪಿಎಂ ಆವಾಸ್ ಯೋಜನೆಯಡಿ ವಸತಿ ಗೃಹ ನಿರ್ಮಾಣ ಮಾಡಲು ಬಿಡ್ಡರ್ಸ್​ ಆಗಿದ್ದ ಮೂರು ಕಂಪನಿಗಳ ಅಧಿಕಾರಿಗಳು ಇಡೀ ಟೆಂಡರ್​ ಪ್ರಕ್ರಿಯೆ ಮೇಲೆ ಹತೋಟಿ ಸಾಧಿಸಿದ್ದಾರೆ. ಟೆಂಡರ್​ ಫಾರ್ಮ್​​ನ್ನು ಔರಂಗಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​ ಪರಿಶೀಲನೆ ಮಾಡಿದಾಗ, ಮೂರು ಕಂಪನಿಗಳ ಅಧಿಕಾರಿಗಳೂ ಒಂದೇ ಇಂಟರ್​ನೆಟ್​ ಪ್ರೊಟೊಕಾಲ್​ ಅಡ್ರೆಸ್​​ (ಐಪಿ ಅಡ್ರೆಸ್​)ನಿಂದಲೇ ಇ-ಟೆಂಡರ್ ಫಾರ್ಮ್​ ತೆಗೆದುಕೊಂಡಿದ್ದು ಬೆಳಕಿಗೆ ಬಂದಿದೆ. ಅಂದರೆ ಒಂದೇ ಕಂಪ್ಯೂಟರ್​​ನಿಂದಲೇ ಆನ್​ಲೈನ್​ ಮೂಲಕ ಫಾರ್ಮ್​ ತೆಗೆದಿದ್ದಾರೆ. ಸ್ಥಳೀಯ ಆಡಳಿತದ ನಿಯಮಕ್ಕೆ ಇದು ತದ್ವಿರುದ್ಧ ಎಂದು ಆರೋಪಿಸಿ, ಔರಂಗಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​ ಪೊಲೀಸರಿಗೆ ದೂರು ನೀಡಿತ್ತು. ಆ ಮೂರು ಕಂಪನಿಗಳ ವಿರುದ್ಧ ಔರಂಗಾಬಾದ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಇಲ್ಲಿ ಕಂಪನಿಗಳು ಹಣ ಅಕ್ರಮ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದ್ದರಿಂದ ಇಡಿ ತನಿಖೆಗೆ ಕೈಗೆತ್ತಿಕೊಂಡಿದೆ. ಮೂರು ಕಂಪನಿಗಳು ಮತ್ತು 19 ಸಿಬ್ಬಂದಿಯ ವಿರುದ್ಧ ಐಪಿಸಿ ಸೆಕ್ಷನ್​​ನ ಕ್ರಿಮಿನಲ್ ಪಿತೂರಿ, ವಂಚನೆ, ಫೋರ್ಜರಿ ಮತ್ತು ಅಪ್ರಾಮಾಣಿಕ ಆಸ್ತಿ ವಿತರಣೆ ಎಂಬಿತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 402 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

ಪ್ರಧಾನಮಂತ್ರಿ ಆವಾಸ್​ ಯೋಜನೆ (ಪಿಎಂಎವೈ)ಯನ್ನು ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೊಳಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಬಡಜನರಿಗೆ ಮನೆ ಕಟ್ಟಿಸಿಕೊಡುವ ಸಲುವಾಗಿ ಇದನ್ನು ಅನುಷ್ಠಾನ ಮಾಡಲಾಗಿದೆ. ಇದಕ್ಕಾಗಿ ದೊಡ್ಡಮೊತ್ತದ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.

Exit mobile version