Site icon Vistara News

Farmer’s Protest: ರೈತರನ್ನು ಬಂಧಿಸಿಡಲು ಜೈಲುಗಳಾಗಿ ಬದಲಾದ ಹರ್ಯಾಣದ ಬೃಹತ್ ಕ್ರೀಡಾಂಗಣಗಳು!

Farmers Protest, Haryana high stadiums turned into jail to retain farmers

ನವದೆಹಲಿ: ಮಂಗಳವಾರ ದೆಹಲಿಗೆ ಸಾವಿರಾರು ರೈತರು (Farmer’s Protest) ನಡೆಸಲಿರುವ ದಿಲ್ಲಿ ಚಲೋಗೆ (Delhi Chalo) ಮುಂಚಿತವಾಗಿ ಹರಿಯಾಣ ಸರ್ಕಾರವು (Haryana Government) ಎರಡು ದೊಡ್ಡ ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಿದೆ(Stadiums turned into Jails). ಸಿರ್ಸಾದ ಚೌಧರಿ ದಲ್ಬೀರ್ ಸಿಂಗ್ ಒಳಾಂಗಣ ಕ್ರೀಡಾಂಗಣ ಮತ್ತು ದಬ್ವಾಲಿಯ ಗುರು ಗೋಬಿಂದ್ ಸಿಂಗ್ ಸ್ಟೇಡಿಯಂಗಳನ್ನು ಜೈಲುಗಳಾಗಿ ಪರಿವರ್ತಿಸಲಾಗಿದ್ದು, ದಿಲ್ಲಿ ಚಲೋ ಚಳವಳಿಯನ್ನು ಮುಂದುವರಿಸಿದರೆ ರೈತರನ್ನು ಬಂಧಿಸಿ ಈ ಕ್ರೀಡಾಂಗಣದಲ್ಲಿ ಇರಿಸಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ, ಭಾರೀ ಸಂಖ್ಯೆಯಲ್ಲಿ ರೈತರನ್ನು ಈ ತಾತ್ಕಾಲಿಕ ಜೈಲುಗಳಲ್ಲಿ ಬಂಧಿಸಿಡಲಾಗುತ್ತದೆ. ನೆರೆಯ ದೆಹಲಿಯ ಅಧಿಕಾರಿಗಳು ಅನೇಕ ಸ್ಥಳಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳಿಂದ ಗಡಿಗಳನ್ನು ಭದ್ರಪಡಿಸಿದ್ದಾರೆ. ಅಂತರರಾಜ್ಯ ಗಡಿಯಲ್ಲಿ ರಸ್ತೆ ಸ್ಪೈಕ್‌ಗಳು, ಮುಳ್ಳುತಂತಿಗಳು ಮತ್ತು ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಫೆಬ್ರವರಿ 12 ರಂದು ತಮ್ಮ ಬೇಡಿಕೆಗಳನ್ನು ಚರ್ಚಿಸಲು ಕೇಂದ್ರವು ರೈತ ಸಂಘಗಳನ್ನು ಮತ್ತೊಂದು ಸಭೆಗೆ ಆಹ್ವಾನಿಸಿದೆ; ಆದಾಗ್ಯೂ, ರೈತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ತಡೆಯಲು ಗಡಿಗಳನ್ನು ನಿರ್ಬಂಧಿಸುವ ಕ್ರಮವು ಪ್ರತಿಪಕ್ಷಗಳು ಮ್ತತು ರೈತ ಸಂಘಟನೆಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. 2020 ರೈತ ಚಳವಳಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಬಂಧ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹರ್ಯಾಣ ಮತ್ತು ದಿಲ್ಲಿ ಪೊಲೀಸರು ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನ ಹಲವು ರೈತ ಸಂಘಗಳು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಪ್ರತಿಭಟನೆಗೆ ಕರೆ ನೀಡಿವೆ.

ರೈತರು ದಿಲ್ಲಿಗೆ ಆಗಮಿಸಿದಂತೆ ತಡೆಯಲು ರಸ್ತೆಗಳನ್ನು ಬ್ಲಾಕ್ ಮಾಡಿರುವುದು, ತಂತಿ ಬೇಲಿಗಳನ್ನು ಹಾಕಿರುವುದು ಭಾರೀ ಟೀಕಿಗೆ ಗುರಿಯಾಗಿದೆ. ಈ ಕುರಿತಾದ ವಿಡಿಯೋವನ್ನು ಷೇರ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಅದೇ ರೀತಿ, ದಿಲ್ಲಿ ಸಿಎಂ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (SKM) ಕೂಡ ರಸ್ತೆಗಳ ತಡೆಯನ್ನು ಖಂಡಿಸಿದೆ. “ಸರ್ಕಾರವೇಕೆ ಹೆದರುತ್ತಿದೆ? ಬೃಹತ್ ಬ್ಯಾರಿಕೇಡಿಂಗ್ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವವೇ?” ಎಸ್‌ಕೆಎಂ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದ್ದಾರೆ. ಒಂದು ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಅದಕ್ಕೆ ಖಟ್ಟರ್ ಸರ್ಕಾರವೇ ಹೊಣೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi March: ರೈತರ ಪ್ರತಿಭಟನೆ ಹಿನ್ನೆಲೆ; ದೆಹಲಿ-ನೋಯ್ಡಾ ಗಡಿಯಲ್ಲಿ ಟ್ರಾಫಿಕ್ ಜಾಮ್

Exit mobile version