Site icon Vistara News

ಮದುವೆಗೆ ಹೊರಟವರು ಮಸಣಕ್ಕೆ; ಟ್ರಕ್‌-ಕಾರು ಡಿಕ್ಕಿಯಾಗಿ ಐವರ ಸಾವು

Tamil Nadu Accident

Five dead after truck collides with car in Tirupur district In Tamil Nadu

ಚೆನ್ನೈ: ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿ (Tirupur District) ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಧಾರಾಪುರಂ ಬಳಿಯ ಮನಕಡೌ ಗ್ರಾಮದ ಸಮೀಪ ಟ್ಯಾಂಕರ್‌ ಟ್ರಕ್‌ ಹಾಗೂ ಕಾರು ಡಿಕ್ಕಿಯಾಗಿದ್ದು (Accident), ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬ ಮಹಿಳೆಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೊಯಮತ್ತೂರು ಜಿಲ್ಲೆಯ ಇರುಗುರ್‌ನಿಂದ ಪೆಟ್ರೋಲ್‌ ತುಂಬಿಸಿಕೊಂಡು ಟ್ಯಾಂಕರ್‌ ಟ್ರಕ್ ಹೊರಟಿತ್ತು. ಇದೇ ವೇಳೆ ಕೊಯಮತ್ತೂರು ಜಿಲ್ಲೆಯ ಪೆರಿಯಾನಕನ್‌ ಪಾಳಯಂ ಗ್ರಾಮದಿಂದ ಕಾರಿನಲ್ಲಿ ಐವರು ದಿಂಡಿಗಲ್‌ ಜಿಲ್ಲೆಯ ಪಳನಿ ಗ್ರಾಮಕ್ಕೆ ಮದುವೆಗೆಂದು ಹೊರಟಿದ್ದರು. ಇದೇ ವೇಳೆ, ಧಾರಾಪುರಂ-ಪಳನಿ ರಸ್ತೆಯಲ್ಲಿ ಟ್ರಕ್‌ ಹಾಗೂ ಕಾರು ಡಿಕ್ಕಿಯಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಪಘಾತದ ತೀವ್ರತೆಗೆ ತಮಿಳ್‌ಮಣಿ (51), ಚಿತ್ರಾ (49), ಸೆಲ್ವರಾಣಿ (70) ಹಾಗೂ ಬಾಲಕೃಷ್ಣ (78) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಧಾರಾಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಲಾರಾಣಿ (50) ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Road Accident : ಅಪಘಾತ ತಪ್ಪಿಸಲು ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದ ಕ್ರೂಸರ್‌; ಮೂವರು ದಾರುಣ ಸಾವು

ಪರಿಹಾರ ಘೋಷಿಸಿದ ಸಿಎಂ

ಅಪಘಾತದಲ್ಲಿ ಮೃತಪಟ್ಟವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸಂತಾಪ ಸೂಚಿಸಿದ್ದಾರೆ. “ಧಾರಾಪುಂರ ಬಳಿ ಅಪಘಾತ ಸಂಭವಿಸಿ ಐವರು ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ. ಹಾಗೆಯೇ, ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಾ ಬಳಿ ಭೀಕರ ರಸ್ತೆ ಅಪಘಾತ ನಡೆದಿತ್ತು. ಟ್ಯಾಂಕರ್ ಮತ್ತು ಟಂಟಂ ಆಟೋ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.

Exit mobile version