Site icon Vistara News

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ! ಬಿತ್ತು ಲೀತು ಗ್ರಾಮದಲ್ಲಿ 13 ಜನರ ಹೆಣ

Fresh violence in Manipur and 13 people found dead in village

ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದ (Manipur Violence) ತೆಂಗ್ನೌಪಾಲ್ ಜಿಲ್ಲೆಯಲ್ಲಿ (Tengnoupal district) ಸೋಮವಾರ ಮಧ್ಯಾಹ್ನ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು (Fresh violence), ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲೀತು ಗ್ರಾಮದಲ್ಲಿ ಮಧ್ಯಾಹ್ನದ ಸುಮಾರಿಗೆ ಎರಡು ಗುಂಪುಗಳ ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ (Encounter) ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರ ನಡೆದ ಸ್ಥಳದಿಂದ ಭದ್ರತಾ ಪಡೆಗಳು ಕೇವಲ 10 ಕಿ.ಮೀ ದೂರದಲ್ಲಿದ್ದವು. ನಮ್ಮ ಪಡೆಗಳು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಲೀತು ಗ್ರಾಮದಲ್ಲಿ 13 ಶವಗಳ ಬಿದ್ದಿದ್ದವು. ಆದರೆ, ಅಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಕಂಡ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರೆಲ್ಲರೂ ಲೀತು ಗ್ರಾಮದಲ್ಲವರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವರು ಬೇರೆ ಸ್ಥಳದಿಂದ ಬಂದು ಇಲ್ಲಿನ ಸ್ಥಳೀಯ ಪ್ರತ್ಯೇಕತಾ ಗುಂಪುಗಳ ಜತೆಗೆ ಸಂಘರ್ಷ ನಡೆಸಿರಬಹುದು. ಆಗ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದೆಡೆ, ಮೃತಪಟ್ಟವರ ಗುರುತು ಪತ್ತೆಯನ್ನು ಪೊಲೀಸರಲಾಗಲೀ, ಭದ್ರತಾ ಪಡೆಗಳಾಗಲೇ ಖಚಿತಪಡಿಸಿಲ್ಲ.

ಈಗಾಗಲೇ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಮತ್ತು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಮೇ 3ರಿಂದ ಸಂಘರ್ಷ ನಡೆಯುತ್ತಿದೆ. ಎರಡೂ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಇದವರೆಗೆ ಕನಿಷ್ಠ 182 ಜನರು ಮೃತಪಟ್ಟು, 50 ಸಾವಿರಕ್ಕೂ ಅಧಿಕ ಜನರು ನಿರ್ಗತಿಕರಾಗಿದ್ದಾರೆ.

ಹಿಂಸಾಚಾರಪೀಡಿತ ಮಣಿಪುರ ರಾಜ್ಯದ ಗಡಿ ಪ್ರದೇಶಗಳನ್ನು ಹೊರತುಪಡಿಸಿ ಕೆಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಅಧಿಕಾರಿಗಳು ಭಾನುವಾರ ಮಾತ್ರ ಹಿಂತೆಗೆದುಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಮತ್ತೆ ಗುಂಡಿನ ಚಕಮಕಿ ನಡೆದಿದೆ, ಹಿಂಸಾಚಾರ ಭುಗಿಲೆದ್ದಿದೆ.

ಹಿಂಸಾಚಾರಪೀಡಿತ ಕೆಲವು ಜಿಲ್ಲೆಗಳಲ್ಲಿನ ಪ್ರದೇಶಗಳು ಮೈತೈ ಅಥವಾ ಕುಕಿಗಳ ಪ್ರಾಬಲ್ಯವನ್ನು ಹೊಂದಿವೆ ಮತ್ತು ಕಳೆದ ಏಳು ತಿಂಗಳುಗಳಲ್ಲಿ ಹೆಚ್ಚಿನ ಹಿಂಸಾಚಾರ, ಗುಂಡಿನ ಚಕಮಕಿ, ಬೆಂಕಿ ಹಚ್ಚುವುದು ಮತ್ತು ಅಪಹರಣಗಳಿಗೆ ಈ ಪ್ರದೇಶವು ಸಾಕ್ಷಿಯಾಗಿದೆ. ಕೇಂದ್ರ ಮತ್ತು ಮಣಿಪುರ ಸರ್ಕಾರವು, ರಾಜ್ಯದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫೋರ್ಸ್ (ಯುಎನ್‌ಎಲ್‌ಎಫ್) ನೊಂದಿಗೆ ದಿಲ್ಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ದಿನಗಳ ನಂತರ, ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Manipur Violence: ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಸೇನಾಧಿಕಾರಿಗೆ ಮಣಿಪುರ ಹಿಂಸಾಚಾರ ತಡೆಯುವ ಹೊಣೆ!

Exit mobile version