Site icon Vistara News

Gangster Duo: 250 ಪೊಲೀಸ್‌, ಡ್ರೋನ್‌ ಕಣ್ಗಾವಲಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗ್ಯಾಂಗ್‌ಸ್ಟರ್‌ ಜೋಡಿ; ಯಾಕಿಷ್ಟು ಭದ್ರತೆ?

gangstar duo

gangstar duo

ನವದೆಹಲಿ: ಗ್ಯಾಂಗ್‌ಸ್ಟರ್‌ ಜೋಡಿ (Gangster Duo) ರಾಜಸ್ಥಾನದ ಅನುರಾಧಾ ಚೌಧರಿ ಅಲಿಯಾಸ್ ‘ಮೇಡಮ್ ಮಿಂಜ್’ (Anuradha Choudhary alias Madam Minz) ಮತ್ತು ಹರಿಯಾಣದ ಸಂದೀಪ್ ಅಲಿಯಾಸ್ ಕಲಾ ಜತೇಡಿ (Sandeep alias Kala Jathedi) ಮಂಗಳವಾರ (ಮಾರ್ಚ್‌ 12) ದೆಹಲಿಯಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ವಿವಾಹವಾದರು.

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸಂದೀಪ್‌ಗೆ ವಿವಾಹವಾಗಲು ದೆಹಲಿ ನ್ಯಾಯಾಲಯವು ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ಸಮಯಾವಕಾಶ ನೀಡಿತ್ತು. ʼʼದ್ವಾರಕಾ ಸೆಕ್ಟರ್ -3ರ ಸಂತೋಷ್ ಬ್ಯಾಂಕ್ವೆಟ್‌ನಲ್ಲಿ ಈ ವಿವಾಹ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಗ್ಯಾಂಗ್ ವಾರ್‌ ಅಥವಾ ಕಲಾ ಜತೇಡಿ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ತಡೆಗಟ್ಟಲು ಭಾರಿ ಭದ್ರತಾ ನಿಯೋಜನೆ ಮಾಡಲಾಗಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಪೊಲೀಸ್ ವಿಶೇಷ ಸೆಲ್, ವಿಶೇಷ ಸಿಬ್ಬಂದಿ ಮತ್ತು ಅಪರಾಧ ವಿಭಾಗದ ತಂಡಗಳನ್ನು ಮದುವೆಗೆ ಮುಂಚಿತವಾಗಿಯೇ ನಿಯೋಜಿಸಲಾಗಿತ್ತು. ಹಾಲ್‌ ಪ್ರವೇಶಿಸುವ ಮುನ್ನ ಅತಿಥಿಗಳಿಗೆ ಬಾರ್‌ಕೋಡ್‌ ಬ್ಯಾಂಡ್‌ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿಯಾಗಿ ಪ್ರವೇಶ ಪಾಸ್ ಇಲ್ಲದೆ ಯಾವುದೇ ವಾಹನಕ್ಕೆ ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಂದೀಪ್‌ನ ವಕೀಲರು ತಿಹಾರ್ ಜೈಲಿನಿಂದ ಏಳು ಕಿಲೋ ಮೀಟರ್ ದೂರದಲ್ಲಿರುವ ಬ್ಯಾಂಕ್ವೆಟ್‌ ಅನ್ನು 51,000 ರೂ.ಗೆ ಬುಕ್ ಮಾಡಿದ್ದರು.

250 ಪೊಲೀಸರ ನಿಯೋಜನೆ

250ಕ್ಕೂ ಹೆಚ್ಚು ಪೊಲೀಸರು ಮತ್ತು ಹೈಟೆಕ್ ಶಸ್ತ್ರಾಸ್ತ್ರಗಳನ್ನು ಸಾಗಿಸುವ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳ ಕಮಾಂಡೋಗಳ ನಿಯೋಜನೆಯ ನಡುವೆ ಕಲಾ ಜತೇಡಿ ಮತ್ತು ಮೇಡಮ್ ಮಿಂಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಾತ್ರವಲ್ಲ ಮದುವೆಯ ಸಮಯದಲ್ಲಿ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಅರ್ಧ ಡಜನ್‌ಗೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್‌ಗಳು ಕಾರ್ಯನಿರ್ವಹಿಸಿವೆ.

ಯಾರು ಈ ಕಲಾ ಜತೇಡಿ- ಮೇಡಮ್ ಮಿಂಜ್ ?

ಈ ಇಬ್ಬರ ಕ್ರಿಮಿನಲ್‌ ಹಿನ್ನಲೆ ಭಯಾನಕವಾಗಿದೆ. ಹತ್ಯೆಗೀಡಾದ ದರೋಡೆಕೋರ ಆನಂದಪಾಲ್ ಸಿಂಗ್‌ನ ಆಪ್ತೆ ಅನುರಾಧಾ ವಿರುದ್ಧ ರಾಜಸ್ಥಾನ ಮತ್ತು ದೆಹಲಿಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಹಣ ಅಕ್ರಮ ವರ್ಗಾವಣೆ, ಅಪಹರಣ, ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ಅರ್ಧ ಡಜನ್‌ಗೂ ಅಧಿಕ ಕೇಸ್‌ ಆಕೆಯ ಹೆಸರಿನಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Gangster Duo: ಮಾ. 12ರಂದು ಗ್ಯಾಂಗ್‌ಸ್ಟರ್‌ ಜೋಡಿ ಅನುರಾಧಾ-ಸಂದೀಪ್ ವಿವಾಹ; ಏನಿವರ ಕ್ರಿಮಿನಲ್‌ ಬ್ಯಾಕ್‌ಗ್ರೌಂಡ್‌?

ಇನ್ನು ಸಂದೀಪ್‌ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ನ ನಿಕಟವರ್ತಿ. ಈತ ದೆಹಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ದರೋಡೆ, ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಹನ್ನೆರಡಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. 2021ರ ಜುಲೈ 30ರಂದು ಇವರು ಯಮುನಾ ನಗರ-ಸಹರಾನ್ಪುರ ಹೆದ್ದಾರಿಯ ಧಾಬಾ ಬಳಿ ಸಿಕ್ಕಿ ಬಿದ್ದಿದ್ದರು. ದೆಹಲಿ ಪೊಲೀಸ್ ವಿಶೇಷ ಸೆಲ್ ತಂಡವು ಬಂಧಿಸುವ ವೇಳೆ ಇವರು ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version