Site icon Vistara News

ಪ್ರಮುಖ ಹುದ್ದೆಗೆ ನೇಮಕವಾದ ಒಂದೇ ತಾಸಲ್ಲಿ ರಾಜೀನಾಮೆ ಕೊಟ್ಟ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​

Gulam Nabi Azad

ನವ ದೆಹಲಿ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad)​ ಅವರನ್ನು ಮಂಗಳವಾರ ಜಮ್ಮು-ಕಾಶ್ಮೀರ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ನೇಮಕ ಮಾಡಿದ್ದರು. ಆದರೆ ನೇಮಕಗೊಂಡ ಒಂದೇ ತಾಸಿನಲ್ಲಿ ಈ ಹುದ್ದೆಗೆ ಗುಲಾಂ ನಬಿ ಆಜಾದ್​ ರಾಜೀನಾಮೆ ನೀಡಿದ್ದಾರೆ. ‘ನನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ಹೊಸ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಕಾರಣ ಹೇಳಿದ್ದಾರೆ. ಇನ್ನು ಜಮ್ಮು-ಕಾಶ್ಮೀರ ಕಾಂಗ್ರೆಸ್​ ಪ್ರಚಾರ ಸಮಿತಿ ಮಂಗಳವಾರವೇ ರಚನೆಗೊಂಡಿದ್ದು, 11 ನಾಯಕರನ್ನು ಒಳಗೊಂಡಿದೆ. ಜಮ್ಮು-ಕಾಶ್ಮೀರ ಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಕಾರಿ ಅಧ್ಯಕ್ಷ ಇದರ ಶಾಶ್ವತ ಆಹ್ವಾನಿತರು ಆಗಿರುತ್ತಾರೆ.

ಜಮ್ಮು-ಕಾಶ್ಮೀರದ ಕಾಂಗ್ರೆಸ್​​ನ ಸಾಂಸ್ಥಿಕ ಹುದ್ದೆಗಳಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಇಲ್ಲಿನ ಪ್ರದೇಶ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವಿಕಾರ್​ ರಸೂಲ್​ ವಾನಿ ನೇಮಕಗೊಂಡಿದ್ದಾರೆ. ಇವರು ಗುಲಾಂ ನಬಿ ಆಜಾದ್​ಗೆ ಅತ್ಯಾಪ್ತರು. ಹಾಗೇ, ರಮಣ್​ ಭಲ್ಲಾ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಆದರೆ ಆಜಾದ್​ ಮಾತ್ರ ತಮಗೆ ಕೊಟ್ಟ ಹುದ್ದೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆರೋಗ್ಯ ಸರಿಯಿಲ್ಲ ಎಂದು ಅವರು ಹೇಳಿದ್ದರೂ, ವಾಸ್ತವ ಕಾರಣ ಬೇರೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಗುಲಾಂ ನಬಿ ಆಜಾದ್​ ಎಐಸಿಸಿಯ ಅಖಿಲ ಭಾರತೀಯ ರಾಜಕೀಯ ವ್ಯವಹಾರ ಸಮಿತಿಯಲ್ಲಿ ಇದ್ದರು. ಅಲ್ಲಿಂದ ತೆಗೆದು ಜಮ್ಮು-ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷನನ್ನು ಮಾಡಿದ್ದು ತಮಗೆ ಕೊಟ್ಟ ಹಿಂಬಡ್ತಿ ಎಂದೇ ಅವರು ಭಾವಿಸಿದ್ದಾರೆ. ಹೀಗಾಗಿಯೇ ಹುದ್ದೆ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್​ ನಾಯಕರಿಗೆ ಅಸಮಾಧಾನ
ಜಮ್ಮು-ಕಾಶ್ಮೀರ ಕಾಂಗ್ರೆಸ್​​ನಲ್ಲಿ ಮಂಗಳವಾರ ದೊಡ್ಡಮಟ್ಟದ ಬದಲಾವಣೆಯಾಗಿ, ಪ್ರಚಾರ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಸಮನ್ವಯ ಸಮಿತಿ, ಪ್ರಣಾಳಿಕಾ ಸಮಿತಿ ಸೇರಿ ಇನ್ನಿತರ ಕೆಲವು ಸಮಿತಿಗಳ ರಚನೆ, ರೀ -ಶಫಲ್​ ಆಗಿದ್ದರ ಬಗ್ಗೆ ಕಾಂಗ್ರೆಸ್​ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶ್ವನಿ ಹಂಡಾ ಪ್ರತಿಕ್ರಿಯೆ ನೀಡಿ, ‘ಜಮ್ಮು-ಕಾಶ್ಮೀರದಲ್ಲಿ ಪಕ್ಷ ಸಂಘಟನೆಯಲ್ಲಿ ತಳಮಟ್ಟದಿಂದ ಕೆಲಸ ಮಾಡಿದವರನ್ನು ಪ್ರಚಾರ ಸಮಿತಿಗೆ ನೇಮಕ ಮಾಡಲಿಲ್ಲ. ಅವರಿಗೆ ಅನ್ಯಾಯ ಮಾಡಲಾಗಿದೆ. ಇದೇ ಕಾರಣರಕ್ಕೆ ಗುಲಾಂ ನಬಿ ಆಜಾದ್​ ರಾಜೀನಾಮೆ ಕೊಟ್ಟಿದ್ದಾರೆ’ ಎಂದಿದ್ದಾರೆ.

ಹಾಗೇ, ಇನ್ನೊಬ್ಬ ನಾಯಕ, ಮಾಜಿ ಶಾಸಕ ಹಾಜಿ ಅಬ್ದುಲ್​ ರಶೀದ್​ ದಾರ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ಜಮ್ಮು-ಕಾಶ್ಮೀರ ಪ್ರದೇಶ ಸಮಿತಿ ಅಧ್ಯಕ್ಷರ ನೇಮಕ ಮಾಡುವಾಗ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚನೆ-ಚರ್ಚೆ ನಡೆಸಲಿಲ್ಲ. ಈಗಿನ ನೇಮಕಾತಿ ವಿರುದ್ಧ ನಾವು ಅಸಮಾಧಾನಹೊಂದಿ, ಕಾಂಗ್ರೆಸ್​ ಸಮನ್ವಯ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟಿದ್ದೇನೆ’ ಎಂದಿದ್ದಾರೆ.

ಗುಲಾಂ ನಬಿ ಆಜಾದ್ ಬಂಡಾಯ?
ಗುಲಾಂ ನಬಿ ಆಜಾದ್​ ಕಾಂಗ್ರೆಸ್​​ ರಾಜ್ಯಸಭಾ ಸದಸ್ಯರಾಗಿದ್ದರು. ಕಳೆದ ವರ್ಷ ಅವರ ಅವಧಿ ಮುಗಿದ ಮೇಲೆ ಕಾಂಗ್ರೆಸ್​ ಅವರನ್ನು ಮರುನಾಮನಿರ್ದೇಶನ ಮಾಡಲಿಲ್ಲ. ಇವರು ಜಿ23 ಗುಂಪಿನ ಪ್ರಮುಖ ನಾಯಕರಾಗಿದ್ದು, ಕಾಂಗ್ರೆಸ್​ ನಾಯಕತ್ವ ಬದಲಾವಣೆಗೆ ಪದೇಪದೆ ಆಗ್ರಹ ಮಾಡುತ್ತ ಬಂದಿದ್ದಾರೆ. ಒಂದರ ಬೆನ್ನಿಗೆ ಒಂದರಂತೆ ಚುನಾವಣೆಯಲ್ಲಿ ಸೋತ ನಂತರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಇವರು, ಕಾಂಗ್ರೆಸ್​​ನಲ್ಲಿ ಸಾಂಸ್ಥಿಕ ಸಂಘಟನೆಯಾಗಬೇಕು ಎಂದು ಒತ್ತಡ ಹೇರುತ್ತಲೇ ಇದ್ದವರು. ಇದೀಗ ಕೊಟ್ಟ ಹುದ್ದೆಯನ್ನು ತೊರೆದ ಬೆನ್ನಲ್ಲೇ, ಇವರೂ ಕೂಡ ಕಾಂಗ್ರೆಸ್​ನಿಂದ ಬಂಡಾಯ ಏಳಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಸ್ಪರ್ಧಿಸಲ್ಲ ಎಂದ ಪವಾರ್‌, ಪ್ರತಿಪಕ್ಷಗಳ ಪ್ಲ್ಯಾನ್‌ಗೆ ಆರಂಭದಲ್ಲೇ ಹಿನ್ನಡೆ

Exit mobile version