Site icon Vistara News

Coronavirus | ಮತ್ತೆ ಶುರುವಾಯ್ತು ಕೊರೊನಾ ಆತಂಕ; ಇಂದು ಕೇಂದ್ರ ಆರೋಗ್ಯ ಸಚಿವರಿಂದ ಮಹತ್ವದ ಸಭೆ

Health Minister Mansukh Mandaviya hold Covid 19 review meeting today 11 Am

ನವ ದೆಹಲಿ: ಕೊವಿಡ್​ 19 ಸೋಂಕಿನ ಅಬ್ಬರ ಮತ್ತೆ ಶುರುವಾಗುವ ಲಕ್ಷಣ ಗೋಚರಿಸುತ್ತಿದೆ. ಚೀನಾದಲ್ಲಂತೂ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದೆ. ಅಷ್ಟೇ ಅಲ್ಲ, ಜಪಾನ್​, ದಕ್ಷಿಣ ಕೊರಿಯಾ, ಬ್ರೆಜಿಲ್​, ಯುಎಸ್​​ಗಳಲ್ಲೂ ಸೋಂಕಿನ ಹಬ್ಬುವಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದಲ್ಲೂ ಎಚ್ಚರ ವಹಿಸಲು ಮುಂದಾಗಲಾಗುತ್ತಿದೆ. ಇಂದು ಬೆಳಗ್ಗೆ 11ಗಂಟೆಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಅವರು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿ, ಭಾರತದಲ್ಲಿ ಸದ್ಯ ಇರುವ ಕೊವಿಡ್​ 19 ಪರಿಸ್ಥಿತಿಯ ವರದಿ ಪಡೆಯಲಿದ್ದಾರೆ.

ಭಾರತದಲ್ಲೂ ಕೊವಿಡ್​ 19 ಜಾಸ್ತಿ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಜಿನೋಮ್​ ಸಿಕ್ವೆನ್ಸಿಂಗ್​ ಅನುಕ್ರಮ ಹೆಚ್ಚಿಸಬೇಕು. ಪಾಸಿಟಿವ್​ ಕೇಸ್​ಗಳನ್ನು ಟ್ರ್ಯಾಕ್​​ ಮಾಡಿ, ರೂಪಾಂತರಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್​ ಅವರು ಡಿ.20ರಂದು ಕೇಂದ್ರಾಡಳಿತ ಪ್ರದೇಶಗಳಿಗೆ, ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಟೆಸ್ಟ್​, ಟ್ರ್ಯಾಕ್​​, ಟ್ರೀಟ್​, ವ್ಯಾಕ್ಸಿನೇಶನ್​ ಮತ್ತು ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆ ಎಂಬ ಐದು ಹಂತದ ಕಾರ್ಯಕತಂತ್ರಗಳನ್ನು ಪ್ರಬಲವಾಗಿ-ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಕೊರೊನಾವನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಸದ್ಯ ವಾರಕ್ಕೆ 1200 ಕೊರೊನಾ ಪ್ರಕರಣಗಳಷ್ಟೇ ವರದಿಯಾಗುತ್ತಿದೆ. ಆದರೂ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲು ಎದುರಾಗಿದ್ದು, ನಾವೂ ಎಚ್ಚರಿಕೆಯಿಂದ ಇರಬೇಕು ಎಂದು ರಾಜೇಶ್​ ಭೂಷಣ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂದು ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ನಡೆಸಲಿರುವ ಸಭೆಯಲ್ಲಿ ಆರೋಗ್ಯ ಇಲಾಖೆ, ಫಾರ್ಮಾಸ್ಯುಟಿಕಲ್ಸ್ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಆಯುಷ್​ ಇಲಾಖೆಗಳ ಕಾರ್ಯದರ್ಶಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಧಾನ ನಿರ್ದೇಶಕ ರಾಜೀವ್​ ಬಹ್ಲ್​, ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ.ಪೌಲ್​ ಮತ್ತು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (NTAGI) ಅಧ್ಯಕ್ಷ ಎನ್​.ಎಲ್​.ಅರೋರಾ ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು.

ಚೀನಾದಲ್ಲಿ ಈಗಾಗಲೇ ಕೊರೊನಾ ವೈರಸ್​ ವಿಪರೀತ ಆಗಿದೆ. ಸೋಂಕಿನಿಂದ ಜನರು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್​​ಗಳ ಕೊರತೆ ಉಂಟಾಗಿದೆ. ಹಾಗೇ ಶವ ಇಡಲೂ ಜಾಗವಿಲ್ಲ. ಶವಾಗಾರಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದ್ದು, ಪೊಲೀಸ್​ ಬಿಗಿ ಭದ್ರತೆಯಲ್ಲಿ ಶವಗಳ ಸಂಸ್ಕಾರ ಮಾಡಲಾಗುತ್ತಿದೆ. ಚೀನಾದಲ್ಲಿ ಮುಂದಿನ 90 ದಿನಗಳಲ್ಲಿ ಶೇ.60ರಷ್ಟು ಜನರಿಗೆ ಕೊವಿಡ್​ 19 ತಗುಲುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಲಿಯಾಂಗ್ ಫೀಗಲ್-ಡಿಂಗ್ ಹೇಳಿದ್ದಾರೆ. ಹಾಗೇ, ವಿಶ್ವದ ಶೇ.10ರಷ್ಟು ಜನರಿಗೆ ಕೊರೊನಾ ಹರಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಹೀಗೆ ವಿಶ್ವದ ಹಲವು ರಾಷ್ಟ್ರಗಳು ಮತ್ತೆ ಕೊರೊನಾ ಮಹಾಮಾರಿ ಸಂಕಷ್ಟಕ್ಕೆ ಒಳಗಾಗಿರುವ ಬೆನ್ನಲ್ಲೇ ಭಾರತದಲ್ಲೂ ಕಾರ್ಯಪ್ರವೃತ್ತವಾಗಲಿದೆ.

ಇದನ್ನೂ ಓದಿ: Viral Video | ಚೀನಾದಲ್ಲಿ ಮತ್ತೆ ಮಿತಿಮೀರಿದ ಕೊರೊನಾ; ಆಸ್ಪತ್ರೆಗಳಲ್ಲಿ ಬೆಡ್​​ ಕೊರತೆ, ಶವಸಂಸ್ಕಾರ ಅವಿರತ

Exit mobile version