ಪಂಜಾಬ್ನಿಂದ ಪರಾರಿಯಾಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ಪಾಲ್ ಸಿಂಗ್ (Amritpal Singh) ನೇಪಾಳಕ್ಕೆ ಕಾಲಿಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆತ ನೇಪಾಳವನ್ನು ಪ್ರವೇಶಿಸಿದ್ದೇ ಆದಲ್ಲಿ, ಅಲ್ಲಿಂದ ಮತ್ತೊಂದು ರಾಷ್ಟ್ರಕ್ಕೆ ಪರಾರಿಯಾಗದಂತೆ ತಡೆಯಿರಿ ಎಂದು ಭಾರತ ಸರ್ಕಾರ ನೇಪಾಳಕ್ಕೆ ಹೇಳಿತ್ತು. ಆದರೆ ಸದ್ಯದವರೆಗೆ ಅಮೃತ್ಪಾಲ್ ಸಿಂಗ್ ನೇಪಾಳಕ್ಕೆ ಪ್ರವೇಶ ಮಾಡಿರುವ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಆದರೂ ಆತನ ಪ್ರವೇಶದ ಸಾಧ್ಯತೆ ಬಗ್ಗೆ ಭಾರತ ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ನಮ್ಮ ಪೊಲೀಸರು ಹೈಅಲರ್ಟ್ ಆಗಿದ್ದಾರೆ ಎಂದು ಪೋಖರೇಲ್ನ ಪೊಲೀಸ್ ಆಯುಕ್ತ ಪೋಶರಾಜ್ ಪೋಖ್ರಾಜ್ ತಿಳಿಸಿದ್ದಾರೆ. ನೇಪಾಳಕ್ಕೆ ಅಮೃತ್ಪಾಲ್ ಸಿಂಗ್ ಪ್ರವೇಶ ಮಾಡಿದ್ದಾನೆ, ಆತನನ್ನು ಹಿಡಿಯಲು ಭಾರತದಿಂದಲೂ ರಕ್ಷಣಾ ಸಿಬ್ಬಂದಿ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅದು ಸುಳ್ಳು. ಭಾರತದಿಂದ ಯಾರೂ ಬಂದಿಲ್ಲ. ನಾವಿಲ್ಲಿ ಅಲ್ರ್ಟ್ ಆಗಿದ್ದೇವೆ ಎಂದಿದ್ದಾರೆ.
ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಮಾರ್ಚ್ 18ರಿಂದಲೂ ನಾಪತ್ತೆಯಾಗಿದ್ದಾನೆ. ಆತನನ್ನು ಪಂಜಾಬ್ನ ನಾಕೋಡರ್ ಬಳಿ ಪೊಲೀಸರು ಬಂಧಿಸಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡಿದ್ದಾನೆ. ಅಂದಿನಿಂದಲೂ ಅವನ ಪತ್ತೆಗೆ ಬಲೆ ಬೀಸಲಾಗಿದೆ. ಆದರೆ ಅಮೃತ್ಪಾಲ್ ಸಿಂಗ್ ಕೈಗೆಟಕುತ್ತಿಲ್ಲ. ಈ ಮಧ್ಯೆ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ ಈಗ ಯುಕೆಗೆ ಹೋಗುವ ಪ್ರಯತ್ನದಲ್ಲಿದ್ದಾನೆ. ಯುನೈಟೆಡ್ ಕಿಂಗ್ಡಮ್ಗೆ ತೆರಳಿ, ಅಲ್ಲಿನ ಪೌರತ್ವ ಪಡೆದು ಭಾರತದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಆತ ಹುನ್ನಾರ ನಡೆಸುತ್ತಿದ್ದಾನೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಆತ ಫೆಬ್ರವರಿಯಲ್ಲೇ ಬ್ರಿಟಿಷ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ ಎಂದೂ ಹೇಳಲಾಗಿದೆ. ಈತ ಫೆಬ್ರವರಿಯಲ್ಲಿ ಕಿರೆಣ್ ಕೌರ್ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕಿರೆಣ್ ಯುಕೆ ನಾಗರಿಕಳಾಗಿದ್ದು, ಅದರ ಆಧಾರದ ಮೇಲೆಯೇ ಪಾಲ್ ಕೂಡ ಅಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ ಅಮೃತ್ಪಾಲ್ ಅರ್ಜಿ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.