Site icon Vistara News

Odisha Rail Accident : ಅವಘಡ ತಡೆಯಲು ಕವಚ್​ ಇದ್ದರೂ ಒಡಿಶಾದಲ್ಲಿ ರೈಲು ಅಪಘಾತ ನಡೆದಿದ್ದು ಹೇಗೆ?

odisha Train Accident

#image_title

ಭುವನೇಶ್ವರ: ಒಡಿಶಾದ ಬಾಲಾಸೋರ್​​ನಲ್ಲಿ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿ (Odisha Rail Accident) 70ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 300ಕ್ಕೂ ಅಧಿಕ ಪ್ರಯಾಣಿಕರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ರೈಲ್ವೆ ಅವಘಡ ಎನಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕೆಂದರೆ ಕಳೆದ ಒಂದು ದಶಕದಿಂದ ಭಾರತದಲ್ಲಿ ದೊಡ್ಡ ಪ್ರಮಾಣದ ರೈಲು ದುರಂತಗಳೇ ನಡೆದಿಲ್ಲ. ಸಣ್ಣ ಪುಟ್ಟ ಹಳಿ ತಪ್ಪುವ ಘಟನೆಗಳನ್ನು ಹೊರತುಪಡಿಸಿದರೆ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಉಂಟಾಗಿಲ್ಲ. 2012ರಲ್ಲಿ ನಡೆದ ಹಂಪಿ ಎಕ್ಸ್​ಪ್ರೆಸ್​ ದುರ್ಘಟನೆಯೇ ಇತ್ತೀಚಿನ ಅತ್ಯಂದ ದೊಡ್ಡ ದುರಂತ ಎನಿಸಿಕೊಂಡಿತ್ತು. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯೇ ರೈಲು ಅವಘಡಗಳ ಸಂಖ್ಯೆ ಕಡಿಮೆಯಾಗಲು ಕಾರಣ. ಕೇಂದ್ರ ರೈಲ್ವೆ ಸಚಿವಾಲಯ ಈ ಸುಧಾರಣೆಗಳ ಬಗ್ಗೆ ಆಗಾಗ್ಗೆ ಮಾಹಿತಿ ನೀಡುತ್ತಿದೆ. ಅಲ್ಲದೆ, ಅಪಘಾತದ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂಬುದಾಗಿ ಬೆನ್ನುತಟ್ಟಿಕೊಂಡಿತ್ತು. ಕವಚ್​​ ಹೆಸರಿನ ಹೊಸ ಯೋಜನೆ ಮೂಲಕ ಅವಘಡಗಳ ಸಂಖ್ಯೆಯನ್ನು ಸಂಪೂರ್ಣ ಕಡಿಮೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಹೇಳುತ್ತಿದೆ. ಹಾಗಾದರೆ ಕವಚ್​​ ಇದ್ದರೂ ಬೃಹತ್​ ದುರಂತ ನಡೆದಿರುವುದು ಹೇಗೆ ಎಂಬುದೇ ಪ್ರಶ್ನಾರ್ಹ ವಿಷಯ.

ಸುಧಾರಣಾ ಕ್ರಮಗಳೇನು?

ಅವಧಿ ಮೀರಿದ ಪರಿಕರಗಳನ್ನು ಸಮಯೋಚಿತವಾಗಿ ಬದಲಾಯಿಸುವುದು, ಟ್ರ್ಯಾಕ್​​ನ ಉನ್ನತೀಕರಣ ಮತ್ತು ನಿರ್ವಹಣೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಾಗಿದೆ. ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಇಂಟರ್ಲಾಕಿಂಗ್ ವ್ಯವಸ್ಥೆಗಳು, ಸುರಕ್ಷತಾ ಅಭಿಯಾನಗಳು, ಅಧಿಕಾರಿಗಳ ತರಬೇತಿಗೆ ಹೆಚ್ಚಿನ ಒತ್ತು ಮತ್ತು ಸುರಕ್ಷಿತ ಅಭ್ಯಾಸಗಳ ಪಾಲನೆಗಾಗಿ ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಸಂಪೂರ್ಣ ಟ್ರ್ಯಾಕ್ ಸರ್ಕ್ಯೂಟಿಂಗ್, ಬ್ಲಾಕ್ ಪ್ರೂವಿಂಗ್ ಆಕ್ಸಲ್ ಕೌಂಟರ್ಸ್ (ಬಿಪಿಎಸಿ), ಆಕ್ಸಿಲರಿ ವಾರ್ನಿಂಗ್ ಸಿಸ್ಟಮ್ (ಎಡಬ್ಲ್ಯುಎಸ್), ಕಲರ್ ಲೈಟ್ ಎಲ್ಇಡಿ ಸಿಗ್ನಲ್​​ಗಳು, ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ (ವಿಸಿಡಿ), 60 ಕೆ.ಜಿ ಹಳಿಗಳು ಮತ್ತು ಪೂರ್ವ ಒತ್ತಡದ ಕಾಂಕ್ರೀಟ್ ಸ್ಲೀಪರ್​ಗಳ ಬಳಕೆ, ಉತ್ತಮ ವೆಲ್ಡಿಂಗ್ ತಂತ್ರಜ್ಞಾನ ಮತ್ತು ಲಿಂಕ್ ಹಾಫ್ಮನ್ ಬುಶ್ (ಎಲ್ಎಚ್​​ಬಿ) ರೈಲು ಸಂಚಾರದ ವೇಗ ವೃದ್ಧಿಗೆ ಸಹಾಯ ಮಾಡುವ ಜತೆಗೆ ಅಪಘಾತ ನಡೆಯದಂತೆ ನೋಡಿಕೊಳ್ಳುತ್ತವೆ. ಇದರ ಪ್ರಯೋಜನ ಭಾರತೀಯರ ಅನುಭವಕ್ಕೆ ಬಂದಿತ್ತು ಕೂಡ. ಜತೆಗೆ 5ಜಿಯಂತಹ ಸಂವಹನ ಸಾಧನಗಳನ್ನೂ ಸಮಪರ್ಕವಾಗಿ ರೈಲ್ವೆ ಇಲಾಖೆಯಲ್ಲಿ ಬಳಕೆ ಮಾಡಲಾಗುತ್ತಿದೆ.

ಏನಿದು ಕವಚ್​​?

ಆತ್ಮನಿರ್ಭರ ಭಾರತದ ಭಾಗವಾಗಿ 2022-23ರಲ್ಲಿ ರೈಲುಗಳ ಸುರಕ್ಷತೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕಾಗಿ ಸುಮಾರು 2,000 ಕಿ.ಮೀ. ಮಾರ್ಗವನ್ನು ಕವಚ್ ಅಡಿಯಲ್ಲಿ ತರಲಾಗುವುದು ಎಂದು ಸಚಿವಾಲಯ ಹೇಳಿತ್ತು ಕವಚ್ ಎಂಬುದು ಸೇಫ್ಟಿ ಇಂಟೆಗ್ರಿಟಿ ಲೆವೆಲ್ 4 ಮಾನದಂಡಗಳಾಗಿವೆ. ಇದನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್​​ಡಿಎಸ್​​ಒ) ಅಭಿವೃದ್ಧಿಪಡಿಸಿದೆ. ಕವಚ್​ ವ್ಯವಸ್ಥೆಯು ರೈಲುಗಳು ಕೆಂಪು ಸಿಗ್ನಲ್​ ದಾಟಿ ಮುಂದಕ್ಕೆ ಹೋಗುವುದನ್ನು ತಡೆಯುತ್ತದೆ. ಒಂದು ವೇಳೆ ದಾಟಿದರೆ ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಆ್ಯಕ್ವಿವೇಟ್​ ಅಗುತ್ತದೆ. ಹೀಗಾಗಿ ಎರಡು ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯ ಸಂಭವ ಕಡಿಮೆ.

ಐದು ವರ್ಷಗಳಲ್ಲಿ ಗಮನಾರ್ಹ ಕುಸಿತ

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ರೈಲು ಅಪಘಾತಗಳ ಸಂಖ್ಯೆ ಗಮನಾರ್ಹ ಕುಸಿತ ಕಂಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿವೆ. 2016-17ರಲ್ಲಿ 104 ರೈಲು ಅಪಘಾತಗಳು ಸಂಭವಿಸಿದ್ದರೆ, 2020-21ರಲ್ಲಿ ಈ ಸಂಖ್ಯೆ 22ಕ್ಕೆ ಇಳಿದಿದೆ. 2019-20 ರಿಂದ 2020-21 ರವರೆಗೆ ಸತತ ಎರಡು ವರ್ಷಗಳವರೆಗೆ, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಆದರೆ ಇದು ಕೊರೊನಾ ಸೋಂಕಿನ ಅವಧಿಯಾಗಿದೆ.

Exit mobile version