Site icon Vistara News

Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ

Narendra Modi

In last 10 years, Varanasi has made me Banarasi: Says PM Narendra Modi

ವಾರಾಣಸಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಗೆ (Varanasi) ಭೇಟಿ ನೀಡಿದ್ದಾರೆ. ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ, ರೋಡ್‌ ಶೋ ಹಾಗೂ 13 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ನಾನು ಕಳೆದ 10 ವರ್ಷದಲ್ಲಿ ವಾರಾಣಸಿಗೆ ಬಂದು, ಇಲ್ಲಿನ ಜನರ ಜತೆಗೂಡಿ ಬನಾರಸಿಯೇ (Banarasi) ಆಗಿದ್ದೇನೆ” ಎಂದು ತಿಳಿಸಿದರು.

“ಕಳೆದ 10 ವರ್ಷಗಳಲ್ಲಿ ಹಲವು ಬಾರಿ ನಾನು ವಾರಾಣಸಿಗೆ ಆಗಮಿಸಿದ್ದೇನೆ. ವಾರಾಣಸಿಯೊಂದಿಗೆ ನನ್ನ ನಂಟು ಅತ್ಯುತ್ತಮವಾಗಿದೆ. ಹಾಗೆಯೇ, ದೇವಾಲಯ, ಭವನಗಳನ್ನು ನಿರ್ಮಿಸುವ ಜತೆಗೆ ವಾರಾಣಸಿಯಲ್ಲಿ ರಸ್ತೆ, ಸಂಪರ್ಕ ಸೇರಿ ಹಲವು ರೀತಿಯಲ್ಲಿ ಅಭಿವೃದ್ಧಿಗೊಳಿಸಿದ್ದೇನೆ. ಯುವಕರಿಗೆ ಉದ್ಯೋಗಗಳು ಲಭಿಸಿವೆ. ವಿಶ್ವನಾಥ ಧಾಮ ಲೋಕಾರ್ಪಣೆ ಬಳಿಕ ಕಾಶಿಗೆ 12 ಕೋಟಿಗೂ ಅಧಿಕ ಜನ ಭೇಟಿ ನೀಡಿದ್ದಾರೆ. ಇದರಿಂದಾಗಿ ಕಾಶಿಯ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಆಟೋ ಚಾಲಕರು ಸೇರಿ ಎಲ್ಲರಿಗೂ ವ್ಯಾಪಾರ, ಉದ್ಯೋಗ ಸಿಕ್ಕಿದೆ” ಎಂದು ತಿಳಿಸಿದರು.

ಪ್ರತಿಪಕ್ಷಗಳಿಗೆ ತಿರುಗೇಟು

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಸೇರಿ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. “ಪರಿವಾರವಾದ, ತುಷ್ಟೀಕರಣದ ನೀತಿಯ ಪರಿಣಾಮವಾಗಿ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳವರೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಉತ್ತರ ಪ್ರದೇಶವನ್ನು ಹಾಳು ಮಾಡಿದ್ದವು. ಆದರೆ, ಕಳೆದ 10 ವರ್ಷದಲ್ಲಿ ಉತ್ತರ ಪ್ರದೇಶವು ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ. ಯುವಕರು ಸೇರಿ ಎಲ್ಲರೂ ಉದ್ಯೋಗ ಪಡೆಯುತ್ತಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: Narendra Modi:‌ ಕಾಶಿಯಲ್ಲಿ ಕೃತಕ ಬುದ್ಧಿಮತ್ತೆ ಮ್ಯಾಜಿಕ್; ಮಕ್ಕಳಿಗೆ ಮೋದಿ ಮೇಷ್ಟ್ರ ಪಾಠ

“ಇದುವರೆಗೆ ಪರಿವಾರದಿಗಳು ನರೇಂದ್ರ ಮೋದಿಯನ್ನು ತೆಗಳುತ್ತಿದ್ದರು. ಈಗ ಉತ್ತರ ಪ್ರದೇಶದ ನಾಗರಿಕರನ್ನೂ ಪರಿವಾರವಾದಿಗಳು ತೆಗಳುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ಅಭಿವೃದ್ಧಿ ಬೇಕಾಗಿಲ್ಲ. ಕಾಶಿ, ಅಯೋಧ್ಯೆಯ ಮಂದಿರಗಳು ಬೇಕಾಗಿಲ್ಲ. ಹಾಗಾಗಿ, ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪರಿವಾರವಾದಿಯೊಬ್ಬ ಕಾಶಿ ಹಾಗೂ ಉತ್ತರ ಪ್ರದೇಶದ ಯುವಕರು ನಶೆಯಲ್ಲಿರುತ್ತಾರೆ ಎಂದು ಹತಾಶೆಯಲ್ಲಿ ಹೇಳಿದ್ದಾರೆ. ಇದು ಪ್ರತಿಪಕ್ಷಗಳು, ಪರಿವಾರವಾದಿಗಳ ಮನಸ್ಥಿತಿ” ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸುಲ್ತಾನ್‌ಪುರ-ವಾರಾಣಸಿ ಚತುಷ್ಪಥ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ವಾರಾಣಸಿ-ರಾಂಚಿ-ಕೋಲ್ಕೊತಾ ಎಕ್ಸ್‌ಪ್ರೆಸ್‌ ವೇ ಸೇರಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಿದ ಬಳಿಕ ಮಾತನಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version