Site icon Vistara News

ರಾಜೀನಾಮೆ ಇಲ್ವೇ ಇಲ್ಲ; ವಿಶ್ವಾಸ ಮತ ಯಾಚಿಸಲು ಸಿದ್ಧರಾದ ಜಾರ್ಖಂಡ ಸಿಎಂ ಹೇಮಂತ್​ ಸೊರೆನ್​

Jharkhand Chief Minister Hemant Soren will will bring a confidence motion

ರಾಂಚಿ: ಜಾರ್ಖಂಡ್​​ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್​ ಯಾವ ಹೊತ್ತಲ್ಲಿ ಬೇಕಾದರೂ ಸ್ಥಾನ ಕಳೆದುಕೊಳ್ಳಬಹುದು. ಶಾಸಕನ ಸ್ಥಾನದಿಂದಲೇ ಅನರ್ಹಗೊಳ್ಳಬಹುದು ಎಂಬ ಸ್ಥಿತಿ ಕಳೆದ ಒಂದು ವಾರದಿಂದಲೂ ಇದೆ. ಆದರೆ ಇದುವರೆಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಗಣಿಗಾರಿಕೆ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ, ತಾವೇ ವಿಸ್ತರಿಸಿಕೊಂಡ ಆರೋಪ ಸಾಬೀತಾದ ಬೆನ್ನಲ್ಲೇ ಸೊರೆನ್​​ಗೆ ಸಂಕಷ್ಟ ಎದುರಾಗಿದೆ. ಜಾರ್ಖಂಡ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಸೊರೆನ್​ ಅನರ್ಹತೆ ಆದೇಶವನ್ನು ರಾಜ್ಯಪಾಲರೂ ಸಿದ್ಧ ಮಾಡಿಟ್ಟಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಆ ಪ್ರಕ್ರಿಯೆ ಮುಂದುವರಿಯುತ್ತಿಲ್ಲ.

ಹೀಗಿರುವಾಗ ಜಾರ್ಖಂಡದಲ್ಲಿ ಸೆಪ್ಟೆಂಬರ್​ 5ರಂದು (ನಾಳೆ) ಹೇಮಂತ್​ ಸೊರೆನ್​ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಲಿದೆ ಎಂದು ವರದಿಯಾಗಿದೆ. ಜಾರ್ಖಂಡ್​​ನಲ್ಲಿ ಜೆಎಂಎಂ-ಕಾಂಗ್ರೆಸ್​ ಮೈತ್ರಿ ಸರ್ಕಾರವಿದೆ ಮತ್ತು ಸರ್ಕಾರಕ್ಕೆ ಯಾವುದೇ ಅಪಾಯವೂ ಇಲ್ಲ. 82 ಶಾಸಕರ ಸಾಮರ್ಥ್ಯದ ಜಾರ್ಖಂಡ ವಿಧಾನಸಭೆಯಲ್ಲಿ ಜೆಎಂಎಂನ 30 ಶಾಸಕರು, ಕಾಂಗ್ರೆಸ್​​ನ 18 ಮತ್ತು ಆರ್​ಜೆಡಿಯ ಒಬ್ಬ ಶಾಸಕರು ಇದ್ದಾರೆ. ಅಂದರೆ ಸರ್ಕಾರದಲ್ಲಿರುವ ಶಾಸಕರ ಬಲ 49. ಜಾರ್ಖಂಡ್​​ನಲ್ಲಿ ಜೆಎಂಎಂ-ಕಾಂಗ್ರೆಸ್​ ಮೈತ್ರಿ 52 ಶಾಸಕರ ಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆದರೆ ನಂತರ ಮೂವರು ಕಾಂಗ್ರೆಸ್​ ಶಾಸಕರು ಭ್ರಷ್ಟಾಚಾರ ಕೇಸ್​​ನಲ್ಲಿ ಅಮಾನತುಗೊಂಡಿದ್ದಾರೆ. ಹೀಗಾಗಿ ಬಲ 49ಕ್ಕೆ ಕುಸಿದಿದೆ. ಹಾಗಿದ್ದರೂ ಸರ್ಕಾರಕ್ಕೇನೂ ಸಮಸ್ಯೆಯಿಲ್ಲ.

ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗವಾಗುತ್ತಿದ್ದಂತೆ ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಮೈತ್ರಿ ಸರ್ಕಾರದ ಶಾಸಕರನ್ನೆಲ್ಲ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇದೇ ಸಮಯವನ್ನು ಬಿಜೆಪಿ ಬಳಸಿಕೊಂಡು, ಶಾಸಕರ ಕುದುರೆ ವ್ಯಾಪಾರ ನಡೆಸಬಹುದು ಎಂಬ ಕಾರಣಕ್ಕೆ ಶಾಸಕರನ್ನೆಲ್ಲ ಕರೆದುಕೊಂಡು ಖುಂತಿ ಜಿಲ್ಲೆಯ ಲತರಾತು ಜಲಾಶಯಕ್ಕೆ ಹೋಗಿದ್ದರು. ಹಾಗೇ ಛತ್ತೀಸ್​ಗಢ್​ನಲ್ಲಿರುವ ರೆಸಾರ್ಟ್​​ನಲ್ಲಿಯೂ ಇವರೆಲ್ಲ ಇದ್ದರು. ಇದೀಗ ನಾಳೆ ವಿಶ್ವಾಸ ಮತ ಯಾಚನೆ ನಡೆಯಲಿರುವುದರಿಂದ ಎಲ್ಲರೂ ವಿಧಾನಸಭೆಯಲ್ಲಿ ಹಾಜರು ಇರಲಿದ್ದಾರೆ. ಕೆಲವೇ ದಿನಗಳ ಹಿಂದೆ ದೆಹಲಿ ಆಮ್​ ಆದ್ಮಿ ಪಕ್ಷದ ಸರ್ಕಾರವೂ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿತ್ತು.

ಇದನ್ನೂ ಓದಿ: Hemant Soren | ಜಾರ್ಖಂಡ್‌ ಸಿಎಂ ರಾಜೀನಾಮೆ ನೀಡುತ್ತಿಲ್ಲ, ಆದರೆ ಮುಂದಿನ ನಡೆಯೇನು?

Exit mobile version