ನವದೆಹಲಿ: ಕೆಎಸ್ಡಿಎಲ್ ಕಾಂಟ್ರಾಕ್ಟ್ ಹಗರಣದಲ್ಲಿ(KSDL Contract Scam) ಪ್ರಮುಖ ಆರೋಪಿಯಾಗಿರುವ, ಬಿಜೆಪಿಯ ಶಾಸಕ ವಿರೂಪಾಕ್ಷಪ್ಪ ಮಾಡಾಳು ಅವರಿಗೆ ಹೈಕೋಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ, ಕರ್ನಾಟಕ ಲೋಕಾಯಕ್ತ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು. ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಆದ್ಯತೆಯ ಮೇರೆಗೆ ತ್ವರಿತ ವಿಚಾರಣೆ ನಡೆಸುವಂತೆ ಅರ್ಜಿಯಲ್ಲಿ ಲೋಕಾಯುಕ್ತ ಕೇಳಿಕೊಂಡಿತ್ತು. ಈ ಮೊದಲಿಗೆ ಈ ಅರ್ಜಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿದ್ದ ಪೀಠದ ಮುಂದೆ ಬಂದಿತ್ತು. ಬಳಿಕ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಪೀಠದ ಮುಂದೆ ವಿಚಾರಣೆಗೆ ಬಂತು.
ತುರ್ತು ವಿಚಾರಣೆಯ ಅಗತ್ಯವೇನಿದೆ?
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಜಸ್ಟೀಸ್ ಕೌಲ್ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸುತ್ತಿದ್ದಂತೆ, ಲೋಕಾಯುಕ್ತ ಪರ ವಕೀಲರ ಕೌಲ್ ಅವರಿದ್ದ ಪೀಠಕ್ಕೆ ಹಾಜರಾದರು. ಈ ಅರ್ಜಿಯನ್ನು ಯಾಕೆ ತ್ವರಿತವಾಗಿ ವಿಚಾರಣೆ ಮಾಡಬೇಕು ಎಂದು ಪೀಠವು ಲೋಕಾಯಕ್ತವನ್ನು ಪ್ರಶ್ನಿಸಿತು.
ಆಗ ಉತ್ತರಿಸಿದ ಲೋಕಾಯುಕ್ತ ಪರ ವಕೀಲರು, ಆರೋಪಿಯು ಹಾಲಿ ಶಾಸಕರಾಗಿದ್ದಾರೆ ಮತ್ತು ಅವರ ಮನೆಯಿಂದ ಬೃಹತ್ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಆಗ ಪೀಠವು ಅರ್ಜಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಲಿಸ್ಟ್ ಮಾಡಲಾಗುವುದು ಎಂದು ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ವಕೀಲರು, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸುವಂತೆ ಕೋರಿದರು.
ಇದನ್ನೂ ಓದಿ: Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್ಗೆ ಲೋಕಾಯುಕ್ತ ಮೊರೆ
ಆಗ ಜಸ್ಟೀಸ್ ಕೌಲ್ ಅವರು, ಇದು ಕೇವಲ ಜಾಮೀನು ರದ್ದುಗೊಳಿಸುವ ಮನವಿ, ಅಂಥ ಅರ್ಜೆಂಟ್ ಏನಿದೆ? ನಂತರ ಲಿಸ್ಟ್ ಮಾಡಲಾಗುವುದು ಎಂದರು.