Site icon Vistara News

Madurai Train Fire: ಮದುರೈ ರೈಲು ಬೆಂಕಿ ರಹಸ್ಯ ಬಯಲು; ಗ್ಯಾಸ್‌ ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಕಾರಣ!

Madurai Train Fire

ಮದುರೈ: ಲಕ್ನೋದಿಂದ ರಾಮೇಶ್ವರಂಗೆ(Lucknow to Rameshwaram) ತೆರಳುತ್ತಿದ್ದ ಪ್ರವಾಸಿ ರೈಲಿನ ಕೋಚ್‌ನಲ್ಲಿ ಬೆಂಕಿ(Madurai Train Fire) ಅವಘಡದಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ(Tamil Nadu train fire) ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಮದುರೈ ರೈಲ್ವೆ ಜಂಕ್ಷನ್ ಬಳಿ ನಿಂತಿದ್ದ ಭಾರತ್ ಗೌರವ್ ವಿಶೇಷ ಪ್ರವಾಸಿ ಕೋಚ್‌ನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆರಂಭಿಕ ಹಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಹತ್ತು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದುರಂತ ಸಂಭವಿಸಲು ಪ್ರಮುಖ ಕಾರಣ ಪ್ರಯಾಣಿಕರೊಬ್ಬರು ಅಕ್ರಮವಾಗಿ ಬಳಸಿದ ಎಲ್‌ಪಿಜಿ ಸಿಲಿಂಡರ್(gas cylinders in train) ಎಂದು ತಿಳಿದುಬಂದಿದೆ.

ಅವಘಡಕ್ಕೆ ಅಕ್ರಮ ಗ್ಯಾಸ್​ ಸಿಲಿಂಡರ್​ ಕಾರಣ

ಈ ಅವಘಡಕ್ಕೆ ಕೋಚ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಎಲ್‌ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ ಎರಡು ಬೋಗಿಗಳಿಗೆ ಹತ್ತಿಕೊಂಡ ಬೆಂಕಿ ಬಳಿಕ ಇಡೀ ರೈಲಿಗೆ ಹೊತ್ತಿಕೊಂಡಿದೆ. ಬೆಳಗಿನ ಜಾವ 5.15ರ ಹೊತ್ತಿಗೆ ಈ ಅವಘಡ ಸಂಭವಿಸಿದೆ. ಐಆರ್‌ಸಿಟಿಸಿ ಪೋರ್ಟಲ್ ಬಳಸಿ ಯಾರು ಬೇಕಾದರೂ ಪಾರ್ಟಿ ಕೋಚ್ ಬುಕ್ ಮಾಡಬಹುದಾಗಿದೆ. ಆದರೆ ಯಾವುದೇ ದಹನಕಾರಿ ವಸ್ತುಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅನುಮತಿ ಇಲ್ಲ. ಈ ಕೋಚ್ ಸಾರಿಗೆ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಆದರೆ ಈ ಗುಂಪು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡಿದ್ದೇ ದುರಂತಕ್ಕೆ ಪ್ರಮುಖ ಕಾರಣ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಗಣೇಶನ್ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಸ್ಥಳದಲ್ಲಿ ಚದುರಿದ ವಸ್ತುಗಳ ಪೈಕಿ ಸಿಲಿಂಡರ್ ಮತ್ತು ಆಲೂಗಡ್ಡೆಯ ಚೀಲ ಸಿಕ್ಕಿದೆ.


ಇದನ್ನೂ ಓದಿ Madurai Train Fire Accident: ಭಾರತ್ ಗೌರವ್ ವಿಶೇಷ ರೈಲಿನಲ್ಲಿ ಅಗ್ನಿ ಅವಘಡ; 9 ಪ್ರಯಾಣಿಕರ ಸಾವು; 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಶಿಕ್ಷಾರ್ಹ ಅಪರಾಧ

1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ಪ್ರಯಾಣಿಕರು ರೈಲಿನಲ್ಲಿ ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್‌, ಆ್ಯಸಿಡ್​, ಸೀಮೆ ಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್ ಮತ್ತು ಸ್ಟೌ ಹಾಗೂ ಸ್ಫೋಟಕಗಳಂತಹ ಬೆಂಕಿಯುಂಟಾಗುವ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದೀಗ ಈ ದುರಂತಕ್ಕೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಗ್ಯಾಸ್​ ಸಿಲಿಂಡರ್​ ಬಳಸಲು ಅನುಮತಿ ನೀಡದೇ ಇದ್ದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ.


ಪರಿಶೀಲನೆ ನಡೆಸಿದ ಮಧುರೈ ಜಿಲ್ಲಾಧಿಕಾರಿ

ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಅವರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಚ್‌ನಿಂದ 55 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಸಮಯದಲ್ಲಿ ಪ್ರಯಾಣಿಕರು ಮಲಗಿದ್ದರು ಹೀಗಾಗಿ ಬೇಗನೇ ಬಿಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಸ್ಥಳಕ್ಕೆ ರಾಜ್ಯ ಕಂದಾಯ ಸಚಿವ ಪಿ. ಮೂರ್ತಿ ಹಾಗೂ ಮಧುರೈ ಪೊಲೀಸ್ ಆಯುಕ್ತ ಡಾ.ಜೆ. ಲೋಕನಾಥನ್ ಘಟನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಕ್ನೋದಿಂದ ಬಂದ ರೈಲು

ಲಕ್ನೋದಿಂದ ಬಂದ ಈ ಪ್ರವಾಸಿ ರೈಲಿನ ಕೋಚನ್ನು ನಗರ್‌ಕೋಯಿಲ್‌ನಲ್ಲಿ (16730- ಪುನಲೂರ್-ಮಧುರೈ ಎಕ್ಸ್‌ಪ್ರೆಸ್) ಎಕ್ಸ್‌ಪ್ರೆಸ್ ರೈಲಿನಿಂದ(Madurai railway station) ಬೇರ್ಪಡಿಸಲಾಗಿತ್ತು. ಕೋಚ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಈ ಬೇರ್ಪಟ್ಟ ಕೋಚನ್ನು ಮಧುರೈ ಸ್ಟೇಬ್ಲಿಂಗ್ ಲೈನ್ ಟ್ರ್ಯಾಕ್‌ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

10 ಲಕ್ಷ ಪರಿಹಾರ

ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಗ್ನಿ ಅವಘಡ ಮತ್ತು ದುರಂತಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ದಕ್ಷಿಣ ರೈಲ್ವೆ ಇಲಾಖೆ ಎರಡು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. 9360552608, ಮತ್ತು 8015681915 ಈ ಸಹಾಯವಾಣಿಗೆ ಕರೆ ಮಾಡಿ ಪ್ರಯಾಣಿಕರ ಮಾಹಿತಿ ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Exit mobile version