Site icon Vistara News

Jagdeep Dhankar: ಗಾಂಧೀಜಿ ಮಹಾಪುರುಷ, ಮೋದಿ ಯುಗಪುರುಷ; ಉಪ ರಾಷ್ಟ್ರಪತಿ ಧನಕರ್ ಬಣ್ಣನೆ

narendra modi and jagdeep dhankhar

Mahatma Gandhi Mahapurush, PM Narendra Modi Yugpurush: Vice President Jagdeep Dhankar

ಮುಂಬೈ: ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹಾಡಿ ಹೊಗಳಿದ್ದಾರೆ. “ಮಹಾತ್ಮ ಗಾಂಧೀಜಿ (Mahatma Gandhi) ಅವರು ಕಳೆದ ಶತಮಾನದ ಮಹಾಪುರುಷನಾದರೆ, ನರೇಂದ್ರ ಮೋದಿ ಅವರು 21ನೇ ಶತಮಾನದ ಯುಗಪುರುಷ” ಎಂದು ಜಗದೀಪ್‌ ಧನಕರ್‌ (Jagdeep Dhankar) ಅವರು ಬಣ್ಣಿಸಿದ್ದಾರೆ.

ಮುಂಬೈನಲ್ಲಿ ನಡೆದ ಜೈನ ಸಂನ್ಯಾಸಿ, ತತ್ವಜ್ಞಾನಿ ಶ್ರೀಮದ್‌ ರಾಜ್‌ಚಂದ್ರಜಿ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, “ಮಹಾತ್ಮ ಗಾಂಧೀಜಿ ಅವರು ಸತ್ಯಾಗ್ರಹ ಹಾಗೂ ಅಹಿಂಸೆಯಿಂದ ನಮ್ಮೆಲ್ಲರನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಹಾಗೆಯೇ, ದೇಶದ ಯಶಸ್ವಿ ಪ್ರಧಾನಿಯಾದ ನರೇಂದ್ರ ಮೋದಿ ಅವರು ಅಭಿವೃದ್ಧಿ ಮೂಲಕ ದೇಶದ ಜನ ಯಾವ ಮಾರ್ಗವನ್ನು ಹಿಡಿಯಬೇಕು, ಎಂತಹ ಏಳಿಗೆ ಹೊಂದಬೇಕು ಎಂಬುದನ್ನು ತೋರಿಸಿಕೊಟ್ಟರು” ಎಂದು ಜಗದೀಪ್‌ ಧನಕರ್‌ ಹೇಳಿದರು.

“ದೇಶ ಕಂಡ ಧೀಮಂತ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ನರೇಂದ್ರ ಮೋದಿ ಅವರ ಮಧ್ಯೆ ಸಾಮ್ಯತೆ ಇದೆ. ಅವರಿಬ್ಬರೂ ಶ್ರೀಮದ್‌ ರಾಜ್‌ಚಂದ್ರಜಿ ಅವರ ಬಗ್ಗೆ ಗೌರವವನ್ನು ಹೊಂದಿದ್ದಾರೆ. ಅವರಿಬ್ಬರೂ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಹಾಗಾಗಿಯೇ, ಒಬ್ಬರು ಕಳೆದ ಶತಮಾನದ ಮಹಾಪುರುಷನಾದರೆ, ಮತ್ತೊಬ್ಬರು ಈ ಶತಮಾನದ ಯುಗಪುರುಷ ಎಂಬುದಾಗಿ ನನಗೆ ಅನಿಸುತ್ತದೆ” ಎಂದು ಹೇಳಿದರು.

“ಒಂದಷ್ಟು ದುಷ್ಟಶಕ್ತಿಗಳು ದೇಶದ ಏಳಿಗೆಯನ್ನು ವಿರೋಧಿಸಿದವು. ಎಲ್ಲರೂ ಒಗ್ಗೂಡಿ ದೇಶವನ್ನು ಏಳಿಗೆಯತ್ತ ಕೊಂಡೊಯ್ಯುವುದನ್ನು ಒಂದಷ್ಟು ಜನರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ದೇಶದಲ್ಲಿ ಯಾವಾಗಲಾದರೂ ಒಳಿತಾಗುತ್ತಿದ್ದರೆ, ಸಕಾರಾತ್ಮಕ ಸಂಗತಿಗಳು ಘಟಿಸುತ್ತಿದ್ದರೆ, ಒಂದಷ್ಟು ಜನ ಮಾತ್ರ ದುಃಖದಲ್ಲಿದ್ದರು. ಇಂತಹ ಸಂಗತಿಗಳು ದೇಶದಲ್ಲಿ ನಡೆಯಬಾರದು” ಎಂದು ಉಪ ರಾಷ್ಟ್ರಪತಿ ಹೇಳಿದರು.

ಇದನ್ನೂ ಓದಿ: Budget Session: ಪ್ರಧಾನಿ ಮೋದಿಯನ್ನು ಮೌನಿಬಾಬಾ ಎಂದ ಖರ್ಗೆ; ಇಂಥ ಮಾತು ಬೇಡ ಎಂದ ರಾಜ್ಯಸಭೆ ಅಧ್ಯಕ್ಷ ಜಗದೀಪ್​ ಧನಕರ್​

“ತುಂಬ ದೇಶಗಳ ಇತಿಹಾಸವು 500ರಿಂದ 700 ವರ್ಷಗಳಷ್ಟು ಹಳೆಯದಾಗಿದೆ. ನಮ್ಮ ದೇಶದ ಇತಿಹಾಸ 5 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ಅರಿತು ನಾವು ಒಗ್ಗೂಡಿ ಏಳಿಗೆಯತ್ತ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ದೇಶಕ್ಕೆ ದೊಡ್ಡ ಅಪಾಯವೇ ಎದುರಾಗುತ್ತದೆ” ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version