Site icon Vistara News

Lok Sabha: ಲೋಕಸಭೆ ದಾಳಿಯ ಮಾಸ್ಟರ್‌ಮೈಂಡ್ ಲಲಿತ್ ಝಾ ಪೊಲೀಸರಿಗೆ ಶರಣು!

Mastermind of Security Breach in Lok Sabha arrested in delhi

ನವದೆಹಲಿ: ಬುಧವಾರ ಇಬ್ಬರು ಆಗುಂತಕರು ಲೋಕಸಭೆಗೆ ಬಂದು ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿ (Color Smoke Bomb) ಆತಂಕದ ಪರಿಸ್ಥಿತಿ ಸೃಷ್ಟಿಸಿದ್ದರು. ಈ ಲೋಕಸಭೆ ಭದ್ರತಾ ಲೋಪ ಪ್ರಕರಣಕ್ಕೆ (Security Breach in Lok Sabha) ಸಂಬಂಧಿಸಿದಂತೆ, ಕರ್ನಾಟಕದ ಮನೋರಂಜನ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿತ್ತು. ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾಗಿದ್ದ ಲಲಿತ್ ಝಾ(Masterminde Lalit Jha), ದಿಲ್ಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಹೋಗಿ ಗುರುವಾರ ಶರಣಾಗಿದ್ದಾನೆ(Surrendered to police). ಬಳಿಕ ಆತನನ್ನು ಔಪಚಾರಿಕವಾಗಿ ನವದೆಹಲಿ ಜಿಲ್ಲಾ ಪೊಲೀಸರು (Delhi Police) ಅರೆಸ್ಟ್ ಮಾಡಿ, ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಕೋಲ್ಕೊತಾ ಮೂಲದ ಶಿಕ್ಷಕ ಲಲಿತ್ ಝಾ, ಘಟನೆ ನಡೆದ ಕೂಡಲೇ ಪರಾರಿಯಾಗಿದ್ದ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಅನ್ವಯ ಪಾಸ್ ‌ಪಡೆದುಕೊಂಡಿದ್ದ ಡಿ. ಮನೋರಂಜನ್ ಮತ್ತು ಉತ್ತರ ಪ್ರದೇಶದ ಸಾಗರ್ ಶರ್ಮಾ ಅವರು ಸಂಸತ್ ಭದ್ರತೆಯನ್ನು ಭೇದಿಸಿದ್ದರು ಮತ್ತು ಲೋಕಸಭೆ ವಿಸಿಟರ್ ಗ್ಯಾಲರಿಗೆ ಆಗಮಿಸಿದ್ದರು. ಕಲಾಪ ನಡೆಯುತ್ತಿದ್ದ ವೇಳೆ, ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರು ವಿಸಿಟರ್ ಗ್ಯಾಲರಿಯಂದ ಸಂಸದರು ಇರುವಲ್ಲಿಗೆ ಜಂಪ್ ಮಾಡಿ, ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದರು. ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ, ಸಂಸತ್ತಿನ ಹೊರಗೆ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಅವರು ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದರು. ಬಳಿಕ ಈ ನಾಲ್ವರು ಅಲ್ಲದೇ, ವಿಕ್ಕಿ ಶರ್ಮಾ ಎಂಬಾತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ, ಸಂಸತ್ ಭದ್ರತಾ ಲೋಪ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಲಲಿತ್ ಝಾ ಮಾತ್ರ ತಲೆ ಮರೆಸಿಕೊಂಡಿದ್ದ ಮತ್ತು ಆತನನ್ನು ಗುರುವಾರ ಬಂಧಿಸಲಾಗಿದೆ.

ಸಂಸತ್ತಿಗೆ ಭೇಟಿ ನೀಡಿ ಭದ್ರತಾ ಲೋಪ ಪತ್ತೆ ಹಚ್ಚಿದ್ದ ಮನೋರಂಜನ್

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ(MP Pratap Simha) ಅವರ ಮೂಲಕ ಲೋಕಸಭೆ ವಿಸಿಟರ್ ಪಾಸ್‌ (Visitor Pass) ತೆಗೆದುಕೊಂದು ಹೋಗಿದ್ದ ಡಿ.ಮನೋರಂಜನ್ (D Manoranjan), ಭದ್ರತೆ ತಪಾಸಣೆ ವೇಳೆ ಬೂಟ್‌ಗಳನ್ನು ಪರೀಕ್ಷಿಸುವುದಿಲ್ಲ (Shoes were not checked) ಎಂಬ ಸಂಗತಿಯನ್ನು ಜುಲೈ ತಿಂಗಳಲ್ಲೇ ಕಂಡುಕೊಂಡಿದ್ದ ಎಂಬ ಮಾಹಿತಿ ಗೊತ್ತಾಗಿದೆ. ಹಳೇ ಸಂಸತ್ ಭವನದಲ್ಲಿ ಪರೀಕ್ಷೆ ಮಾಡುವಾಗ ಬೂಟ್ ಪರೀಕ್ಷೆ ಮಾಡದೇ ಇರುವುದೇ ಈ ಒಟ್ಟಾರೆ ಭದ್ರತಾ ಲೋಪ ಕೃತ್ಯಕ್ಕೆ ಪ್ರೇರಣೆ ಮಾಡಿದೆ ಎನ್ನಲಾಗಿದೆ.

ಜುಲೈನಲ್ಲಿ ದಿಲ್ಲಿಗೆ ಬಂದಿದ್ದ ಮನೋನರಂಜನ್, ಸಂಸದ ಹೆಸರಿನಲ್ಲಿ ವಿಸಿಟರ್ ಪಾಸ್‌ ಪಡೆದುಕೊಂಡು ಸಂಸತ್ ಭವನಕ್ಕೆ ಹೋಗಿದ್ದ. ಈ ವೇಳೆ ಅವರು ಶೂಗಳನ್ನು ಪರೀಕ್ಷಿಸುವುದಿಲ್ಲ ಎಂಬ ಸಂಗತಿಯನ್ನು ಕಂಡುಕೊಂಡ ಎಂದು ತನಿಖೆಯನ್ನು ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೋಕಸಭೆ ಲೋಪ ಭದ್ರತೆಯ ಪ್ರಕರಣ ನಡೆದ ಮಾರನೇ ದಿನ ಸಂಸತ್ತಿನ ಹೊಸ ಪ್ರವೇಶ ದ್ವಾರದ ಬಳಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಂಸತ್‌ ಪ್ರವೇಶಿಸುವವರ ತಮ್ಮ ಶೂಗಳನ್ನು ಅಲ್ಲಿ ಬಿಟ್ಟು ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ. ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ 8 ಭದ್ರತಾ ಸಿಬ್ಬಂದಿಯನ್ನು ಸರ್ಕಾರವು ಅಮಾನತು ಮಾಡಿದೆ.

ಲೋಕಸಭೆ ಭದ್ರತಾ ಲೋಪಕ್ಕೆ ಕಾರಣವಾದವರ ತಂಡದ ನಾಯಕ ಎಂದು ಹೇಳಲಾಗುತ್ತಿರುವ ಲಲಿತ್ ಝಾ ಈಗ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಕೋಲ್ಕೊತಾದ ನಿವಾಸಿಯಾಗಿದ್ದಾರೆ ಮತ್ತು ವೃತ್ತಿಯಲ್ಲಿ ಟೀಚರ್ ಆಗಿದ್ದಾರೆ. ಈ ಎಲ್ಲರೂ ಭಗತ್ ಸಿಂಗ್ ಫ್ಯಾನ್ ಪುಟವನ್ನು ಫಾಲೋ ಮಾಡುತ್ತಿದ್ದರು ಮತ್ತು ಹುತಾತ್ಮರಾಗುವ ರೀತಿ ಏನನ್ನಾದರೂ ಮಾಡಲು ಸಿದ್ದರಾಗಿದ್ದರು.

ಲಲಿತ್ ಝಾ, ಮನೋರಂಜನ್ ಡಿ, ಸಾಗರ್ ಶರ್ಮಾ, ನೀಲಂ ಆಜಾದ್, ಅಮೋಲ್ ಶಿಂಧೆ ಅವರು ಬುಧವಾರ ಸಂಸತ್ತಿನಲ್ಲಿ ಮತ್ತು ಸುತ್ತಮುತ್ತಲಿನ ದಾಂಧಲೆ ಮಾಡಿದ ಪ್ರಕರಣದ ಐದು ಪ್ರಮುಖ ಆರೋಪಿಗಳು. ಈ ‘ಮಿಷನ್’ಗೆ ಮುಂಚಿತವಾಗಿ ಅವರೆಲ್ಲರೂ ತಮ್ಮ ರಾಜ್ಯಗಳಿಂದ ಡಿಸೆಂಬರ್ 10 ರಂದು ದೆಹಲಿಯನ್ನು ತಲುಪಿದ್ದದ್ದರು. ವಿಶಾಲ್ ಶರ್ಮಾ ಅವರಿಗೆ ತಮ್ಮ ಗುರುಗ್ರಾಮ್ ಮನೆಯಲ್ಲಿ ಆಶ್ರಯ ನೀಡಿದ್ದರು. ಮನೋರಂಜನ್, ಸಾಗರ್, ನೀಲಂ ಮತ್ತು ಅಮೋಲ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಯುಎಪಿಎ ಆರೋಪವನ್ನು ಹೊರಿಸಲಾಗಿದೆ.

ಒಂದೂವರೆ ವರ್ಷದ ಹಿಂದೆ ಲಲಿತ್ ಝಾ, ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರು ಮೈಸೂರಿನಲ್ಲಿ ಪರಸ್ಪರ ಭೇಟಿಯಾದರು ಮತ್ತು ಸಂಸತ್‌ ಮೇಲೆ ದಾಳಿ ನಡೆಸುವ ಸಂಬಂಧ ಯೋಜನೆಯನ್ನು ಆರಂಭಸಿದರು. ಬಳಿಕ ಈ ನೀಲಂ ಹಾಗೂ ಅಮೋಲ್ ಅವರು ಕೂಡ ಈ ಯೋಜನೆಯ ಭಾಗವಾದರು.

ಇಲ್ಲಿಯವರೆಗೆ, ಯಾವುದೇ ಭಯೋತ್ಪಾದನಾ ಸಂಘಟನೆಗಳ ಜತೆಗೆ ನಂಟು ಸಾಬೀತಾಗಿಲ್ಲ. ಮನೋರಂಜನ್ ಅವರಿಗೆ ಯಾವುದೇ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇಲ್ಲ. ಹಾಗಿದ್ದೂ, ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಅವರೊಬ್ಬರು ಕ್ರಾಂತಿಕಾರಿಯ ರೀತಿಯ ವ್ಯಕ್ತಿ ಎಂಬುನ್ನು ಬಿಂಬಿಸುತ್ತದೆ ಎಂದು ಮೈಸೂರು ಪೊಲೀಸರು ತಿಳಿಸಿದ್ದಾರೆ. ಇನ್ನು, ಸೇನಾ ನೇಮಕಾತಿಗಾಗಿ ದಿಲ್ಲಿ ಹೋಗುತ್ತಿರುವುದಾಗಿ ಅಮೋಲ್ ತಮ್ಮ ಮನೆಯಲ್ಲಿ ತಿಳಿಸಿದ್ದರು. ಮಹಾರಾಷ್ಟ್ರದ ಕಲ್ಯಾಣದಲ್ಲಿ 1200 ಕೊಟ್ಟು ಕಲರ್ ಸ್ಮೋಕ್ ಕ್ಯಾನಿಸ್ಟರ್‌ಗಳನ್ನು ಅಮೋಲ್ ಖರೀದಿ ಮಾಡಿದ್ದಾನೆ.

ಈ ಸುದ್ದಿಯನ್ನೂ ಓದಿ: Security Breach in Lok Sabha: ಭದ್ರತಾ ವೈಫಲ್ಯ; We stand with Prathap simha ಅಭಿಯಾನ ಶುರು

Exit mobile version