Site icon Vistara News

Mughal History: ಮೊಘಲ್ ಇತಿಹಾಸ ಕೈ ಬಿಟ್ಟ ಕೇಂದ್ರ ಸರ್ಕಾರ; ಆತಂಕ ವ್ಯಕ್ತಪಡಿಸಿದ ಇತಿಹಾಸಕಾರರು, ಇದು ವಾಟ್ಸಾಪ್ ಹಿಸ್ಟರಿ!

Ramayana, Mahabharata likely to be part of NCERT SS Textbook Says Committee

ನವದೆಹಲಿ: ಸಿಬಿಎಸ್ಇ (CBSE) ವಿದ್ಯಾರ್ಥಿಗಳಿಗೆ ಕಲಿಸಲಾಗುವ ಇತಿಹಾಸದ ಪುಸ್ತಕಗಳಿಂದ ಕೆಲವು ನಿರ್ದಿಷ್ಟ ಪಾಠಗಳನ್ನು ತೆಗೆದು ಹಾಕಿದ್ದಕ್ಕೆ ಕೆಲವು ಇತಿಹಾಸಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಇತಿಹಾಸಕಾರರು, ಸರ್ಕಾರದ ಈ ಕ್ರಮ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. ಇತಿಹಾಸದ ಅಧ್ಯಯನವನ್ನು ಏಕರೂಪಗೊಳಿಸಲಾಗುತ್ತದೆ. ಹುಸಿ ಇತಿಹಾಸಗಳಿಗೆ, ವಿಶೇಷವಾಗಿ ಕೋಮು ಮತ್ತು ಜಾತಿಯ ವೈವಿಧ್ಯತೆಯ ಹಿಡಿತವನ್ನು ಹಿಡಿದಿಡಲು ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಇಂಥ ಸುಳ್ಳು ಇತಿಹಾಸ
ವ್ಯಾಪಕವಾಗಿ ವಾಟ್ಸಾಪ್ ಮತ್ತು ಇತರ ಮೂಲಕ ಹರಿದಾಡುತ್ತಿವೆ. ಅದೇ ಇತಿಹಾಸಗಳು ಪಠ್ಯವನ್ನು ಸೇರ್ಪಡೆಯಾಗುತ್ತಿವೆ. ಶಿಕ್ಷಣದಲ್ಲಿ ರಾಜಕೀಯವನ್ನು ಸೇರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ(Mughal History).

ಕೋವಿಡ್ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ ಪರಿಣಾಮವಾಗಿ ಪಠ್ಯವನ್ನು ಹಗುರುಗೊಳಿಸಬೇಕೆಂಬ ವಾದವಿದೆ. ಈ ಹಿನ್ನೆಲೆಯಲ್ಲಿ ಎನ್‌ಸಿಇಆರ್‌ಟಿ, ಮೋಘಲ್ ಕೋರ್ಟ್ಸ್, ಗುಜರಾತ್‌ನಲ್ಲಿನ 2002ರ ಕೋಮು ಹಿಂಸಾಚಾರ, ಎಮರ್ಜೆನ್ಸಿ ಸೇರಿದಂತೆ ಹಲವು ಪಠ್ಯಗಳನ್ನು ಸಾಮಾಜಿಕ ವಿಜ್ಞಾನ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪುಸ್ತಕಗಳಿಂದ ಕೈ ಬಿಡಲಾಗಿದೆ. 6ನೇ ತರಗತಿಯಿಂದ 12ನೇ ತರಗತಿಯವರೆಗನ ಪಠ್ಯವನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Mughal History: ಉತ್ತರ ಪ್ರದೇಶದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಇನ್ನು ಮೊಘಲರ ಇತಿಹಾಸ ಇರಲ್ಲ

ಮೊಘಲರ ಕುರಿತು ಇತಿಹಾಸದ (Mughal History) ಅಧ್ಯಯನವನ್ನು ಉತ್ತರ ಪ್ರದೇಶ ಸರ್ಕಾರ ಮೊಟಕುಗೊಳಿಸಿದೆ. ಉತ್ತರ ಪ್ರದೇಶದ ಮಂಡಳಿ ಹಾಗೂ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 12ನೇ ತರಗತಿ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಮೊಘಲರ ನ್ಯಾಯಾಲಯಗಳ ಕುರಿತು ಅಧ್ಯಯನ ಮಾಡುವುದಿಲ್ಲ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (NCERT) ಮೊಘಲ್‌ ಕೋರ್ಟ್‌ಗಳ ಕುರಿತ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಟ್ಟಿರುವ ಕಾರಣ ಅವುಗಳ ಕುರಿತು ವಿದ್ಯಾರ್ಥಿಗಳು ಅಧ್ಯಯನ ಮಾಡುವುದಿಲ್ಲ.

“12ನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿರುವ “ಥೀಮ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ-ಪಾರ್ಟ್‌ 2″ ಪುಸ್ತಕದಿಂದ ಕಿಂಗ್ಸ್‌ ಆ್ಯಂಡ್‌; ದಿ ಮೊಘಲ್‌ ಕೋರ್ಟ್ಸ್‌ (ಸಿ 16 ಹಾಗೂ 17ನೇ ಶತಮಾನಗಳು) ಎಂಬ ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ನೂತನ ಪಠ್ಯಕ್ರಮದಂತೆ ವಿದ್ಯಾರ್ಥಿಗಳು ಮೊಘಲರ ನ್ಯಾಯಾಲಯಗಳ ಕುರಿತು 2023-24ನೇ ಸಾಲಿನಿಂದ ಅಧ್ಯಯನ ಮಾಡುವುದಿಲ್ಲ” ಎಂದು ರಾಜ್ಯ ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

12ನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಮೊಘಲ್‌ ನ್ಯಾಯಾಲಯಗಳ ಅಧ್ಯಾಯದ ಜತೆಗೆ ಅಕ್ಬರ್‌ನಾಮಾ (ಅಕ್ಬರ್‌ ಕುರಿತ ಕಾಲಾನುಕ್ರಮದ ವರದಿ), ಬಾದ್‌ಶಾ ನಾಮಾ (ಮೊಘಲ್‌ ಅರಸ ಷಹಜಹಾನ್‌ ಕಾಲಾನುಕ್ರಮಣಿಕೆ), ಮೊಘಲ್‌ ಅರಸರು, ಅವರ ಸಾಮ್ರಾಜ್ಯ, ಹಸ್ತಪ್ರತಿಗಳು, ಪ್ರಮುಖ ಪ್ರದೇಶಗಳು, ರಾಜಧಾನಿಗಳು, ರಾಯಲ್‌ ಕುಟುಂಬ, ಮೊಘಲ್‌ ಇತಿಹಾಸ, ಮೊಘಲ್‌ ಅರಸರ ಗಡಿಗಳು ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: CBSE Warning: ಏಪ್ರಿಲ್‌ 1ಕ್ಕೂ ಮೊದಲು ಶಾಲೆಗಳ ಆರಂಭ ಬೇಡ, ಸಿಬಿಎಸ್‌ಇ ಖಡಕ್‌ ಎಚ್ಚರಿಕೆ

ಹಾಗೆಯೇ, 11ನೇ ತರಗತಿ ಪಠ್ಯಪುಸ್ತಕದಲ್ಲಿರುವ ಸೆಂಟ್ರಲ್‌ ಇಸ್ಲಾಮಿಕ್‌ ಲ್ಯಾಂಡ್ಸ್‌, ಕನ್‌ಫ್ರಂಟೇಷನ್‌ ಆಫ್‌ ಕಲ್ಚರ್ಸ್‌ ಹಾಗೂ ದಿ ಇಂಡಸ್ಟ್ರಿಯಲ್‌ ರೆವೊಲ್ಯೂಷನ್‌ ಎಂಬ ಅಧ್ಯಾಯಗಳನ್ನೂ ಕೈಬಿಡಲಾಗಿದೆ. ಆದಾಗ್ಯೂ, ಜಾಗತಿಕ ರಾಜಕೀಯ ಕ್ಷೇತ್ರದಲ್ಲಿ ಅಮೆರಿಕದ ಪ್ರಾಬಲ್ಯ, ಶೀತಲ ಸಮರದ ಕಾಲಘಟ್ಟ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಪಾತ್ರ ಸೇರಿ ಹಲವು ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಅದರಂತೆ, 10ನೇ ತರಗತಿ ಪಠ್ಯದಿಂದ ಪ್ರಜಾಪ್ರಭುತ್ವ, ವೈವಿಧ್ಯತೆ, ಪ್ರಮುಖ ಹೋರಾಟಗಳು, ಸ್ವಾತಂತ್ರ್ಯ ಚಳವಳಿ, ಪ್ರಜಾಪ್ರಭುತ್ವಕ್ಕೆ ಸವಾಲುಗಳು ಸೇರಿ ಹಲವು ವಿಷಯಗಳನ್ನು ಕೈಬಿಡಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಎಡಪಂಥೀಯ ಚಿಂತನೆ ಇರುವವರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲೀಗ ಮೊಘಲರ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟಿರುವ ಕುರಿತು ಪರ-ವಿರೋಧ ಚರ್ಚೆಗಳೂ ಆರಂಭವಾಗಿವೆ.

Exit mobile version