Site icon Vistara News

Sharad Pawar: ಗೌತಮ್ ಅದಾನಿ ಕಠಿಣ ಪರಿಶ್ರಮಿ ಎಂದು ಹಾಡಿ ಹೊಗಳಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್!

Sharad Pawar

ನವದೆಹಲಿ: ಗೌತಮ್ ಅದಾನಿ (Gautam Adani) ನೇತೃತ್ವದ ಕಂಪನಿಯ ಷೇರು ವ್ಯವಹಾರ ಕುರಿತು ಜೆಪಿಸಿ ತನಿಖೆಗಿಂತ ಸುಪ್ರೀಂ ಕೋರ್ಟ್ ಕಣ್ಗಾವಲಿನ ತನಿಖೆ ಸೂಕ್ತ ಎಂದು ಹೇಳಿ ಭಿನ್ನರಾಗ ಹಾಡಿದ್ದ ಪ್ರತಿಪಕ್ಷಗಳ ಪ್ರಮುಖ ನಾಯಕರಾಗಿರುವ ಶರದ್ ಪವಾರ್ (Sharad Pawar) ಅವರು ಈ ಹಿಂದೆ ಅದಾನಿ ಅವರನ್ನು ಹಾಡಿ ಹೊಗಳಿದ್ದರು. 2015ರಲ್ಲಿ ಪ್ರಕಟವಾದ ಲೋಕ್ ಮಝೇ ಸಾಂಗತಿ ಆತ್ಮ ಚರಿತ್ರೆಯಲ್ಲಿ ಪವಾರ್ ಅವರು, ಗೌತಮ್ ಅದಾನಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಬರೆದಿದ್ದಾರೆ.

ತಮ್ಮ ಆತ್ಮಚರಿತ್ರೆಯಲ್ಲಿ ಶರದ್ ಪವಾರ್ ಅವರು, ಅದಾನಿಯನ್ನು ಕಠಿಣ ಪರಿಶ್ರಮಿ, ಸರಳ ಜೀವಿ, ಅಹಂಕಾರವಿಲ್ಲದ ವ್ಯಕ್ತಿ. ಮೂಲಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯ ಮಹತ್ವಾಕಾಂಕ್ಷೆಯೊಂದಿಗೆ ಮುನ್ನುಗುತ್ತಿದ್ದಾರೆ. ತಮ್ಮ ಒತ್ತಾಯದ ಮೇರೆಗೆ ಅದಾನಿ ಅವರು ಥರ್ಮಲ್ ಪವರ್ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ಪವಾರ್ ಬರೆದುಕೊಂಡಿದ್ದಾರೆ. ವಜ್ರ ಉದ್ಯಮದಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುವ ಮೊದಲು, ಅದಾನಿ ಮುಂಬೈನಲ್ಲಿ ಸೇಲ್ಸ್‌ಮ್ಯಾನ್ ಆಗಿ ತಮ್ಮ ಕಾರ್ಪೊರೇಟ್ ಸಾಮ್ರಾಜ್ಯವನ್ನು ಹೇಗೆ ನಿರ್ಮಿಸಿದರು ಎಂಬುದನ್ನು ಪವಾರ್ ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ವಜ್ರ ಉದ್ಯಮದಲ್ಲಿ ಚೆನ್ನಾಗಿ ಗಳಿಸುತ್ತಿದ್ದರು. ಆದರೆ, ಗೌತಮ್‌ ಅದಾನಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಮೂಲಭೂತ ಸೌಕರ್ಯವನ್ನು ಪ್ರವೇಶಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಗುಜರಾತ್‌ನ ಸಿಎಂ ಚಿಮನ್‌ಭಾಯ್ ಪಟೇಲ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಹಾಗಾಗಿ, ಮುಂಧ್ರಾ ಪೋರ್ಟ್ ಅಭಿವೃದ್ಧಿಯ ಪ್ರಸ್ತಾಪವನ್ನು ಮುಂದಿಟ್ಟರು ಎಂದು ಪವಾರ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Gautam Adani | ನೀವು ಪ್ರಧಾನಿ ಮೋದಿಯವರ ಪರಮಾಪ್ತರೇ? ಎಂಬ ಪ್ರಶ್ನೆಗೆ ಉದ್ಯಮಿ ಗೌತಮ್ ಅದಾನಿ ನೀಡಿದ ಉತ್ತರ..

ನಂತರ ಅದಾನಿ ಅವರು ಕಲ್ಲಿದ್ದಲು ಕ್ಷೇತ್ರಕ್ಕೆ ಕಾಲಿಟ್ಟರು ಮತ್ತು ತಮ್ಮ ಸಲಹೆಯ ಮೇರೆಗೆ ಅದಾನಿ ಶಾಖೋತ್ಪನ್ನ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ಪವಾರ್ ಬರೆದಿದ್ದಾರೆ. ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರ ತಂದೆಯ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಅದಾನಿ ಅವರಿಗೆ ಈ ಸಲಹೆಯನ್ನು ನೀಡಿದ್ದರು ಎಂದು ಆಗಿನ ಕೇಂದ್ರ ಕೃಷಿ ಸಚಿವರಾಗಿದ್ದ ಪವಾರ್ ಹೇಳಿಕೊಂಡಿದ್ದಾರೆ.

Exit mobile version