Site icon Vistara News

ಲೋಕಸಭೆ ಚುನಾವಣೆ ಗೆಲುವಿಗಾಗಿ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್‌ ಕೊಟ್ಟ ಮೋದಿ!

Narendra Modi

PM Narendra Modi contributes Rs 2,000 to BJP; urges donations for nation-building

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಣಕಹಳೆ ಮೊಳಗಿಸಿದ್ದಾರೆ. ದೆಹಲಿಯಲ್ಲಿ ಎರಡು ದಿನಗಳಿಂದ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದ (BJP National Council Meeting)” ಸಮಾರೋಪ ಭಾಷಣ ಮಾಡಿದ ಮೋದಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್‌ ನೀಡಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ.

“ಬಿಜೆಪಿಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮುಂದಿನ 100 ದಿನಗಳು ನಿರ್ಣಾಯಕವಾಗಿವೆ. ಮುಂದಿನ 100 ದಿನಗಳವರೆಗೆ ಮುಖಂಡರು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಬೇಕು. ಪ್ರತಿಯೊಬ್ಬರನ್ನೂ ಭೇಟಿ ಮಾಡಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಸಮಗ್ರ ಮಾಹಿತಿ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400, ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಸಾಕಾರಗೊಳಿಸಬೇಕು” ಎಂದು ಸೂಚನೆ ನೀಡಿದರು.

“ಎಲ್ಲರೂ ಜನರ ಬಳಿ ಹೋಗಿ, ನಿಮಗೆ ನರೇಂದ್ರ ಮೋದಿ ಅವರು ನಮಸ್ಕಾರ ಮಾಡಿದ್ದಾರೆ ಎಂಬುದಾಗಿ ತಿಳಿಸಿ. ಕೇಂದ್ರ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ, ಅವರಿಗೆ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ. ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು, ಮುಂದಿನ 5 ವರ್ಷದಲ್ಲಿ ಕೇಂದ್ರ ಸರ್ಕಾರದ ದೂರದೃಷ್ಟಿಯ ಬಗ್ಗೆ ವಿವರವಾಗಿ ತಿಳಿಸಿ” ಎಂದು ಹೇಳಿದರು.

“ಕಾಂಗ್ರೆಸ್‌ನ ಇತಿಹಾಸವನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಬೇಕು. ಕಾಂಗ್ರೆಸ್‌ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಸ್ಥಿರತೆಯ ಜನನಿಯಾಗಿದೆ. ನಮ್ಮೆದುರು ಕಾಂಗ್ರೆಸ್‌ನ ಇತಿಹಾಸವೇ ಇದೆ. ಇದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು. ಆ ಮೂಲಕ ಕಾಂಗ್ರೆಸ್‌ನಿಂದ ದೇಶ ಹಾಗೂ ಜನರನ್ನು ಮುಕ್ತಗೊಳಿಸಬೇಕು. ಇದರೊಂದಿಗೆ ದೇಶದ ಮತ್ತಷ್ಟು ಏಳಿಗೆಗೆ ನಾಂದಿ ಹಾಡಬೇಕು” ಎಂದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಇದನ್ನೂ ಓದಿ: Amit Shah: ರಾಮಮಂದಿರ ಆಹ್ವಾನವನ್ನು ಕಾಂಗ್ರೆಸ್‌ ತಿರಸ್ಕರಿಸಿದ್ದೇಕೆ? ಕಾರಣ ಕೊಟ್ಟ ಅಮಿತ್‌ ಶಾ

ಭಾರತೀಯ ಸೇನೆಗೆ ಕಾಂಗ್ರೆಸ್‌ ಅಪಮಾನ

“ಕಾಂಗ್ರೆಸ್‌ ಸರ್ಕಾರವಿದ್ದಾಗ ರಫೇಲ್‌ ಯುದ್ಧವಿಮಾನದ ಒಪ್ಪಂದ ನಡೆಯಲಿಲ್ಲ. ಆದರೆ, ನಮ್ಮ ಸರ್ಕಾರವು ಫ್ರಾನ್ಸ್‌ ಜತೆಗೆ ಯಶಸ್ವಿಯಾಗಿ ಒಪ್ಪಂದ ಮಾಡಿಕೊಂಡು ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸುವ ಮೂಲಕ ವಾಯುಪಡೆಯ ಬಲವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಭಾರತೀಯ ವಾಯುಪಡೆಯು ವಾಯುದಾಳಿ ನಡೆಸಿದಾಗ ಯೋಧರ ಸಾಮರ್ಥ್ಯವನ್ನೇ ಕಾಂಗ್ರೆಸ್‌ ಪ್ರಶ್ನಿಸಿತು. ಇದರೊಂದಿಗೆ ದೇಶದ ಸೇನೆಗೆ ಕಾಂಗ್ರೆಸ್‌ ಅಪಮಾನ ಮಾಡಿತು” ಎಂದು ನರೇಂದ್ರ ಮೋದಿ ಹೇಳಿದರು.

“ನಾನೇನೂ ಅಧಿಕಾರ ಅನುಭವಿಸಲು ಮೂರನೇ ಅವಧಿಯನ್ನು ಕೇಳುತ್ತಿಲ್ಲ. ನನ್ನ ಮನೆಯನ್ನು ನೋಡಿದರೆ, ಎಲ್ಲ ಬಡವರಿಗೂ ಮನೆಗಳನ್ನು ನಿರ್ಮಿಸಲು ಆಗಿಲ್ಲ. ನಮ್ಮ ಬಡ ಮಕ್ಕಳ ಭವಿಷ್ಯಕ್ಕಾಗಿ ನಾನು ಜೀವಿಸುತ್ತಿದ್ದೇನೆ. ಕೋಟ್ಯಂತರ ಬಡವರು, ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಮೂರನೇ ಅವಧಿ ನೀಡಿ ಎಂಬುದಾಗಿ ಕೇಳುತ್ತಿದ್ದೇನೆ” ಎಂದರು.

ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಸುಮಾರು 11,500ಕ್ಕೂ ಅಧಿಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ಲೋಕಸಭೆ ಚುನಾವಣೆ ಗೆಲುವಿಗಾಗಿ ಹಲವು ನಿರ್ಣಯಗಳನ್ನು ಕೂಡ ಕೈಗೊಳ್ಳಲಾಯಿತು. ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ (ಮಗದೊಮ್ಮೆ ಮೋದಿ ಸರ್ಕಾರ) ಎಂಬುದನ್ನು ಚುನಾವಣೆಯ ಘೋಷಣೆಯನ್ನಾಗಿ ಅಳವಡಿಸಿಕೊಳ್ಳಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version