Site icon Vistara News

7 ಪ್ರಯಾಣಿಕರು, ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್‌ ಅರಬ್ಬಿ ಸಮುದ್ರದಲ್ಲಿ ತುರ್ತು ʻಜಲಸ್ಪರ್ಶʼ

ಮುಂಬಯಿ: ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್‌ ಒಂದು ಮಂಗಳವಾರ ತಾಂತ್ರಿಕ ಸಮಸ್ಯೆಗೆ ಒಳಗಾಗಿ ಅರಬ್ಬಿ ಸಮುದ್ರದಲ್ಲಿ ತುರ್ತು ʻಜಲಸ್ಪರ್ಶʼ ಮಾಡಿದೆ. ಮುಂಬಯಿ ಸಮೀಪದ ಒಎನ್‌ಜಿಸಿಯ ಸಾಗರ್‌ ಕಿರಣ್‌ ರಿಗ್‌ನ ಬಳಿ ಈ ವಿದ್ಯಮಾನ ನಡೆದಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿ.(ಒಎನ್‌ಜಿಸಿ) ತಿಳಿಸಿದೆ.

ಈ ಹೆಲಿಕಾಪ್ಟರ್‌ ಒಎನ್‌ಜಿಸಿಗೆ ಸೇರಿದ್ದಾಗಿದೆ. ಅದರಲ್ಲಿ ಒಎನ್‌ಜಿಸಿಯ ಆರು ಸಿಬ್ಬಂದಿ ಹಾಗೂ ಗುತ್ತಿಗೆ ಸಂಸ್ಥೆಯೊಂದರ ಸಿಬ್ಬಂದಿ ಇದ್ದರು. ಒಎನ್‌ಜಿಸಿಯ ತೈಲ ಸಂಸ್ಕರಣಾ ಸ್ಥಾವರಗಳು ತೀರದಿಂದ ತುಂಬಾ ದೂರದಲ್ಲಿರುತ್ತವೆ. ಅಲ್ಲಿಗೆ ಹೆಲಿಕಾಪ್ಟರ್‌ ಮೂಲಕ ಸಾಗುವುದು ಸಾಮಾನ್ಯ ದಿನಚರಿ ಆಗಿರುತ್ತದೆ. ಇದರಲ್ಲಿ ಸಿಬ್ಬಂದಿಯನ್ನು ಮತ್ತು ಅಗತ್ಯ ಸಲಕರಣೆಗಳನ್ನು ಸಾಗಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ.
ಮಂಗಳವಾರವೂ ಅದೇ ರೀತಿ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಈ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಈ ರೀತಿ ಸಾಗರದ ಭಾಗದಲ್ಲಿ ಕಾರ್ಯಾಚರಿಸುವ ಹೆಲಿಕಾಪ್ಟರ್‌ಗಳಿಗೆ ತುರ್ತು ಸಂದರ್ಭಕ್ಕೆ ಬೇಕು ಎಂಬ ಕಾರಣಕ್ಕೆ ಫ್ಲೋಟರ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಹೆಲಿಕಾಪ್ಟರ್‌ಗೂ ಅಂಥಹುದೇ ಫ್ಲೋಟರ್‌ಗಳಿದ್ದು ಅದನ್ನು ಬಳಸಿಕೊಂಡು ಸಮುದ್ರದಲ್ಲಿ ಇಳಿಸಲಾಗಿದೆ. ಆದರೆ, ಇದು ತಾತ್ಕಾಲಿಕ ಮಾತ್ರ. ತುಂಬ ಹೊತ್ತು ಫ್ಲೋಟರ್‌ಗಳ ಮೇಲೆ ಹೆಲಿಕಾಪ್ಟರ್‌ಗಳನ್ನು ನಿಲ್ಲಿಸಲು ಆಗುವುದಿಲ್ಲ.

ಹೀಗಾಗಿ ತಕ್ಷಣವೇ ತಟ ರಕ್ಷಣಾ ಪಡೆಯನ್ನು ಜಾಗೃತಗೊಳಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

ಒಎನ್‌ಜಿಸಿಯು ಸಮುದ್ರ ಮಧ್ಯ ಭಾಗದಲ್ಲಿ ಹಲವು ರಿಗ್‌ ಮತ್ತು ಸ್ಥಾವರಗಳನ್ನು ಹೊಂದಿದೆ. ಇಲ್ಲಿ ಕೆಲವು ಸ್ಥಾವರಗಳಲ್ಲಿ ಕಚ್ಚಾ ತೈಲ ಬಳಸಿ ತೈಲ ಉತ್ಪಾದನೆ ನಡೆಯುತ್ತಿದ್ದರೆ, ಉಳಿದವುಗಳಲ್ಲಿ ತೈಲ ಸಂಗ್ರಹವಿರುತ್ತದೆ.

ಇದನ್ನೂ ಓದಿ| ಬೆಂಕಿ ಕಾಣಿಸಿಕೊಂಡರೂ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ದಿಟ್ಟ women pilot

Exit mobile version