Site icon Vistara News

Operation Kaveri: ಸುಡಾನ್​​ನಿಂದ 1400 ಭಾರತೀಯರ ರಕ್ಷಣೆ; ಕೊಚ್ಚಿ ತಲುಪಿದ 186 ಜನ

Operation Kaveri 1400 Indians evacuates from Sudan Says IAF

#image_title

ಯುದ್ಧನೆಲವಾದ ಸುಡಾನ್​​ (Sudan Conflict)ನಿಂದ ಭಾರತೀಯರನ್ನು ರಕ್ಷಣೆ ಮಾಡಿ ವಾಪಸ್​ ಕರೆತರುತ್ತಿರುವ ಕಾರ್ಯಾಚರಣೆ ‘ಆಪರೇಶನ್​ ಕಾವೇರಿ (Operation Kaveri)’ ಚುರುಕಾಗಿ ನಡೆಯುತ್ತಿದೆ. 3000ಕ್ಕೂ ಹೆಚ್ಚು ಭಾರತೀಯರು ಸುಡಾನ್​​ನಲ್ಲಿ ಇದ್ದಾರೆ. ಅವರನ್ನೆಲ್ಲ ಹಂತಹಂತವಾಗಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ಭಾರತಕ್ಕೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡಿದೆ. ಪೋರ್ಟ್​ ಸುಡಾನ್​​ನಿಂದ ಜೆಡ್ಡಾಕ್ಕೆ ಭಾರತೀಯರನ್ನು ಕರೆತರುವ ಸಲುವಾಗಿ ನೌಕಾಪಡೆಯ ಹಡಗುಗಳನ್ನು, ವಾಯುಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ. ಜೆಡ್ಡಾಕ್ಕೆ ಬಂದ ಭಾರತೀಯರನ್ನು ಐಎಎಫ್​ ವಿಮಾನಗಳ ಮೂಲಕ ಭಾರತಕ್ಕ ಕರೆತರಲಾಗುತ್ತಿದೆ. ಇದುವರೆಗೆ ಸುಡಾನ್​ನಿಂದ 1400 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ.

ಇಂದು ಸುಡಾನ್​ನಿಂದ ಐಎಎಫ್​​ನ ಸಿ-130 ಜೆ ಸರಣಿಯ ಎರಡು ವಿಮಾನಗಳಲ್ಲಿ ಒಟ್ಟು 260 ಪ್ರಯಾಣಿಕರನ್ನು ಜೆಡ್ಡಾಕ್ಕೆ ಕರೆತರಲಾಗಿದೆ. ಅದರಲ್ಲಿ ಹಲವರು ವೃದ್ಧರಿದ್ದಾರೆ. ಒಬ್ಬರು 90 ವರ್ಷ ವಯಸ್ಸಿನವರು ಇದ್ದರೆ, ಇನ್ನೊಬ್ಬರಿಗೆ 102 ವರ್ಷವಾಗಿದೆ ಎಂದು ಇಂಡಿಯನ್ ಏರ್​ಪೋರ್ಸ್​ ತಿಳಿಸಿದೆ. ಇನ್ನು ಜೆಡ್ಡಾಕ್ಕೆ ಬಂದು ತಲುಪಿದ್ದ ಭಾರತೀಯರಲ್ಲಿ 186ಜನರನ್ನು ಹೊತ್ತ ವಿಮಾನವೊಂದು ಇಂದು ಬೆಳಗ್ಗೆ ಕೊಚ್ಚಿ ಏರ್​ಪೋರ್ಟ್​​ನಲ್ಲಿ ಲ್ಯಾಂಡ್ ಆಗಿದೆ. ಇದು ಭಾನುವಾರ ಜೆಡ್ಡಾದಿಂದ ಹೊರಟಿತ್ತು. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂದಮ್​ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: Operation Kaveri: ಸುಡಾನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ದಾಂಡೇಲಿ ಯುವಕರು

ಸುಡಾನ್​​ನಲ್ಲಿ 3000ದಷ್ಟು ಭಾರತೀಯರು ಇದ್ದಾರೆಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲಿನ ಖಾರ್ಟೌಮ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳುವ ಪ್ರಕಾರ ಈ 3000 ಮಂದಿಯಲ್ಲಿ 2800 ಮಂದಿ ಈತ್ತೀಚಿನ ವರ್ಷಗಳಲ್ಲಿ ಹೋಗಿ ಅಲ್ಲಿ ನೆಲೆ ನಿಂತವರಾದರೆ, ಸುಮಾರು 1200 ಭಾರತೀಯರು ಕಳೆದ 150ವರ್ಷಗಳಿಂದ ಸುಡಾನ್​​ನಲ್ಲಿ ಇದ್ದವರು. ಹೀಗೆ ಭಾರತಕ್ಕೆ ಬರುವವರನ್ನು ಕರೆದುಕೊಂಡು ಬರಲು ಭಾರತೀಯ ವಾಯುಪಡೆಯ ವಿಮಾನಗಳೊಂದಿಗೆ ಇಂಡಿಗೊದ ಎರಡು ವಿಮಾನಗಳೂ ಕೂಡ ಕಾರ್ಯಾಚರಣೆ ನಡೆಸುತ್ತಿವೆ. ಆಪರೇಶನ್​ ಕಾವೇರಿಯ ಭಾಗವಾಗಿ ಜೆಡ್ಡಾ-ದೆಹಲಿ ಮತ್ತು ಜೆಡ್ಡಾ-ಬೆಂಗಳೂರು ಮಾರ್ಗದಲ್ಲಿ ವಿಮಾನಗಳು ಸಂಚರಿಸುತ್ತಿವೆ. ಸುಡಾನ್​ನಲ್ಲಂತೂ ಯುದ್ಧ ತೀವ್ರಗೊಂಡಿದೆ. ಸೇನಾ ಪಡೆಗಳು ಮತ್ತು ಅರೆಸೇನಾ ಪಡೆಗಳ ಕಾದಾಟಕ್ಕೆ 528 ಮಂದಿ ಮೃತಪಟ್ಟಿದ್ದಾರೆ.

Exit mobile version