Site icon Vistara News

Parliament Session: ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ಅಪರಾಧ ಸಂಹಿತಾ ವಿಧೇಯಕಗಳಿಗೆ ಲೋಕಸಭೆ ಒಪ್ಪಿಗೆ

Parliament Session, Lok Sabha approves Criminal Code Bills in the absence of opposition

ನವದೆಹಲಿ: ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು (colonial-era criminal laws) ಬದಲಿಸುವ ಮೂರು ನಿರ್ಣಾಯಕ ವಿಧೇಯಕಗಳನ್ನು ಬುಧವಾರ ಲೋಕಸಭೆಯಲ್ಲಿ, (Lok Sabha) ಅಕ್ಷರಶಃ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ (opposition MPs) ಅನುಮೋದನೆ ಪಡೆದುಕೊಳ್ಳಲಾಯಿತು. ಭಾರತೀಯ ನ್ಯಾಯ (ಎರಡನೇ) ಸಂಹಿತಾ- 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ- 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ವಿಧೇಯಕ- 2023 ವಿಧೇಯಕಗಳು, 1860ರ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (1973) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ , ಇಂಡಿಯನ್ ಎವಿಡೆನ್ಸ್ ಆಕ್ಟ್ -1872 ಕಾನೂನುಗಳನ್ನು ಬದಲಿಸಲಿವೆ.

ಸಂಸತ್ ಭದ್ರತಾ ಲೋಪ ಚರ್ಚೆಯ ಹಿನ್ನೆಲೆಯಲ್ಲಿ 143 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಹಾಗಾಗಿ, ಯಾವುದೇ ಚರ್ಚೆ ಇಲ್ಲದೇ ಲೋಕಸಭೆಯು ಮಹತ್ವದ ಮೂರು ವಿಧೇಯಕಗಳಿಗೆ ಒಪ್ಪಿಗೆ ನೀಡಿತು. ಬುಧವಾರವೂ ಇಬ್ಬರು ಸಂಸದರನ್ನು ಅಮಾನತು ಮಾಡುವ ಮೂಲಕ ಲೋಕಸಭೆಯಿಂದ ಸಸ್ಪೆಂಡ್ ಆದ ಸಂಸದರ ಸಂಖ್ಯೆಯು 97ಕ್ಕೆ ಏರಿಕೆಯಾಯಿತು. ರಾಜ್ಯಸಭೆಯ ಸದಸ್ಯರೂ ಸೇರಿ ಒಟ್ಟಾರೆ ಸಸ್ಪೆಂಡ್ ಆದವರ ಸಂಖ್ಯೆ 143 ದಾಟಿದೆ.

ತೃಣಮೂಲ ಸಂಸದರೊಬ್ಬರು ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಮಿಮಿಕ್ರಿ ಮಾಡಿದ ನಂತರ ಈ ವಿಷಯವು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ತಿಕ್ಕಾಟವು ಹೆಚ್ಚಾಗಲು ಕಾರಣವಾಗಿದೆ.

ಈಗಿನ ದಿನಗಳಿಗೆ ಸಂಪೂರ್ಣವಾಗಿ ಸೂಕ್ತವಲ್ಲದ ವಸಾಹತುಶಾಹಿ ಯುಗದ ನಿಯಮಗಳನ್ನು ಹೊಸ ಕಾನೂನುಗಳು ಬದಲಿಸುತ್ತವೆ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ವಿಧೇಯಕಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಹೆಚಚು ಒತ್ತು ನೀಡುತ್ತವೆ ಎಂದು ತಿಳಿಸಿದರು. ಈ ಹೊಸ ಕ್ರಿಮಿನಲ್ ಕಾನೂನಗಳನ್ನು ಸಂಪೂರ್ಣವಾಗಿ ಓದಿದ್ದೇನೆ ಮತ್ತು ಈ ಕಾನೂನುಗಳು ನಮ್ಮ ಸಂವಿಧಾನದ ಮನೋಭಾವಕ್ಕೆ ಅನುಗಣವಾಗಿವೆ ಎಂದು ಶಾ ಹೇಳಿದರು.

ಕೆಲವು ಬದಲಾವಣೆಗಳನ್ನು ಮಾಡಬೇಕಿದ್ದರಿಂದ ಮುಂಗಾರು ಅಧಿವೇಶನದ ನಂತರ ವಿಧೇಯಕಗಳನ್ನು ಸರ್ಕಾರವು ವಾಪಸ್ ಪಡೆದುಕೊಂಡಿತ್ತು. ಬಳಿಕ ಪರಿಷ್ಕೃತ ವಿಧೇಯಕಗಳನ್ನು ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಯಿತು. ಹೊಸ ವಿಧೇಯಕಗಳ್ನು ಸ್ಥಾಯಿ ಸಮಿತಿ ಪರಿಶೀಲಿಸಿದ್ದು, ಅಧಿಕೃತ ತಿದ್ದುಪಡಿಗಳನ್ನು ತರುವ ಬದಲು ಮತ್ತೆ ವಿಧೇಯಕಗಳನ್ನು ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರತಿಪಕ್ಷ ಸಾಲಿನ ಎಲ್ಲ ಸಂಸದರನ್ನು ಅಮಾನತು ಮಾಡಿ, ಯಾವುದೇ ಚರ್ಚೆಯಿಲ್ಲದೆ ಪ್ರಮುಖ ವಿಧೇಯಕಗಳ್ನು ಅಂಗೀಕರಿಸುವ ಸರ್ಕಾರದ ತಂತ್ರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಕ್ರಿಮಿನಲ್ ಕಾನೂನು ವಿಧೇಯಕಗಳನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಹಲವು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ.

ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು, ವಕೀಲರು, ಅಪರಾಧಶಾಸ್ತ್ರಜ್ಞರು ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಇತರ ಮಧ್ಯಸ್ಥಗಾರರು ವಿಧೇಯಕಗಳ ಮೇಲೆ ದೊಡ್ಡ ಸಾರ್ವಜನಿಕ ಚರ್ಚೆಯನ್ನು ಕಾಂಗ್ರೆಸ್ ಬಯಸಿತ್ತು. ಆದರೆ, ಕೇಂದ್ರ ಸರ್ಕಾರವು ಇದಕ್ಕೆ ಅವಕಾಶವನ್ನು ನೀಡಲಿಲ್ಲ. ಹಳೆಯ ಕಾನೂನಿನಲ್ಲಿರುವ ಅನೇಕ ಸಂಗತಿಗಳನ್ನು ತೆಗೆದು ಹಾಕಿರುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ, ಹೊಸ ವಿಧೇಯಕದಲ್ಲಿ ಅವೇ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಈ ಸುದ್ದಿಯನ್ನೂ ಓದಿ: Parliament Session: ಇಂದು ಮತ್ತೆ 3 ಎಂಪಿ ಸಸ್ಪೆಂಡ್! 143ಕ್ಕೇರಿದ ಅಮಾನತು ಸಂಸದರ ಸಂಖ್ಯೆ

Exit mobile version